ವಿಟ್ಲ, ಜೂನ್. 13; ದಕ್ಷಿಣ ಕನ್ನಡ ಜಿಲ್ಲೆಯ ಅತಿ ದೊಡ್ಡ ತಾಲೂಕಾದ ಬಂಟ್ವಾಳವನ್ನು ವಿಭಜಿಸಿ, ಗಡಿನಾಡಿನ ಜನರ ಅನುಕೂಲಕ್ಕಾಗಿ ತಕ್ಷಣವೇ ‘ವಿಟ್ಲ ತಾಲೂಕು’ ರಚಿಸಬೇಕು ಎಂದು ಆಗ್ರಹಿಸಿ “ವಿಟ್ಲ ತಾಲೂಕು ಹಾಗೂ ವಿಟ್ಲ ವಿಧಾನಸಭಾ ಕ್ಷೇತ್ರ ಮರುಸ್ಥಾಪನಾ ಹೋರಾಟ ಸಮಿತಿ”ಯ ಪದಾಧಿಕಾರಿಗಳು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿದ್ದಾರೆ.



ಪ್ರಸ್ತುತ ಬಂಟ್ವಾಳ ತಾಲೂಕು 75 ಗ್ರಾಮಗಳನ್ನು ಹೊಂದಿದ್ದು, ಜಿಲ್ಲೆಯಲ್ಲೇ ಅತಿ ದೊಡ್ಡದಾಗಿದೆ. ಕರೋಪಾಡಿ, ಕನ್ಯಾನ, ಪೆರುವಾಯಿ, ಮಾಣಿಲ, ಕೇಪು, ಪುಣಚ, ಬಿಳಿಯೂರು, ಕುಳ, ವಿಟ್ಲ ಮೂಡೂರು, ಕೊಳ್ಳಾಡು, ಸಾಲೆತ್ತೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ತಮ್ಮ ಜಮೀನು ಹಾಗೂ ಇತರೆ ಸರ್ಕಾರಿ ಕೆಲಸಗಳಿಗಾಗಿ 25 ರಿಂದ 50 ಕಿಲೋಮೀಟರ್ ದೂರದ ಬಂಟ್ವಾಳ ತಾಲೂಕು ಕಚೇರಿಗೆ ಅಲೆಯಬೇಕಾಗಿದೆ. ಇದರಿಂದ ಬಡ ಜನರಿಗೆ ಹಣ ಮತ್ತು ಸಮಯದ ವ್ಯಯವಾಗುತ್ತಿದೆ. ಗಡಿನಾಡಿನ ಈ ಪ್ರದೇಶದ ಸಮಗ್ರ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ವಿಸ್ತರಣೆಗಾಗಿ ವಿಟ್ಲ ತಾಲೂಕು ರಚನೆ ಅತ್ಯಗತ್ಯವಾಗಿದೆ ಎಂದು ಸಮಿತಿ ಹೇಳಿದೆ.

ಬಂಟ್ವಾಳ ತಾಲೂಕಿನಿಂದ ಪ್ರಸ್ತಾವಿತ ಎಲ್ಲ ತಾಲೂಕನ್ನು ಪ್ರತ್ಯೇಕಿಸಿದರೂ ಬಂಟ್ವಾಳ ತಾಲೂಕು 41 ಗ್ರಾಮಗಳು ಹಾಗೂ 194860 (2011ರ ಜನಗಣತಿಯಂತೆ) ಜನಸಂಖ್ಯೆಯೊಂದಿಗೆ ವಿಕಾಲವಾಗಿಯೇ ಉಳಿಯುತ್ತದೆ. ಈ ಎಲ್ಲಾ ಮಾಹಿತಿಗಳನ್ನು, ಅಂಕಿ ಅಂಶಗಳನ್ನು ನೋಡುವಾಗ ಜನಸಂಖ್ಯೆಗೆ ಅನುಗುಣವಾಗಿ, ಭೌಗೋಳಿಕ ಪ್ರದೇಶದ ಅನುಗುಣವಾಗಿ, ಸರಕಾರಿ ಸೌಲಭ್ಯಗಳ ಲಭ್ಯತೆಯ ಅನುಗುಣವಾಗಿ ಕೇರಳ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಎಲ್ಲ ಪ್ರದೇಶವು ಕರ್ನಾಟಕದ ಸಮಗ್ರ ಅಭಿವೃದ್ಧಿಯ ಅನಿವಾರ್ಯವಾಗಿದೆ. ದೃಷ್ಟಿಯಿಂದ ತಾಲೂಕು ಆಗಲು ಅರ್ಹವಾಗಿದೆ.
ಈ ಹಿನ್ನೆಲೆಯಲ್ಲಿ ಘನ ಕರ್ನಾಟಕ ಸರ್ಕಾರಕ್ಕೆ ಈ ಬಗ್ಗೆ ವಿಶೇಷ ಒತ್ತಡ ತಂದು, ಶೀಘ್ರದಲ್ಲೇ ವಿಟ್ಲ ತಾಲೂಕು ಘೋಷಣೆ ಮಾಡುವಂತೆ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಶಾಸಕರಲ್ಲಿ ವಿನಂತಿಸಿದ್ದಾರೆ.

