ವಿಟ್ಲ: ಸೈಂಟ್ ರೀಟಾ ವಿದ್ಯಾ ಸಂಸ್ಥೆಯ 2026-27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಮಂತ್ರಿಮಂಡಲ ಪದಗ್ರಹಣ ಸಮಾರಂಭವು ಜೂನ್ 25ರಂದು ಶಾಲಾ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಅಶೋಕ್ ರಾಯನ್ ಕ್ರಾಸ್ತಾ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವ ಗುಣ, ಸೇವಾ ಮನೋಭಾವ ಹಾಗೂ ಜವಾಬ್ದಾರಿಯ ಮಹತ್ವವನ್ನು ಅರಿತುಕೊಳ್ಳುವುದು ಅಗತ್ಯ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಲಾ ಸಂಚಾಲಕರಾದ ವಂದನೀಯ ಮೈಕೆಲ್ ಲೋಬೊ ಅವರು ಅಧ್ಯಕ್ಷೀಯ ಭಾಷಣ ಮಾಡಿ, ಯುವ ನಾಯಕರು ಭವಿಷ್ಯದಲ್ಲಿ ದೇಶದ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಲು ಪ್ರೇರೇಪಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ವಂದನೀಯ ಅಮಿತ್ ಪ್ರಕಾಶ್ ರೊಡ್ರಿಗಸ್ ಅವರು ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಸ್ಯಾಶ್ಗಳನ್ನು ಪ್ರದಾನ ಮಾಡಿ ಪ್ರಮಾಣ ವಚನ ಬೋಧಿಸಿದರು.
ದೀಪ ಪ್ರಜ್ವಲನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ನಾಯಕ ಮಂಡಳಿ ಹಾಗೂ ಶಾಲಾ ಸಂಘಗಳಾದ ಪರಿಸರ ಸಂಘ, ವಿಜ್ಞಾನ ಸಂಘ, ಕಲೆ ಮತ್ತು ಸಾಹಿತ್ಯ ಸಂಘ, ಮಾನವೀಯತೆ ಸಂಘ ಮತ್ತು ಸಾಂಸ್ಕೃತಿಕ ಸಂಘಗಳನ್ನು ವಿನೂತನ ಶೈಲಿಯಲ್ಲಿ ಉದ್ಘಾಟಿಸಲಾಯಿತು.
ವೇದಿಕೆಯಲ್ಲಿ ಮುಖ್ಯಶಿಕ್ಷಕಿಯರಾದ ಸಿಸ್ಟರ್ ಮರೀನಾ, ಸಿಸ್ಟರ್ ಜಾನೆಟ್ ಹಾಗೂ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷರಾದ ಶ್ರೀಯುತ ವಲೇರಿಯನ್ ವೇಗಸ್ ಉಪಸ್ಥಿತರಿದ್ದರು. ವಿವಿಧ ಸಂಘಗಳ ವಿದ್ಯಾರ್ಥಿಗಳಿಂದ ಹಾಡು, ನೃತ್ಯ ಹಾಗೂ ಪ್ರಹಸನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡು ಗಮನ ಸೆಳೆದವು. ಶಿಕ್ಷಕಿಯರಾದ ಶ್ರೀಮತಿ ಸಂಧ್ಯಾ ಎಂ. ಡಿ. ಹಾಗೂ ಶ್ರೀಮತಿ ಸಂಧ್ಯಾ ಕೆ. ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಿರ್ವಹಿಸಿದರು.

























