ಮಂಗಳೂರು, ಜು.24: ಮಂಗಳೂರು ನಗರದ ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಮತ್ತು ಪುಣ್ಯಕ್ಷೇತ್ರದಲ್ಲಿ ಆ. 10ರಂದು ವಾರ್ಷಿಕ ಮಹೋತ್ಸವ ನಡೆಯಲಿದೆ. ಶುಕ್ರವಾರ ಬೋಂದೆಲ್ ಚರ್ಚ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪುಣ್ಯಕ್ಷೇತ್ರದ ನಿರ್ದೇಶಕ ಹಾಗೂ ಧರ್ಮಗುರು ವಂ| ಬೇಸಿಲ್ ವಾಸ್ ಅವರು, ಹಬ್ಬದ ಪೂರ್ವಭಾವಿಯಾಗಿ ಆ. 1ರಿಂದ 9ರವರೆಗೆ ನೊವೆನಾ ಪ್ರಾರ್ಥನೆಗಳು ಬೆಳಗ್ಗೆ 10.30 ಹಾಗೂ ಸಂಜೆ 5.30ಕ್ಕೆ ನಡೆಯಲಿವೆ. ಆ.1ರಂದು ಬೆಳಗ್ಗೆ 10ಕ್ಕೆ ಸಿಟಿ ವಲಯದ ಪ್ರಧಾನ ಗುರು ವಂ| ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ನೊವೆನಾ ಪ್ರಾರ್ಥನೆಗೆ ಚಾಲನೆ ನೀಡಲಿದ್ದಾರೆ ಎಂದರು.

ಆ. 8ರಂದು ಮಧ್ಯಾಹ್ನ 3ರಿಂದ ಸಂಜೆ 5:30ರವರೆಗೆ ಬ್ರದರ್ ಪ್ರಕಾಶ್ ಅವರ ನೇತೃತ್ವದಲ್ಲಿ ‘ಸ್ತುತಿ ಮತ್ತು ಆರಾಧನೆ’ ನಡೆಯಲಿದೆ. ಸಂಜೆ 6:45ರಿಂದ ರೋಗಿಗಳಿಗಾಗಿ ವಿಶೇಷ ಗುಣಪಡಿಸುವಿಕೆಯ ಪ್ರಾರ್ಥನೆ ಹಾಗೂ ಮಕ್ಕಳಿಗಾಗಿ ವಿಶೇಷ ಪ್ರಾರ್ಥನಾವಿಧಿ ನಡೆಯಲಿದೆ. ಇದೇ ಮೊದಲ ಬಾರಿಗೆ, ಆ. 9ರಂದು ಮಧ್ಯಾಹ್ನ 12 ಗಂಟೆಗೆ ಮಲಯಾಳಂ ಭಾಷೆಯಲ್ಲಿ ಪವಿತ್ರ ಬಲಿಪೂಜೆಯನ್ನು ನೆರವೇರಿಸಲಾಗುವುದು ಎಂದರು.
ಜು. 25ರಂದು ಬೋಂದೆಲ್ ನಿಂದ ಮೇರಿಹಿಲ್ ವರೆಗೆ ಸ್ವಚ್ಛತಾ ಕಾರ್ಯ ನಡೆಯಲಿದೆ. ಜು. 26ರಂದು ಸಂಜೆ 4.30ಕ್ಕೆ ಮೌಂಟ್ ಕಾರ್ಮೆಲ್ ಶಾಲಾ ಮೈದಾನದಿಂದ ಹಸಿರು ಹೊರೆ ಕಾಣಿಕೆ ಮೆರವಣಿಗೆ ಆಯೋಜಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಅವರು ಚಾಲನೆ ನೀಡಲಿದ್ದಾರೆ ಎಂದರು.
ಸಹಾಯಕ ಧರ್ಮಗುರು ವಂ| ಲಾರೆನ್ಸ್ ಕುಟಿನ್ಹಾ, ಸಂತ ಲಾರೆನ್ಸ್ ಶಾಲೆಯ ಪ್ರಾಂಶುಪಾಲ ವಂ| ಪೀಟರ್ ಗೊನ್ಸಾಲ್ವಿಸ್, ಪಾಲನ ಸಮಿತಿ ಉಪಾಧ್ಯಕ್ಷ ವಂ| ಜೋನ್ ಡಿಸಿಲ್ವಾ, ಪುಣ್ಯಕ್ಷೇತ್ರದ ಸಂಯೋಜಕ ಜೇಸನ್ ಫೆರ್ನಾಂಡಿಸ್, ಮಾಧ್ಯಮ ಸಂಯೋಜಕಿ ಮೀನಾ ಬರ್ಬೊಜಾ, ಮಾಧ್ಯಮ ವಕ್ತಾರ ಎಲಿಯಾಸ್ ಫೆರ್ನಾಂಡಿಸ್ ಇದ್ದರು. ಇದೇ ಸಂದರ್ಭದಲ್ಲಿ ಹಬ್ಬದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.