ಮಂಗಳೂರು,ಸೆ.3 :ಜನರ ಸೇವೆಯೇ ಜನಾರ್ದನ ಸೇವೆ ಎಂಬ ತತ್ವದಲ್ಲಿ ಅದಮ್ಯ ವಿಶ್ವಾಸ ಇಟ್ಟುಕೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು, ಪ್ರಜಾಸೇವಾ ಇಲಾಖೆಯನ್ನು ಹೊಸದಾಗಿ ಪರಿಚಯಿಸುವ ಮೂಲಕ ಸರ್ಕಾರವನ್ನೇ ರಾಜ್ಯದ ಜನಸಾಮಾನ್ಯರ ಮನೆ-ಬಾಗಿಲಿಗೆ ಕೊಂಡೊಯ್ದು, ಅವರ ದುಃಖ-ದುಮ್ಮಾನ, ದೂರು, ನೋವುಗಳಿಗೆ ಕಾನೂನಿನ ಚೌಕಟ್ಟಿನಡಿ ಸ್ಥಳದಲ್ಲೇ ಸೂಕ್ತ ಪರಿಹಾರ ಕಲ್ಪಿಸುವ ಜನಸ್ನೇಹಿ ಆಡಳಿತಕ್ಕೆ ಹೊಸ ಆಂದೋಲನವನ್ನೇ ಆರಂಭಿಸಿದ್ದು, ರಾಜ್ಯದ ಜನತೆಯಲ್ಲಿ ಹೊಸ ಆಶಾಕಿರಣ ಮೂಡಿಸಿದೆ.

ಪುತ್ತೂರು ಪುರಭವನದಲ್ಲಿ ಪ್ರಜಾಸೇವಾ ಆಂದೋಲನಾ ಕಾಠ್ಯಕ್ರಮ
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಜಾಸೇವಾ ಆಂದೋಲನಾ ಕಾಯಕ್ರಮ ಸೆಪ್ಟೆಂಬರ್ 5 ರಂದು ಬೆಳಿಗ್ಗೆ 11 ಗಂಟೆಗೆ ಪುತ್ತೂರು ಪುರಭವನದಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ನೇತೃತ್ವದಲ್ಲಿ ಕಾಠ್ಯಕ್ರಮ ಆಯೋಜಿಸಲಾಗಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಜಾಸೇವಾ ಅಭಿಯಾನ ಸಭೆಗಳ ಆಯೋಜನೆ:
ಜನರ ಮನೆ ಬಾಗಿಲಿಗೆ ಆಡಳಿತ ವ್ಯವಸ್ಥೆಯನ್ನು ಕಲ್ಪಿಸುವುದು ಹೊಸದಾಗಿ ರಚಿಸಿದ ಪ್ರಜಾಸೇವಾ ಇಲಾಖೆಯ ಉದ್ದೇಶವಾಗಿದೆ. ಪ್ರತಿ ಶನಿವಾರ ತಾಲ್ಲೂಕು/ ಹೋಬಳಿ ಮಟ್ಟದ ಪ್ರಜಾಸೇವಾ ಅಭಿಯಾನ ಸಭೆಗಳನ್ನು ಪರ್ಯಾಯವಾಗಿ ರಾಜ್ಯಾದ್ಯಂತ ನಡೆಸಲು ಕ್ರಮವಹಿಸಲಾಗಿರುತ್ತದೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸಭೆ ನಡೆಯುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರದಂದು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು/ಹೋಬಳಿ ಮಟ್ಟದಲ್ಲಿ ಸಭೆಯನ್ನು ಆಯೋಜಿಸಲಾಗುತ್ತದೆ. 3-4 ತಿಂಗಳಲ್ಲಿ ಎಲ್ಲಾ ತಾಲ್ಲೂಕು/ಹೋಬಳಿ ಮಟ್ಟದ ಸಭೆಗಳನ್ನು ಏರ್ಪಡಿಸಲು ಏಕೀಕೃತ ವೇಳಾಪಟ್ಟಿಯನ್ನು ತಯಾರು ಮಾಡಲಾಗಿರುತ್ತದೆ.
ಸಾರ್ವಜನಿಕರಿಗೆ ಮುಂಗಡ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆ ವ್ಯವಸ್ಥೆ:
ಪ್ರಜಾಸೇವಾ ಅಭಿಯಾನದಡಿ ಸಭೆಗಳ ಕುರಿತು ಸಾರ್ವಜನಿಕರಿಗೆ ಕನಿಷ್ಠ 15 ದಿನಗಳ ಮುಂಚಿತವಾಗಿ ವಿತರಿಸಿ ಮಾಹಿತಿ ನೀಡಲಾಗುತ್ತದೆ. ಕರಪತ್ರಗಳಲ್ಲಿ ಪೂರ್ವಮುದ್ರಿತ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳ ಪರಿಶೀಲನಾ ಪಟ್ಟಿಯನ್ನು ಒಳಗೊಂಡಿರುತ್ತದೆ. ಅಲ್ಲದೆ, ತಾಲ್ಲೂಕು ಅಥವಾ ಹೋಬಳಿ ವ್ಯಾಪ್ತಿಯ ನಿವಾಸಿಗಳಿಗೆ ಸಭೆಯ ದಿನಾಂಕ, ಸಮಯ, ಸ್ಥಳ ಹಾಗೂ ಅಧ್ಯಕ್ಷತೆ ವಹಿಸುವ ಜನಪ್ರತಿನಿಧಿಯ ವಿವರಗಳನ್ನು ತಿಳಿಸಲು ಕೃತಕ ಬುದ್ಧಿಮತ್ತೆ ಆಧಾರಿತ ಕಾಲ್ ಸೆಂಟರ್ ಮೂಲಕ ಹೊರಹೋಗುವ ಕರೆಗಳನ್ನು ಮಾಡಲಾಗುತ್ತದೆ. ಸಾರ್ವಜನಿಕರು ತಮ್ಮ ಅರ್ಜಿಗಳು ಹಾಗೂ ಅಹವಾಲುಗಳನ್ನು ಮುಂಚಿತವಾಗಿ ಗ್ರಾಮ ಒನ್ ಕೇಂದ್ರದಲ್ಲಿಯೇ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಪ್ರತಿ ಪ್ರಜಾಸೇವಾ ಅಭಿಯಾನ ಸಭೆಯ ಸ್ಥಳದಲ್ಲಿ ಗ್ರಾಮ ಒನ್ ಮಳಿಗೆಗಳನ್ನು ಸ್ಥಾಪಿಸಿ, ಕಂಪ್ಯೂಟರ್/ಲ್ಯಾಪ್ಟಾಪ್, ಪ್ರಿಂಟರ್ ಹಾಗೂ ಇಂಟರ್ನೆಟ್ ಸೌಲಭ್ಯಗಳ ಮೂಲಕ ಸಾರ್ವಜನಿಕರಿಗೆ ನೇರವಾಗಿ ಆನ್ಲೈನ್ನಲ್ಲಿ ಅರ್ಜಿ ಹಾಗೂ ಅಹವಾಲುಗಳನ್ನು ಸಲ್ಲಿಸಲು ವ್ಯವಸ್ಥೆ ಮಾಡಲಾಗುತ್ತದೆ.

ಪ್ರಜಾಸೇವಾ ಅಭಿಯಾನ ಸಭೆಯ ದಿನದಂದು ಅಹವಾಲುಗಳನ್ನು ಎರಡು ಪ್ರತ್ಯೇಕ ಸರತಿಗಳಲ್ಲಿ ನಿರ್ವಹಿಸಲಾಗುತ್ತದೆ. ಮೊದಲನೆಯದು ಹೊಸ ಅಹವಾಲುಗಳ ಸರತಿ. ಇದರಲ್ಲಿ ಸಾರ್ವಜನಿಕರು ಮೊದಲ ಬಾರಿಗೆ ನೋಂದಾಯಿಸುವ ಅಹವಾಲುಗಳನ್ನು ದಾಖಲಿಸಲಾಗುತ್ತದೆ. ಎರಡನೆಯದು ಪರಿಹಾರವಾಗದ ಅಥವಾ ಅಸಮಾಧಾನಕರವಾಗಿ ಪರಿಹರಿಸಲಾದ ಅಹವಾಲುಗಳ ಸರತಿ. ಈಗಾಗಲೇ ಸಕಾಲ ಅಥವಾ ಏಕೀಕೃತ ದೂರು ನಿವಾರಣೆ ತಂತ್ರಾಂಶದಲ್ಲಿ ನೋಂದಾಯಿಸಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ದೊರೆಯದ ಅಥವಾ 21 ದಿನಗಳ ನಂತರವೂ ಸಮರ್ಪಕ ಪರಿಹಾರ ದೊರೆಯದ ಅಹವಾಲುಗಳನ್ನು ಈ ಸರತಿಯಲ್ಲಿ ಪರಿಗಣಿಸಲಾಗುತ್ತದೆ. ಈ ಸರತಿಯನ್ನು ಬಳಸಲು ಸಾರ್ವಜನಿಕರು ತಮ್ಮ ಸಕಾಲ, CSC ಅಥವಾ IPGRS ಸಂಖ್ಯೆಯನ್ನು ನೀಡಬೇಕಾಗುತ್ತದೆ. ಸಮಯದ ಅಭಾವವಿದ್ದಲ್ಲಿ ಇಂತಹ ಅಹವಾಲುದಾರರಿಗೆ ಸಭೆಯ ಅಧ್ಯಕ್ಷತೆ ವಹಿಸುವ ಜನಪ್ರತಿನಿಧಿಯೊಂದಿಗೆ ನೇರವಾಗಿ ಸಂವಹನ ನಡೆಸಲು ಆದ್ಯತೆ ನೀಡಲಾಗುತ್ತದೆ.

ಸ್ಥಳದಲ್ಲಿಯೇ ಸೇವೆ ಹಾಗೂ ಅಹವಾಲುಗಳ ಪರಿಹಾರ:
ಪ್ರಜಾಸೇವಾ ಅಭಿಯಾನ ಸಭೆಯ ಸಂದರ್ಭದಲ್ಲಿ ಅರ್ಹತೆ ಹೊಂದಿರುವ ಯೋಜನಾ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಸ್ಥಳದಲ್ಲಿಯೇ ವಿತರಿಸಬಹುದಾಗಿದೆ. ಅದೇ ರೀತಿ ಈಗಾಗಲೇ ಪರಿಹರಿಸಲಾದ ಅಹವಾಲುಗಳಿಗೆ ಸಂಬಂಧಿಸಿದಂತೆ ಪರಿಹಾರದ ಸೂಕ್ತ ಅನುಮೋದನೆ/ದೃಢೀಕರಣ ಪತ್ರವನ್ನು ಸ್ಥಳದಲ್ಲಿಯೇ ನೀಡಲಾಗುತ್ತದೆ.
ಅರ್ಜಿಗಳು ಹಾಗೂ ಅಹವಾಲುಗಳ ಪ್ರಗತಿಯನ್ನು ಸಾರ್ವಜನಿಕರು ತಿಳಿದುಕೊಳ್ಳಲು ನೈಜ-ಸಮಯದ ಸ್ಥಿತಿ ಪರಿಶೀಲನಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಇದರ ಮೂಲಕ ಅರ್ಜಿದಾರರು ತಮ್ಮ ಅರ್ಜಿ ಅಥವಾ ಅಹವಾಲಿನ ಪ್ರಗತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಜನ ಜಾಗೃತಿಯಿಂದ ಜನರ ಸಹಭಾಗಿತ್ವ ಹಾಗೂ ಪಾರದರ್ಶಕತೆ:
ಪ್ರತಿ ಸಭಾ ಸ್ಥಳದಲ್ಲಿ ವಿವಿಧ ಇಲಾಖೆಗಳ ಮಳಿಗೆಗಳನ್ನು ಸ್ಥಾಪಿಸಿ. ಸಂಬಂಧಿಸಿದ ಸರ್ಕಾರಿ ಯೋಜನೆಗಳ ಅರ್ಹತಾ ಮಾನದಂಡಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ಇಲಾಖಾವಾರು, ಸಾರ್ವಜನಿಕರಿಗೆ ತಿಳಿಸಲಾಗುತ್ತದೆ. ಇದರ ಜೊತೆಗೆ, ಉತ್ತಮ ಕಾರ್ಯಪದ್ಧತಿ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಸಭೆಯಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಮೂಲಭೂತ ವೈದ್ಯಕೀಯ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತದೆ.
ಪ್ರತಿ ಪ್ರಜಾಸೇವಾ ಅಭಿಯಾನ ಸಭೆಯ ನಂತರ ಸಭೆಯ ಸಂಪೂರ್ಣ ವಿವರಗಳನ್ನು ಪೋರ್ಟಲ್ನಲ್ಲಿ ದಾಖಲಿಸಲಾಗುತ್ತದೆ. ಸಭೆಯ ಪ್ರಮುಖ ಅಂಶಗಳು, ಛಾಯಾಚಿತ್ರಗಳು, ವೀಡಿಯೋಗಳು ಹಾಗೂ ಫಲಾನುಭವಿಗಳ ಅಭಿಪ್ರಾಯಗಳನ್ನು ipgrs.karnataka.gov.in ಪೋರ್ಟಲ್ನಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ #prajasevaabhiyana ಮೂಲಕ ಅಪ್ಲೋಡ್ ಮಾಡಲಾಗುತ್ತದೆ.
ಏಕೀಕೃತ ವ್ಯವಸ್ಥೆ:
ಕರ್ನಾಟಕ ರಾಜ್ಯದ ವಿವಿಧ ಇಲಾಖೆಗಳ ಸೇವೆಗಳಿಗೆ ಮತ್ತು ಯೋಜನೆಗಳಿಗೆ ಸಂಬಂಧಿಸಿದ ಸಾರ್ವಜನಿಕ ಕುಂದುಕೊರತೆಗಳ/ ದೂರುಗಳ ನಿವಾರಣೆಗಾಗಿ ನಾಗರೀಕರು ಅಲೆದಾಡದೆ ಇರಲು, ಕರ್ನಾಟಕ ಸರ್ಕಾರವು, ಪ್ರಜಾಸೇವೆ ಇಲಾಖೆಯಡಿಯಲ್ಲಿ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (Integrated Public Grievance Redressal System) ಎಂಬ ಬಹು-ಮುಖಿಯಾದ, ದತ್ತಾಂಶ ಆಧಾರಿತ ಮತ್ತು ಕಾಗದರಹಿತ ತಂತ್ರಾಂಶ ವ್ಯವಸ್ಥೆಯನ್ನು ರೂಪಿಸಿದೆ. ನಾಗರೀಕರು ಸಹಾಯವಾಣಿ ಸಂಖ್ಯೆ: 1902 ಅಥವಾ https://ipgrs.karnataka.gov.in “ ដដជ ដួយ មួយ ដ ತಮ್ಮ ಕುಂದುಕೊರತೆಗಳನ್ನು ದಾಖಲಿಸಬಹುದು. ಅಲ್ಲದೆ, ನಾಗರೀಕರಿಂದ ಕುಂದುಕೊರತೆಗಳನ್ನು / ದೂರುಗಳನ್ನು ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನವನ್ನು ಉಪಯೋಗಿಸಿ ಮೂರು ಹಂತದ ದೂರು ನಿವಾರಣಾ ವ್ಯವಸ್ಥೆಯ ಮೂಲಕ ಸಾರ್ವಜನಿಕ ಸಮಸ್ಯೆಗೆ ಪರಿಹಾರ ನೀಡಲಾಗುತ್ತಿದೆ.
ಪ್ರತಿ ಬುಧವಾರದ ಮೂರು ಹಂತದ ಪರಿಶೀಲನಾ ವ್ಯವಸ್ಥೆ:
ಪ್ರಜಾಸೇವಾ ಅಭಿಯಾನ ಸಭೆಗಳಲ್ಲಿ ಸ್ವೀಕರಿಸಲಾದ ಎಲ್ಲಾ ಅರ್ಜಿಗಳು ಮತ್ತು ಅಹವಾಲುಗಳನ್ನು ಒಂದೇ ಸಾಮಾನ್ಯ ವಾರದಲ್ಲಿ ವ್ಯವಸ್ಥಿತವಾಗಿ ಪರಿಶೀಲಿಸಲಾಗುತ್ತದೆ. ಈ ಪರಿಶೀಲನೆಯನ್ನು ಪ್ರತಿ ಬುಧವಾರ ಮೂರು ಹಂತಗಳಲ್ಲಿ ನಡೆಸಲಾಗುತ್ತದೆ.
ಬೆಳಿಗ್ಗೆ 9 ರಿಂದ 11 ರವರೆಗೆ ತಾಲ್ಲೂಕು ಮಟ್ಟದ ಪರಿಶೀಲನೆ ನಡೆಸಲಾಗುತ್ತದೆ. ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಹಂತದಲ್ಲಿ ಸ್ವೀಕರಿಸಿದ ಅರ್ಜಿಗಳು ಮತ್ತು ಅಹವಾಲುಗಳ ಸ್ಥಿತಿಯನ್ನು ತಮ್ಮ ಅಧಿಕಾರಿಗಳೊಂದಿಗೆ ತಂತ್ರಾಂಶಗಳನ್ನು ಬಳಸಿ ಅವರ ಹಂತದಲ್ಲಿ ನಿವಾರಣೆ ಆಗದೆ ಇರುವ ಅರ್ಜಿಗಳನ್ನು ಉಪವಿಭಾಗಾಧಿಕಾರಿಗಳಿಗೆ ಇ-ಕಛೇರಿ ಮೂಲಕ ಮಂಡಿಸುತ್ತಾರೆ.
ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಉಪವಿಭಾಗ ಮಟ್ಟದ ಪರಿಶೀಲನೆ ನಡೆಸಲಾಗುತ್ತದೆ. ಉಪವಿಭಾಗದ ಸಹಾಯಕ ಆಯುಕ್ತರು ತಾಲ್ಲೂಕು ಮಟ್ಟದಿಂದ ಬಂದ ಮಾಹಿತಿಯನ್ನು ಕ್ರೋಢೀಕರಿಸಿ ಪರಿಶೀಲಿಸುತ್ತಾರೆ. ತಮ್ಮ ಹಂತದಲ್ಲಿ ನಿವಾರಣೆ ಆಗದೆ ಇರುವ ವಿಷಯ/ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತಾರೆ.
ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಜಿಲ್ಲಾ ಮಟ್ಟದ ಪರಿಶೀಲನೆ ನಡೆಯಲಾಗುತ್ತದೆ. ಜಿಲ್ಲಾಧಿಕಾರಿಗಳು ಉಪವಿಭಾಗ ಮಟ್ಟದಿಂದ ಬಂದ ಮಾಹಿತಿಯನ್ನು ಕ್ರೋಢೀಕರಿಸಿ ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸುತ್ತಾರೆ.
ಜಿಲ್ಲಾಧಿಕಾರಿಗಳು ಅಗತ್ಯವಿದ್ದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಖುದ್ದಾಗಿ ಹಾಜರಾಗುವಂತೆ ಸೂಚಿಸಬಹುದು. ಉಪವಿಭಾಗ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ವೀಡಿಯೋ ಅಥವಾ ಆಡಿಯೋ ಕಾನ್ಸರೆನ್ಸ್ ಮೂಲಕ ಭಾಗವಹಿಸಲು ಅವಕಾಶ ನೀಡಬಹುದು. ಪ್ರತಿ ಹಂತದಲ್ಲಿಯೂ ಪರಿಹಾರದ ಬಗ್ಗೆ ಅಸಮಾಧಾನ ಹೊಂದಿರುವ ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಯ ಮುಂದೆ ಖುದ್ದಾಗಿ ಹಾಜರಾಗಿ ತಮ್ಮ ಅಹವಾಲನ್ನು ಮಂಡಿಸಲು ಅವಕಾಶವಿರುತ್ತದೆ.
ಈ ವ್ಯವಸ್ಥೆಯು ಈಗಾಗಲೇ ಜಾರಿಯಲ್ಲಿರುವ ವಾರದ ಜಿಲ್ಲಾಧಿಕಾರಿ ಮಟ್ಟದ ಪರಿಶೀಲನಾ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶ ಹೊಂದಿದ್ದು, ಅದಕ್ಕೆ ಯಾವುದೇ ರೀತಿಯ ವಿರುದ್ಧತೆಯನ್ನು ಉಂಟುಮಾಡದೆ, ಒಂದೇ ದಿನದಲ್ಲಿ ಕ್ರಮವಾಗಿ ಮೂರು ಹಂತಗಳ ಪರಿಶೀಲನಾ ಸಭೆಗಳನ್ನು ನಡೆಸುವ ವ್ಯವಸ್ಥೆಯನ್ನು ರೂಪಿಸುತ್ತದೆ. ಆದುದರಿಂದ ಶನಿವಾರ ಹಾಗೂ ಬುಧವಾರ ರಾಜ್ಯ/ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಬೇರೆ ಯಾವ ಸಭೆಯನ್ನು ನಡೆಸಲು ನಿಷೇಧಿಸಲಾಗಿದೆ.
ಮೇಲ್ಮನವಿ, ಹೊಣೆಗಾರಿಕೆ ಹಾಗೂ ವರದಿ ಸಲ್ಲಿಕೆ:
ನಿಗದಿತ ಅವಧಿಯೊಳಗೆ ವಿಲೇವಾರಿಯಾಗದ ಅರ್ಜಿಗಳು ಮತ್ತು ಅಹವಾಲುಗಳನ್ನು ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ಸ್ವಯಂಚಾಲಿತವಾಗಿ ಮೇಲ್ದರ್ಜೆಗೆ ವರ್ಗಾಯಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಈ ಮೂಲಕ ಬಾಕಿ ಉಳಿದಿರುವ ಅರ್ಜಿಗಳು ಮತ್ತು ಅಹವಾಲುಗಳ ಬಗ್ಗೆ ಸಂಬಂಧಿಸಿದ ಇಲಾಖೆಯ ಉನ್ನತ ಮಟ್ಟದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಪ್ರತಿ ಜಿಲ್ಲೆಗೆ ಒಬ್ಬ ಸರ್ಕಾರದ ಕಾರ್ಯದರ್ಶಿಯವರನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಗಿ ನೇಮಿಸಲಾಗಿದೆ. ಅವರು ಪ್ರತಿ ಮೊದಲನೇ ಹಾಗೂ ಮೂರನೇ ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯುವ ಸಭೆಗೆ ಪೂರ್ವಭಾವಿ ಸಿದ್ಧತೆ ಹಾಗೂ ಮೇಲ್ವಿಚಾರಣೆ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ನಿವಾರಣೆ ಆಗದೆ ಇರುವ ವಿಷಯಗಳನ್ನು ರಾಜ್ಯ ಮಟ್ಟದ ಸಹೋದ್ಯೋಗಿಗಳಾದ ಇತರ ಇಲಾಖೆ ಕಾರ್ಯದರ್ಶಿಗಳೊಂದಿಗೆ ಪರಾಮರ್ಶಿಸಿ ಹಾಗೂ ಅಹವಾಲುಗಳನ್ನು ಇ-ಕಛೇರಿ ಮೂಲಕ ಅವರಿಗೆ ತಲುಪಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪೋರ್ಟಲ್ ಅನ್ನು ಸ್ಥಾಪಿಸಲಾಗಿದೆ. ಇದನ್ನು ಮುಖ್ಯ ಕಾರ್ಯದರ್ಶಿಯವರು ಪ್ರತಿ ತಿಂಗಳು ನಡೆಯುವ ಎಲ್ಲಾ ಕಾರ್ಯದರ್ಶಿಗಳ ಸಭೆಯಲ್ಲಿ ಪರಿಶೀಲಿಸುತ್ತಾರೆ.
ಅಲ್ಲದೆ, ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಪರಿಶೀಲನಾ ಸಭೆಯಲ್ಲಿ ಜಿಲ್ಲೆಗಳಲ್ಲಿ ಬಾಕಿ ಉಳಿದಿರುವ ಅರ್ಜಿಗಳು ಮತ್ತು ಅಹವಾಲುಗಳ ವಿಲೇವಾರಿಯ ಪ್ರಗತಿಯನ್ನು ಅವಲೋಕಿಸಲಾಗುತ್ತದೆ. ಮಾತ್ರವಲ್ಲ, ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆ/ಹೋಬಳಿ/ತಾಲ್ಲೂಕು/ಇಲಾಖೆವಾರು ಬಾಕಿ ಇರುವ ಸಮಸ್ಯೆಗಳನ್ನು ಚರ್ಚಿಸಿ ನೀತಿ ಅಥವಾ ಯೋಜನೆಗಳ ಪರಿಷ್ಕರಣೆ ಬಗ್ಗೆ ಅಗತ್ಯ ವಿಮರ್ಶೆಗಳನ್ನು ನಡೆಸುತ್ತಾರೆ.
ಒಟ್ಟಾರೆಯಾಗಿ, ಮಾನ್ಯ ಮುಖ್ಯಮಂತ್ರಿಗಳ ನೇತೃತ್ವ ಹಾಗೂ ನಿರ್ದೇಶನದಂತೆ ಪ್ರಜಾಸೇವಾ ಅಭಿಯಾನ ಸಭೆಗಳ ಉದ್ದೇಶವು ಸಾರ್ವಜನಿಕರ ಹತ್ತಿರ ಇಡೀ ಆಡಳಿತ ತಂತ್ರವನ್ನು ವಿಕೇಂದ್ರೀಕರಿಸಿ, ಪ್ರಜಾಪ್ರಭುತ್ವವನ್ನು ಸಂವಿಧಾನದ ಆಶಯದಂತೆ ಜನಪರ ಸರ್ಕಾರ ನಡೆಸಲು ಒಂದು ವಿನೂತನ ಪ್ರಯಾಸವಾಗಿದೆ. ಈ ಮೂಲಕ ಅಹವಾಲುಗಳನ್ನು ನೇರವಾಗಿ ಆಲಿಸುವುದರ ಜೊತೆಗೆ, ಅರ್ಜಿಗಳ ತ್ವರಿತ ವಿಲೇವಾರಿ. ಸ್ಥಳದಲ್ಲಿಯೇ ಸೇವೆ ಒದಗಿಸುವಿಕೆ, ಅಹವಾಲುಗಳ ನಿರಂತರ ಪರಿಶೀಲನೆ. ಅಧಿಕಾರಿಗಳ ಹೊಣೆಗಾರಿಕೆ ಮತ್ತು ನಾಗರಿಕರಿಗೆ ಪಾರದರ್ಶಕ ವರದಿ ನೀಡುವ ವ್ಯವಸ್ಥೆಯನ್ನು ಖಚಿತಪಡಿಸುವುದಾಗಿದೆ.
ಜನರಿಂದ, ಜನರಿಗಾಗಿ, ಜನರಿಗೋಸ್ಕರ ರೂಪಿಸಿರುವ ಸರ್ಕಾರದ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಲು ಈ ವೇದಿಕೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
