canaratvnews

ಮಂಗಳೂರು-ಮೂಡಬಿದ್ರೆ ಹೆದ್ದಾರಿ ದುರಸ್ತಿ: 30 ದಿನ ಬದಲಿ ರಸ್ತೆ ಉಪಯೋಗಿಸಲು ಸಲಹೆ

ಮಂಗಳೂರು: ತಾಲೂಕಿನ ಬಜ್ಪೆ ಎಡಪದವಿನ ಮಚ್ಚೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕಾಮಗಾರಿ ನಡೆಯುತ್ತಿದ್ದು, ಇದೀಗ ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಹಾಗೂ ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ವಾಹನಗಳ ಓಡಾಟಕ್ಕೆ ಇದ್ದ ಹಳೆ ರಸ್ತೆಯು ಘನ ವಾಹನಗಳ ಓಡಾಟದಿಂದಾಗಿ ಬಿರುಕು ಬಿಟ್ಟು ಅಲ್ಲಲ್ಲಿ ಕುಸಿಯಲು ಪ್ರಾರಂಭಿಸಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಫೆ. 12ರಿಂದ ಮಾ.13ರವರೆಗೆ 30 ದಿನಗಳ ಕಾಲ ರಸ್ತೆ ದುರಸ್ತಿ ಕಾಮಗಾರಿ ನಡೆಯಲಿದೆ.

ರಸ್ತೆ ದುರಸ್ತಿ ಕಾಮಗಾರಿ ನಡೆಯುವ ಸಮಯ ಸಾರ್ವಜನಿಕ ಹಿತದೃಷ್ಠಿಯಿಂದ ಮಂಗಳೂರು ಕಡೆಯಿಂದ ಮೂಡುಬಿದಿರೆ ಕಡೆಗೆ ಮತ್ತು ಮೂಡುಬಿದಿರೆ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ತಾತ್ಕಾಲಿಕವಾಗಿ ಈ ಕೆಳಗಿನ ಬದಲಿ ರಸ್ತೆಗಳನ್ನು ಉಪಯೋಗಿಸಲು ಮಂಗಳೂರು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

👉1) ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಬರುವಂತಹ ಲಾರಿಗಳು ವಿದ್ಯಾಗಿರಿ ಮುಲ್ಕಿ ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿ ಕಿನ್ನಿಗೋಳಿ ರಸ್ತೆಯಲ್ಲಿ ಸಂಚರಿಸಿ ಪಕ್ಷಿಕೆರೆ ಕ್ರಾಸ್ ನಲ್ಲಿ ಬಲಕ್ಕೆ ತಿರುಗಿ ಮುಲ್ಕಿ ಜಂಕ್ಷನ್ – ಸುರತ್ಕಲ್ ಮೂಲಕ ಮಂಗಳೂರು ಕಡೆಗೆ ಸಂಚರಿಸುವುದು ಹಾಗೂ ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಸಂಚರಿಸುವ ಲಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುವುದು.

👉 2) ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಇತರ ಎಲ್ಲಾ ಲಘುವಾಹನಗಳು ವಿದ್ಯಾಗಿರಿ ಮುಲ್ಕಿ ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿ ಕಿನ್ನಿಗೋಳಿ ರಸ್ತೆಯಲ್ಲಿ ಸಂಚರಿಸಿ ಮೂರುಕಾವೇರಿ- ಕಟೀಲು-ಪೆರ್ಮುದೆ-ಬಜಪೆ- ಮೂಲಕ ಅಥವಾ ಪಕ್ಷಿಕೆರೆ ಕ್ರಾಸ್ ನಲ್ಲಿ ಎಡಕ್ಕೆ ತಿರುಗಿ ಹಳೆಯಂಗಡಿ- ಸುರತ್ಕಲ್ ಮೂಲಕ ಮಂಗಳೂರು ಕಡೆಗೆ ಸಂಚರಿಸುವುದು ಹಾಗೂ ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಸಂಚರಿಸುವ ಇತರ ಎಲ್ಲಾ ಲಘುವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುವುದು.

👉 3) ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಬರುವ ಸಾರ್ವಜನಿಕ ರೂಟ್ ಬಸ್ಸುಗಳು ಮತ್ತು ಸ್ಥಳೀಯರ ಲಘು ವಾಹನಗಳು ಮಾತ್ರ ದಡ್ಡಿ ಕ್ರಾಸ್ ಬಳಿ ಬಲಕ್ಕೆ ತಿರುಗಿ – ಪುಮಾರ್ ಪದವು ಕ್ರಾಸ್ – ಮಂಜನ ಕಟ್ಟೆ ಕ್ರಾಸ್ – ಅರ್ಜುನಕೋಡಿ – ಈಶ್ವರಕಟ್ಟೆ ಕ್ರಾಸ್ – ಮುಚ್ಚೂರು ಕ್ರಾಸ್ ಬಳಿ ಬಲಕ್ಕೆ ತಿರುಗಿ ಕೈಕಂಡ ಗುರುಪುರ ಮೂಲಕ ಮಂಗಳೂರು ಕಡೆಗೆ ಸಂಚರಿಸುವುದು.

👉 4) ಮಂಗಳೂರು ಕಡೆಯಿಂದ ಗುರುಪುರ-ಕೈಕಂಬ ಮೂಲಕ ಮೂಡಬಿದ್ರೆ ಕಡೆಗೆ ಹೋಗುವ ಸಾರ್ವಜನಿಕ ರೂಟ್ ಬಸ್ಸುಗಳು ಮತ್ತು ಸ್ಥಳೀಯರ ಲಘು ವಾಹನಗಳು ಮಾತ್ರ ಗಂಜಿಮಠದಿಂದ ಮುಂದೆ ಮುಚ್ಚೂರು ಕ್ರಾಸ್ ಬಳಿ ಎಡಕ್ಕೆ ತಿರುಗಿ ಈಶ್ವರಕಟ್ಟೆ ಕ್ರಾಸ್-ಅರ್ಜುನಕೋಡಿ – ಮಂಜನ ಕಟ್ಟೆ ಕ್ರಾಸ್ -ಪುಮಾರ್ ಪದವು ಕ್ರಾಸ್- ದಡ್ಡಿ ಕ್ರಾಸ್ ಬಳಿ ಎಡಕ್ಕೆ ಸಂಚರಿಸಿ ಮೂಡಬಿದ್ರೆ ಕಡೆಗೆ ಸಂಚರಿಸುವುದು.

👉 5) ಮಂಗಳೂರು ಕಡೆಯಿಂದ ಮೂಡಬಿದ್ರೆ ಮೂಲಕ -ಕಾರ್ಕಳ ಕಡೆಗೆ ಸಂಚರಿಸುವ ಎಲ್ಲಾ ಲಾರಿಗಳು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸುರತ್ಕಲ್-ಮುಲ್ಕಿ-ಪಡುಬಿದ್ರೆಯಿಂದಾಗಿ ಕಾರ್ಕಳ ಕಡೆಗೆ ಸಂಚರಿಸುವುದು.

ಮಾರ್ಗ ಬದಲಾವಣೆ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾದ್ಯತೆಗಳು ಇರುವುದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ವಿನಂತಿ.

ಮಾರ್ಗ ಬದಲಾವಣೆ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಗಳು ಇರುವುದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿಎಚ್ ತಿಳಿಸಿದ್ದಾರೆ.

Share News
Exit mobile version