ಕಾಪು: ಕಳತ್ತೂರು ಕುಶಲ ಶೇಖರ ಶೆಟ್ಟಿ ಇಂಟರ್ನ್ಯಾಶನಲ್ ಆಡಿಟೋರಿಯಂ ಹಾಗೂ ಕುಶಲ ಶೇಖರ್ ಜೈ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸಾಧಕರಿಗೆ ಸಮ್ಮಾನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ಶನಿವಾರ ಕುಶಲ ಶೇಖರ್ ಶೆಟ್ಟಿ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಟ್ಟಲದಾಸ ಸ್ವಾಮೀಜಿ ಅವರು, “ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದು ಅತ್ಯಂತ ಶ್ರೇಷ್ಠ ಕಾರ್ಯ” ಎಂದರು. ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕಳೆದ 15 ವರ್ಷಗಳಿಂದ ನಿರಂತರವಾಗಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಟ್ರಸ್ಟ್ನ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ 11 ವರ್ಷದ ಪುಟ್ಟ ಬಾಲಕಿ ನಾಲ್ಕು ರಾಜ್ಯಗಳಲ್ಲಿ ಆರು ಭಾಷೆಗಳಲ್ಲಿ ಮತದಾನ ಜಾಗೃತಿ ಮೂಡಿಸಿದ ಕುಮಾರಿ ಸನ್ನಿಧಿ ಕಶೆಕೋಡಿ ಇವರನ್ನು ಸನ್ಮಾನಿಸಲಾಯಿತು.

ಕಾಪು ಕಳತ್ತೂರು ಪರಿಸರದ ಸಮಾಜ ಸೇವಕ ಕಳತ್ತೂರು ದಿವಾಕರ ಬಿ. ಶೆಟ್ಟಿ ಅವರನ್ನು ಆತ್ಮೀಯವಾಗಿ ಸಮ್ಮಾನಿಸಲಾಯಿತು. ಇದೇ ವೇಳೆ ಕಳತ್ತೂರು ಪರಿಸರದ ಶಾಲಾ-ಕಾಲೇಜುಗಳಲ್ಲಿ ಪ್ರಥಮ ಸ್ಥಾನ ಪಡೆದ 19 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಶಲ ಶೇಖರ್ ಶೆಟ್ಟಿ ಆಡಿಟೋರಿಯಂನ ಮಾಲಕರಾದ ಕಳತ್ತೂರು ಶೇಖರ ಬಿ. ಶೆಟ್ಟಿ ಅವರು ವಹಿಸಿದ್ದರು. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ ಸಾಯಿರಾಧ ಗ್ರೂಪ್ನ ಆಡಳಿತ ನಿರ್ದೇಶಕ ಮನೋಹರ್.ಎಸ್. ಶೆಟ್ಟಿ ಕಾಪು ಮಹಿಳಾ ಮಂಡಳಿ ಅಧ್ಯಕ್ಷೆ ಜಯಲಕ್ಷ್ಮೀ ಎಸ್. ಶೆಟ್ಟಿ ಅಂಚೆ ಇಲಾಖೆ ಪುತ್ತೂರು ವಿಭಾಗದ ನಿವೃತ್ತ ಹಿರಿಯ ಅಧೀಕ್ಷಕ ನವೀನ್ ಚಂದರ್, ಕುತ್ಯಾರು ಪಿಡಿಒ ರಾಜೇಶ್ ಶೆಣೈ, ಉದ್ಯಮಿ ರವೀಂದ್ರ ಆಳ್ವ, ಅನಿವಾಸಿ ಭಾರತೀಯ ಉದ್ಯಮಿ ಪ್ರದೀಪ್ ಶೆಟ್ಟಿ ಕುಶಲ ಶೇಖರ್ ಶೆಟ್ಟಿ ಕುಶಲ ಭುಜಂಗ ಶೆಟ್ಟಿ ಪ್ರೇಮ ಸುಂದರ ಶೆಟ್ಟಿ ಆನಂದಿ ವಾಸು ಶೆಟ್ಟಿ ಅಮರನಾಥ ಶೆಟ್ಟಿ ನಯನ ಎಸ್. ಶೆಟ್ಟಿ ಉಜ್ವಲ್ ಶೇಟ್ಟಿ ರೋಶಿನಿ ಶೆಟ್ಟಿ ಉಪಸ್ಥಿತರಿದ್ದರು.
ಟ್ರಸ್ಟಿಚಾಂದಿನಿ ಉಜ್ವಲ್ ಶೆಟ್ಟಿಸ್ವಾಗತಿಸಿ, ಶಿಕ್ಷಕ ಉದಯ ಕುಮಾರ್ ವಂದಿಸಿದರು. ಉಪನ್ಯಾಸಕಿ ಸುಮನಾ ದೇವಾಡಿಗ ಸಮ್ಮಾನಿತರನ್ನು ಪರಿಚಯಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ ನಿರೂಪಿಸಿದರು. ಕಾಪು ಗ್ಯಾವಿಟಿ ಡಾನ್ಸ್ ಕ್ರೀವ್ ತಂಡ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.
