LATEST NEWS

ಮಾದಕ ವ್ಯಸನ ಜಾಗೃತಿಗೆ ನಾಟಕ ಉತ್ತಮ ವೇದಿಕೆ ಎಸಿಪಿ ವಿಜಯ ಕ್ರಾಂತಿ ಅಭಿಪ್ರಾಯ

ಮಂಗಳೂರು : ಯೂತ್ ರೆಡ್‌ಕ್ರಾಸ್ ಮಂಗಳೂರು ವಿಶ್ವವಿದ್ಯಾನಿಲಯ ಇದರ ವತಿಯಿಂದ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕ ಮತ್ತು ವಿ.ವಿ.ಕಾಲೇಜಿನ ಯೂತ್ ರೆಡ್‌ಕ್ರಾಸ್, ಎನ್‌ಎಸ್‌ಎಸ್ ಹಾಗೂ ಮಾದಕ ದ್ರವ್ಯ ವಿರೋಧಿ ಜಾಗೃತಿ ಕೋಶದ ಸಹಯೋಗದಲ್ಲಿ ಶನಿವಾರ ನಗರದ ವಿ.ವಿ.ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ವಿಕಸಿತ ಭಾರತಕ್ಕಾಗಿ ನಶೆ ಮುಕ್ತ ಯುವ ವಿಷಯದ ಬಗ್ಗೆ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಕಿರು ನಾಟಕ (ಸ್ಕಿಟ್) ಸ್ಪರ್ಧೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರೆಟ್‌ನ ಎಸಿಪಿ ವಿಜಯಕ್ರಾಂತಿ ಮಾತನಾಡಿ ” ನಾಟಕಗಳ ಪ್ರದರ್ಶನದ ಮೂಲಕವೂ ಸಾರ್ವಜನಿಕರಲ್ಲಿ ಮಾದಕ ವ್ಯಸನದ ಕುರಿತು ಜಾಗೃತಿ
ಮೂಡಿಸಬಹುದು. ಮಾದಕ ವ್ಯಸನದಿಂದಾಗುವ ಪರಿಣಾಮ ಹಾಗೂ ಕಾನೂನು ನಿಬಂಧನೆ ಸಂಬಂಧ ಮಾಹಿತಿ ನೀಡುವುದು ಪೊಲೀಸರ ಕರ್ತವ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯವಂತ ನಾಯಕ್ ಮಾತನಾಡಿ ” ಮಾದಕ ವಸ್ತು ಸೇವನೆಯಷ್ಟೇ ಪರಿಣಾಮವನ್ನು ಮೊಬೈಲ್ ಬಳಕೆಯೂ ಉಂಟು ಮಾಡುತ್ತದೆ. ಮಾದಕ ವಸ್ತುಗಳು ವ್ಯಸನಿಗೆ ಮಾತ್ರವಲ್ಲದೆ ಇಡೀ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ ಎಂದರು.
ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ಕ್ರಾಸ್‌ನ ನೋಡಲ್ ಅಧಿಕಾರಿ ಡಾ. ಗಾಯತ್ರಿ, ಹಳೇ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕರ್ನಲ್ ಶರತ್ ಭಂಡಾರಿ, ಹಳೆ ವಿದ್ಯಾರ್ಥಿ ಸಂಘದ ಶ್ರೀನಿವಾಸ್ ನಾಯ್ಕ್, ಮುರಳೀಧರ ಕಾಮತ್, ಯುವ ರೆಡ್‌ಕ್ರಾಸ್ ಕಾರ್ಯಕ್ರಮ ಅಧಿಕಾರಿ ಡಾ. ಭಾರತಿ ಪಿಲಾರ್, ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ. ಸುರೇಶ್ ಉಪಸ್ಥಿತರಿದ್ದರು.

*ಕಿರು ನಾಟಕ ಸ್ಪರ್ಧೆ ವಿಜೇತರು :
ಪ್ರಥಮ : ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್, ಮಂಗಳೂರು, ದ್ವಿತೀಯ:ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ತೃತೀಯ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, : ವಿ.ವಿ.ಕಾಲೇಜ್

Share News