ಮಂಗಳೂರು,ಆ.2: ಇಂದು ನಮ್ಮ ಸುತ್ತಲಿನ ಪರಿಸರವನ್ನು ನಾವೇ ಹಾಳುಮಾಡುತ್ತಿದ್ದೇವೆ. 2019ರಲ್ಲಿ ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ನಡೆದ ಭೀಕರ ಪ್ರಕೃತಿ ದುರಂತಕ್ಕೆ ನಮ್ಮ ಸ್ವಾರ್ಥ ಮತ್ತು ಬೇಜವಾಬ್ದಾರಿತನವೇ ಮೂಲ ಕಾರಣ ಎಂದು ಜಿಲ್ಲಾ ನಗರಾಭಿವೃದ್ದಿ ಸೆಲ್ನ ಯೋಜನಾ ನಿರ್ದೇಶಕ ಡಾ| ಜಿ. ಸಂತೋಷ್ ಕುಮಾರ್ ಹೇಳಿದರು.

ಮಂಗಳೂರು ಕೆಥೋಲಿಕ ಧರ್ಮಕ್ಷೇತ್ರದ ಪರಿಸರ ಆಯೋಗದ ನೇತೃತ್ವದಲ್ಲಿ ನಗರದ ಬೆಂದೂರ್ ಚರ್ಚ್ನ ಸಭಾಂಗಣದಲ್ಲಿ ಪರಿಸರ ಆಯೋಗದ ಸಂಚಾಲಕರು ಹಾಗೂ ಕಾರ್ಯದರ್ಶಿಗಳಿಗಾಗಿ ಆಯೋಜಿಸಲಾಗಿದ್ದ ವಿಶೇಷ ಪರಿಸರ ಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶದಲ್ಲಿ ಪರಿಸರವನ್ನು ಉಳಿಸಿ, ಸಂರಕ್ಷಿಸುವ ಕಾರ್ಯ ಯುದ್ಧೋಪಾದಿಯಲ್ಲಿ ಆಗಬೇಕು. ಪ್ರಕೃತಿಯನ್ನು ಹಾಳು ಮಾಡಿದ್ದರಿಂದಲೇ ಇಂದು ನಾವು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಪರಿಸರವನ್ನು ಕಾಪಾಡಿ, ಅದನ್ನು ನಮ್ಮ ಮುಂದಿನ ತಲೆಮಾರಿಗೆ ಸುರಕ್ಷಿತವಾಗಿ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಪ್ರಕೃತಿ ದೇವರ ಅತ್ಯಮೂಲ್ಯ ಕೊಡುಗೆ: ಕಾರ್ಯಕ್ರಮದ ನಂತರ ನಡೆದ ವಿಷಯ ಮಂಡನೆಯಲ್ಲಿ ‘ಆರೋಗ್ಯ ಮತ್ತು ಪರಿಸರದ ನಡುವಿನ ಅವಿನಾಭಾವ ಸಂಬಂಧ’ದ ಬಗ್ಗೆ ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ನಿರ್ದೇಶಕರಾದ ಫಾದರ್ ಫೌಸ್ಟಿನ್ ಲ್ಯೂಕಾಸ ಲೋಬೊ ಅವರು ಮಾತನಾಡಿದರು. “ಈ ಪ್ರಕೃತಿ ಮತ್ತು ಪರಿಸರವು ದೇವರು ನಮಗೆ ನೀಡಿದ ಅತ್ಯಮೂಲ್ಯವಾದ ಕೊಡುಗೆಯಾಗಿದೆ. ದೇವರ ಸೃಷ್ಟಿಯನ್ನು ಕಾಪಾಡುವುದು ಕೇವಲ ಸರ್ಕಾರದ ಕೆಲಸವಲ್ಲ, ಅದು ಪ್ರತಿಯೊಬ್ಬ ಮನುಷ್ಯನ ಪವಿತ್ರ ಕರ್ತವ್ಯವಾಗಿದೆ. ನಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶ ಮಾಡದೆ, ಮುಂಬರುವ ಪೀಳಿಗೆಗೆ ಸುರಕ್ಷಿತ ಮತ್ತು ಸುಂದರ ಪರಿಸರವನ್ನು ಉಳಿಸುವುದು ನಮ್ಮ ಧರ್ಮವಾಗಿದೆ,” ಎಂದು ಅವರು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಎನ್.ಐ.ಟಿ.ಕೆ. ಸುರತ್ಕಲ್ನ ದಕ್ಷಿಣ ಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರೊ. ರಾಜೇಂದ್ರ ಕಲ್ಬಾವಿ
ಹಾಗೂ ಹಸಿರು ದಳದ ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ಸಾಮಾಜಿಕ ಕಾರ್ಯಕರ್ತರಾದ ಶ್ರೀ ನಾಗರಾಜ್ ಬಜಾಲ್ ಅವರು ಪರಿಸರ ಸಂರಕ್ಷಣೆಯ ಪ್ರಾಯೋಗಿಕ ಮಾರ್ಗಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಕ್ಷೇತ್ರದ ಪರಿಸರ ಆಯೋಗದ ಕಾರ್ಯದರ್ಶಿ ಶ್ರೀ ಲುವಿಸ್ ಜೆ. ಪಿಂಟೊ, ಧರ್ಮಕ್ಷೇತ್ರದ ಪರಿಸರ ಆಯೋಗದ ಕಾರ್ಯಕಾರಿ ಸಮಿತಿ ಸದಸ್ಯರಾದ ವಂದನೀಯ ವಂ| ಡಾ| ಮೈಕಲ್ ಸಾಂತುಮಾಯೋರ್, ಭಗಿನಿ ಪ್ಲಾವಿಯ ವಿಲ್ಮಾ, ಶ್ರೀಮತಿ ಸೆಲೆಸ್ತಿನ್ ಡಿಸೋಜ, ಶ್ರೀಯುತರಾದ ಕ್ಲೆಮೆಂಟ್ ಪಿಂಟೊ, ಪ್ರಾನ್ಸಿಸ್ ಮಿನೇಜಸ್ ಬಾಲ್ಕುoಜೆ, ಜೀತ್ ಮಿಲನ್ ರೋಚ್, ಚಾರ್ಲ್ಸ್ ಪಾಯ್ಸ್ ಅವರು ಉಪಸ್ಥಿತರಿದ್ದು . ಶಿಬಿರದಲ್ಲಿ ಧರ್ಮಕ್ಷೇತ್ರದ ವಿವಿಧ ಘಟಕಗಳ ಪರಿಸರ ಆಯೋಗದ ಸಂಚಾಲಕರು ಮತ್ತು ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.









