LATEST NEWS

ಪಾಲಿಕೆ ನೂತನ ಆಯುಕ್ತರನ್ನು ಭೇಟಿಯಾಗಿ ನಾಗರಿಕ ಸಮಸ್ಯೆಗಳ ಕುರಿತು ಚರ್ಚಿಸಿದ ಕಾಂಗ್ರೆಸ್ ನಿಯೋಗ

ಮಂಗಳೂರು: ಮಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸಹಕರಿಸುವ ಹಾಗೂ ಸಾರ್ವಜನಿಕರ ಜ್ವಲಂತ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಪೊರೇಟರ್‌ಗಳ ನಿಯೋಗವು ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾದ ಶ್ರೀ ರಾಹುಲ್ ರತ್ನಂ ಪಾಂಡೆ, ಐಎಎಸ್ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿತು. ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ಈ ಮಹತ್ವದ ಸಭೆ ಜರುಗಿತು.


ಸಭೆಯಲ್ಲಿ ನಗರದ ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಎಲ್‌ಇಡಿ ಬೀದಿ ದೀಪಗಳ ಸಮಸ್ಯೆ, ಗ್ರಾಸ್ ಕಟಿಂಗ್, ಕಸ ವಿಲೇವಾರಿ ಸೇರಿದಂತೆ ಮಹಾನಗರ ಪಾಲಿಕೆಯ ಆಡಳಿತದಲ್ಲಿ ಅಗತ್ಯ ಸುಧಾರಣೆಗಳನ್ನು ಕೈಗೊಳ್ಳುವಂತೆ ಆಯುಕ್ತರಿಗೆ ಮನವಿ ಮಾಡಲಾಯಿತು.

ಇತ್ತೀಚೆಗೆ ನಗರದಲ್ಲಿ ಉಂಟಾದ ನೆರೆ, ಮಳೆಹಾನಿ, ಗುಡ್ಡ ಕುಸಿತ ಹಾಗೂ ಕಂಪೌಂಡ್ ಕುಸಿತದಂತಹ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ತ್ವರಿತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕರು ಒತ್ತಾಯಿಸಿದರು.

ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದಿರುವ ಅಕ್ರಮಗಳು, ಜನರಲ್ ಫಂಡ್‌ನ ಬಳಕೆ ಹಾಗೂ ಕಾಂಗ್ರೆಸ್ ಕಾರ್ಪೊರೇಟರ್‌ಗಳಿಗೆ ಅನುದಾನ ನೀಡುವಲ್ಲಿ ನಡೆದಿರುವ ತಾರತಮ್ಯದ ಬಗ್ಗೆಯೂ ಆಯುಕ್ತರ ಗಮನಕ್ಕೆ ತರಲಾಯಿತು.

ನಿಯೋಗದ ಮನವಿಗಳನ್ನು ಆಲಿಸಿದ ಆಯುಕ್ತರು, ಸಮಸ್ಯೆಗಳ ಕುರಿತು ವಿವರಗಳನ್ನು ಪಡೆದುಕೊಂಡು, ಅಗತ್ಯ ಕ್ರಮಗಳನ್ನು ಶೀಘ್ರವಾಗಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಆಡಳಿತ ನಡೆಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಬ್ದುಲ್ ಸಲೀಂ ಹಾಗೂ ಶ್ರೀ ಪ್ರಕಾಶ್ ಬಿ. ಸಾಲ್ಯಾನ್, ಮಾಜಿ ಮೇಯರ್‌ಗಳಾದ ಶ್ರೀ ಶಶಿಧರ್ ಹೆಗ್ಡೆ, ಶ್ರೀ ಭಾಸ್ಕರ್ ಮೊಯ್ಲಿ ಹಾಗೂ ಶ್ರೀಮತಿ ಜೆಸಿಂತಾ ವಿಜಯಾ ಆಲ್ಫ್ರೆಡ್, ಮಾಜಿ ಕಾರ್ಪೊರೇಟರ್‌ಗಳಾದ ಶ್ರೀ ಪ್ರವೀಣ್ ಚಂದ್ರ ಆಳ್ವಾ, ಶ್ರೀ ಅನಿಲ್ ಕುಮಾರ್, ಶ್ರೀ ಅಶೋಕ್ ಡಿ.ಕೆ., ಶ್ರೀ ನವೀನ್ ಡಿ’ಸೋಜಾ, ಶ್ರೀ ಕೇಶವ ಮರೋಳಿ, ಶ್ರೀ ಲ್ಯಾನ್ಸ್ಲಾಟ್ ಪಿಂಟೋ, ಶ್ರೀಮತಿ ಜೀನತ್ ಶಮ್ಸುದ್ದೀನ್, ಶ್ರೀ ಶಮ್ಸುದ್ದೀನ್ ಕುದ್ರೋಳಿ, ಶ್ರೀಮತಿ ಕವಿತಾ ವಾಸು, ಶ್ರೀ ಅಶ್ರಫ್ ಬಜಾಲ್, ಶ್ರೀ ಭಾಸ್ಕರ್ ರಾವ್, ಶ್ರೀ ಚೇತನ್ ಕುಮಾರ್, ಶ್ರೀ ಸತೀಶ್ ಪೆಂಗಲ್, ಶ್ರೀ ಹೇಮಂತ್ ಗರೋಡಿ ಹಾಗೂ ಕಾಂಗ್ರೆಸ್ ನಾಯಕರಾದ ಶ್ರೀ ಅಲಿಸ್ಟನ್ ಡಿಕೊನ್ನ, ಶ್ರೀ ಶಂಶುದ್ದೀನ್, ಶ್ರೀ ಅಮೃತ್ ಕದ್ರಿ ಮತ್ತು ಶ್ರೀಮತಿ ರೂಪಾ ಚೇತನ್ ಉಪಸ್ಥಿತರಿದ್ದರು.

Share News