canaratvnews

ಸಾಮಾಜಿಕ ಮಾಧ್ಯಮದಲ್ಲಿ ಕೋಮು ಪ್ರಚೋದನಕಾರಿ ಸಂದೇಶ: ಓರ್ವನ ಬಂಧನ

ಮಂಗಳೂರು: ಬಜಪೆಯಲ್ಲಿ 2025ರಲ್ಲಿ ಸುಹಾಸ್ ಶೆಟ್ಟಿ ಕೊಲೆ ನಡೆದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಕೋಮು ಪ್ರಚೋದನಕಾರಿ ಸಂದೇಶ ಹಂಚಿಕೊಂಡ ಆರೋಪಿ ಯನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಬುಧವಾರ ಹಾಜರು ಪಡಿಸಿದ್ದಾರೆ.

ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಮೂಡುಬೆಳ್ಳೆ ಗ್ರಾಮದ ಪವನ್ ಆಚಾರ್ಯ (22) ಬಂಧಿತ ಆರೋಪಿ. ಆತ ಸಾಮಾಜಿಕ ಮಾಧ್ಯಮ ದಲ್ಲಿ ಕೋಮು ಪ್ರಚೋದಕ ಸಂದೇಶ ಹಂಚಿಕೊಂಡ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 353 (1) (ಸಾರ್ವಜನಿಕ ಸಮಸ್ಯೆ ಸೃಷ್ಟಿಸುವ ಸುಳ್ಳು ಸಂದೇಶವನ್ನು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಹಂಚಿಕೊಳ್ಳುವುದು), 353(2) (ಧರ್ಮ, ಜನಾಂಗ, ಭಾಷೆ ಅಥವಾ ಪ್ರಾದೇಶಿಕ ಗುಂಪು, ಜಾತಿ ಅಥವಾ ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸುವ ಉದ್ದೇಶದಿಂದ ಸುಳ್ಳು ಮಾಹಿತಿಯನ್ನು ಸೃಷ್ಟಿಸಿ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಹಂಚಿಕೊಳ್ಳುವುದು), 61(2)(ಕ್ರಿಮಿನಲ್ ಸಂಚು) ಹಾಗೂ ಸೆಕ್ಷನ್‌ 55 (ಅಪರಾಧಕ್ಕೆ ಪ್ರಚೋದನೆ) ಅಡಿ ಎಫ್‌ಐಆರ್ ದಾಖಲಾಗಿತ್ತು. ಆರೋಪಿಗೆ 14 ದಿನಗಳ ಕಾಲ  ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿ ವಿರುದ್ಧ ಉಡುಪಿ ಜಿಲ್ಲೆಯ ಕಾಪು ಠಾಣೆಯಲ್ಲೂ ಈ ಹಿಂದೆ ಪ್ರಕರಣ ದಾಖಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Share News
Exit mobile version