ಪುತ್ತೂರು: ಕರಾವಳಿಯಲ್ಲಿ ದಿನೇ ದಿನೇ ಏರುತ್ತಿರುವ ಬಿಸಿಲಿನ ಬೇಗೆಯಿಂದ ಕಚೇರಿಗೆ ಬರುವ ಸಾರ್ವಜನಿಕರಿಗೆ ನಿರಾಳತೆ ನೀಡುವ ಉದ್ದೇಶದಿಂದ ಪುತ್ತೂರು ಶಾಸಕ ಅಶೋಕ್ ರೈ ಅವರು ತಮ್ಮ ಕಚೇರಿಯಲ್ಲಿ ಹೊಸ ಮಾದರಿಯ ಜನಪರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಸೋಮವಾರ ಕಚೇರಿಗೆ ಭೇಟಿ ನೀಡಿದ ನೂರಾರು ಜನರಿಗೆ ಸಾಂಪ್ರದಾಯಿಕ ‘ಚಿಕ್ಕಿ’ಯ ಬದಲಾಗಿ ತಂಪು ‘ಮಜ್ಜಿಗೆ’ ನೀಡಿ ದಾಹ ನೀಗಿಸಲಾಯಿತು.

ಶಾಸಕರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅಶೋಕ್ ರೈ ಅವರು ಪ್ರತಿ ಸೋಮವಾರ ತಮ್ಮನ್ನು ಭೇಟಿಯಾಗಲು ಬರುವ ಸಾರ್ವಜನಿಕರಿಗೆ ಸಿಹಿ ತಿನಿಸಾದ ‘ಚಿಕ್ಕಿ’ ವಿತರಿಸುತ್ತಿದ್ದರು. ಆದರೆ ಈಗ ಏಪ್ರಿಲ್ ತಿಂಗಳ ಕಡು ಬಿಸಿಲು ಜನರನ್ನು ಹೈರಾಣಾಗಿಸುತ್ತಿರುವುದರಿಂದ, ಜನರ ಆರೋಗ್ಯ ಮತ್ತು ದಾಹದ ಹಿತದೃಷ್ಟಿಯಿಂದ ಮಜ್ಜಿಗೆ ವಿತರಣೆ ಮಾಡಲು ನಿರ್ಧರಿಸಿದ್ದಾರೆ.
ಕೇವಲ ಮಜ್ಜಿಗೆ ಮಾತ್ರವಲ್ಲದೆ, ಇಂದು ಶಾಸಕರ ಕಚೇರಿಗೆ ಬಂದ ಸಾರ್ವಜನಿಕರಿಗೆ ಇಡ್ಲಿ ಸಾಂಬಾರ್, ವಡೆ, ಕೇಸರಿಬಾತ್ ಹಾಗೂ ಚಹಾ-ಕಾಫಿಯ ಸಣ್ಣ ಮಟ್ಟಿನ ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಶಾಸಕರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗಿದೆ.
“ಬಿಸಿಲ ತಾಪದಿಂದ ಕಚೇರಿಗೆ ಬರುವ ಸಾರ್ವಜನಿಕರು ಸುಸ್ತಾಗಿರುತ್ತಾರೆ. ಅವರ ದಾಹ ನೀಗಿಸಲು ಮಜ್ಜಿಗೆ ನೀಡುವ ನಿರ್ಧಾರ ಮಾಡಿದ್ದೇನೆ. ಜೊತೆಗೆ ಇಂದು ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. ಹಸಿದು ಬಂದವನಿಗೆ ಆಹಾರ ಮತ್ತು ನೀರು ನೀಡುವುದು ಅತ್ಯಂತ ಪುಣ್ಯದ ಕೆಲಸ,” ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.