LATEST NEWS

“ಬನ” ತುಳು ಸಿನಿಮಾದ ಟ್ರೈಲರ್ ಬಿಡುಗಡೆ :

ಮಂಗಳೂರು: ಈಶಿ ಪ್ರೊಡಕ್ಷನ್ ಲಾಂಛನದಲ್ಲಿ ಮನೋಹರ್ ರೈ ವೈಪಾಲ ನಿರ್ಮಾಣದಲ್ಲಿ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದಲ್ಲಿ ತಯಾರಾದ “ಬನ” ತುಳುಚಲನ ಚಿತ್ರದ ಟ್ರೇಲರ್ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು.

ಸಮಾರಂಭದಲ್ಲಿ ಮಾಜಿ ಸಚಿವರಾದ ಬಿ ರಮಾನಾಥ ರೈ ಭಾಗವಹಿಸಿ ತುಳು ಭಾಷೆಯ ಬೆಳವಣಿಗೆಯಲ್ಲಿ ನಾಟಕಗಳು, ಸಿನಿಮಾಗಳು ಸಹಕಾರಿಯಾಗಿ ಕೆಲಸ ಮಾಡಿದೆ‌. ಎಲ್ಲಾ ತುಳುವರು ತುಳು ಭಾಷೆಯಲ್ಲಿ ಬರುವ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸ ಬೇಕೆಂದರು.

ಮಾಜಿ ಶಾಸಕಿ ಶಕುಂತಳಾಶೆಟ್ಟಿ ಮಾತನಾಡಿ ಸಿನಿಮಾದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಪ್ರತಿಭಾವಂತ ಕಲಾವಿದ. ಈ ಹಿಂದೆ ನಿತಿನ್ ರೈ ನಿರ್ದೇಶನ ಮಾಡಿದ ಎರಡು ಸಿನಿಮಾಗಳು ಯಶಸ್ವಿ ಪ್ರದರ್ಶನ ಕಂಡಿದೆ. ಬಹಳಷ್ಟು ಪ್ರತಿಭಾವಂತ ಕಲಾವಿದರನ್ನು ನಿತಿನ್ ಸಿನಿಮಾರಂಗಕ್ಕೆ ಪರಿಚಯಿಸಿದ್ದಾರೆ ಎಂದರು.

ಸಮಾರಂಭದಲ್ಲಿ ಎಸ್ ಸಿ ಡಿ ಸಿಸಿ ಬ್ಯಾಂಕ್ ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಯಥಾರ್ಥ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ಈಶ್ವರ್ ಪ್ರಸಾದ್ ಶೆಟ್ಟಿ, ಉದ್ಯಮಿ ಪುರುಷೋತ್ತಮ ಶೆಟ್ಟಿ ಯಮುನ, ರೂಪ ವರ್ಕಾಡಿ, ಪ್ರೇಮ್ ಸುರತ್ಕಲ್, ಸಹಜ್ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು, ಕೆ ಕೆ ಪೇಜಾವರ, ಮೊದಲಾದವರಿದ್ದರು. ಸಮಾರಂಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ರೂಪಾ ವರ್ಕಾಡಿ ಅವರನ್ನು ಸನ್ಮಾನಿಸಲಾಯಿತು.

ಚಿತ್ರದಲ್ಲಿ ಖ್ಯಾತ ಪತ್ರಕರ್ತ ಜಯ ಪ್ರಕಾಶ್ ಶೆಟ್ಟಿ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ರೂಪ ವರ್ಕಾಡಿ ಪ್ರಮುಖ ಪಾತ್ರಗಳಲ್ಲಿ ಅಭುನಯಿಸಿದ್ದಾರೆ. ಜಯಪ್ರಕಾಶ್ ಶೆಟ್ಟಿ ಅವರ ಖಡಕ್ ಡೈಲಾಗ್ ಗಳು ಸಿನಿಮಾದ ಹೈಲೈಟ್ಸ್ ಆಗಿದೆ.
ನಾಯಕನಾಗಿ ನಿಹಾಲ್ ರೈ, ನಾಯಕಿಯಾಗಿ ಕೃತಿ ಶ್ರೀನಿವಾಸ್ ಪೂಜಾರಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ, ಶರತ್ ಆಳ್ವ, ಪ್ರೀಯ ಶೆಟ್ಟಿ, ವಿಜಯಹರಿ ರೈ, ವಿಕಾಸ್ ಪುತ್ರನ್, ನಿಜರೂಪ ಶೆಟ್ಟಿ, ಸವಿತಾ ಅಂಚನ್ , ಪ್ರವೀಣ್ ಕೊಡಕ್ಕಲ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಅರುಣ್ ರೈ ಪುತ್ತೂರು ಛಾಯಾಗ್ರಹಣ ಮಾಡಿದ್ದು ನವೀನ್ ನೇರಳ್ತೊಡಿ ಅವರ ಸಂಕಲನ ಚಿತ್ರಕ್ಕಿದೆ. ಖ್ಯಾತ ಸಂಗೀತ ನಿರ್ದೇಶಕ ಜಯಕಾರ್ತಿ ಅವರ ಸಂಗೀತ ಚಿತ್ರಕ್ಕಿದೆ. “ಬನ” ತುಳು ಚಲನಚಿತ್ರ ಅಕ್ಟೋಬರ್ 23ರಂದು ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಗಲಿದೆ.
“ಬನ” ಸಿನಿಮಾದ ಕುರಿತು ಪ್ರೇಕ್ಷಕರಿಗೆ ಬಾರೀ ಕುತೂಹಲ ಇದೆ. “ಬನ” ಸಿನಿಮಾದ ಟ್ರೇಲರ್ ನೋಡಿದ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಉತ್ತಮ ಕಥೆಚಿತ್ರಕಥೆಯನ್ನು ಒಳಗೊಂಡ ಸಿನಿಮಾದಲ್ಲಿ ಸಮಾಜಕ್ಕೆ ಉತ್ತಮ ಸಂದೇಶದ ಜೊತೆಗೆ ಹಾಸ್ಯ, ಪ್ರೀತಿ, ಸಿಡುಕು, ಸೆಂಟಿಮೆಂಟ್ ಎಲ್ಲವೂ ಇದೆ. ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದೇವೆ ಎನ್ನುತ್ತಾರೆ ಸಿನಿಮಾದ ನಿರ್ದೇಶಕ ನಿತಿನಿ ರೈ ಕುಕ್ಕುವಳ್ಳಿ ನುಳಿಯಾಲು.

*ಆ್ಯಕ್ಷನ್‌, ಥ್ರಿಲ್ಲರ್‌, ಸಸ್ಪೆನ್ಸ್‌. ರೋಮ್ಯಾನ್ಸ್‌!*
“ಬನ” ಸಿನಿಮಾದ ಟ್ರೇಲರ್‌ ಈಗ ಎಲ್ಲರಲ್ಲೂ ಹೊಸ ಕುತೂಹಲ, ನಿರೀಕ್ಷೆ ಮೂಡಿಸುತ್ತಿದೆ. ಕಾಡಿನಲ್ಲಿ ಕಂಡುಬಂದ ಮಗುವಿನ ಜತೆಗಿದ್ದವರು ಯಾರು, ಮನೆ ಮುಂದೆ ಹಾವು ಯಾಕೆ ಪ್ರತ್ಯಕ್ಷವಾಯಿತು, ಬನಕ್ಕೆ ಹಾನಿ ಮಾಡಿದವರನ್ನು ಕಾಡಲು ಬಂತೇ ನಾಗರಾಜ ಮುಂತಾದ ಹಲವಾರು ಪ್ರಶ್ನೆಗಳೊಂದಿಗೆ, ಈ ಸಿನಿಮಾದಲ್ಲಿ ಆ್ಯಕ್ಷನ್‌, ಥ್ರಿಲ್ಲರ್‌, ಸಸ್ಪೆನ್ಸ್‌. ರೋಮ್ಯಾನ್ಸ್‌ ಎಲ್ಲವೂ ಇರುವುದು ಖಚಿತವಾಗಿದೆ. ದೃಶ್ಯ ದೃಶ್ಯಗಳಲ್ಲೂ ಕೌತುಕಗಳು ಇರುವ ನಿರೀಕ್ಷೆಯನ್ನು ಈ ಟ್ರೇಲರ್‌ ಹುಟ್ಟುಹಾಕಿದೆ. ಜತೆಗೆ ನಮ್ಮ ಮಣ್ಣ್‌ದ ಕಥೆ ಎಂಬ ಟ್ಯಾಗ್‌ಲೈನ್‌, ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸಲಿರುವುದನ್ನು “ಬನ” ಸಿನಿಮಾ ಸ್ಪಷ್ಪಪಡಿಸುತ್ತದೆ.

Share News