ಮಂಗಳೂರು: ಬಜಾಲ್-ನಂತೂರು ಆಂಗ್ಲ ಮಾಧ್ಯಮ ಶಾಲೆ ಹಾಗೂ ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಜಂಟಿ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಹಾಗೂ ಮ.ನ.ಪಾ ನಿಕಟಪೂರ್ವ ಸದಸ್ಯ ಅಬ್ದುಲ್ ರವೂಫ್, ನಮ್ಮ ಭವಿಷ್ಯದ ಮಕ್ಕಳು ಭಾರತದ ಸುಂದರ ಇತಿಹಾಸವನ್ನು ಅರಿತುಕೊಂಡು ಸಂವಿಧಾನದ ಆಶಯಗಳನ್ನು ಕಾಪಾಡುವ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖತೀಬ್ ಅಲ್ಹಾಜ್ ಅಬ್ದುಲ್ ನಾಸಿರ್ ಸಅದಿ, ದೇಶದ ಸಂವಿಧಾನವನ್ನು ಕಾಪಾಡಲು ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು. ಪರಸ್ಪರ ಸಹಬಾಳ್ವೆಯಿಂದ, ಯಾವುದೇ ಕಚ್ಚಾಟವಿಲ್ಲದೆ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸದರ್ ಮುಅಲ್ಲಿಂ ಹಕೀಮ್ ಮದನಿ, ರಹಿಮಾನ್ ಮದನಿ, ಹಾಜಿ ಬಿ.ಎನ್. ಅಬ್ಬಾಸ್, ಅಬ್ದುಲ್ ಹಮೀದ್, ಅಶ್ರಫ್ ತೋಟ, ನಝೀರ್ ಪಾಂಡೆಲ್, ಹನೀಫ್ ಕೆಳಗಿನಮನೆ, ಅಬೂಬಕ್ಕರ್ ಸಖಾಫಿ, ಶಮೀರ್ ಸಅದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮದ್ರಸಾ ಮುಖ್ಯೋಪಾಧ್ಯಾಯ ಅಬ್ದುಲ್ ಹಕೀಂ ಮದನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕ ಶರತ್ ಕುಮಾರ್ ಸ್ವಾಗತಿಸಿದರು. ಅಶ್ವಿತಾ ಕಾರ್ಯಕ್ರಮ ನಿರೂಪಿಸಿದರು. ನೌಶೀನ ವಂದಿಸಿದರು.
