ಮಂಗಳೂರು, ರಿಯಾದ್: ಸೌದಿ ಅರೇಬಿಯಾದ ರಿಯಾದ್ ನಲ್ಲಿರುವ ವಿದೇಶಾಂಗ ಇಲಾಖೆಯ ಭಾರತದ ರಾಯಭಾರ ಕಛೇರಿಯಲ್ಲಿ ನೂತನವಾಗಿ ಅಧಿಕಾರ ಸ್ವೀಕರಿಸಿರುವ ವಿಪುಲ್ ಕುಮಾರ್ ಐಎಫ್ಎಸ್ ಅವರನ್ನು ಮಂಗಳವಾರ (25-08) ಪ್ರತಿಷ್ಟಿತ ‘ಅಲ್ ಮುಝೈನ್’ ಕಂಪೆನಿಯ ಸ್ಥಾಪಕರಾದ ಬಜ್ಪೆ ಝಕರಿಯ ಹಾಗೂ ಅವರ ಪುತ್ರ ‘ಡ್ಯೂನ್ ಎಂಡ್ ಟೈಡ್ಸ್’ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಝಾಹಿದ್ ಝಕರಿಯ ಭೇಟಿ ಮಾಡಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ವ್ಯಾಪಾರ, ಹೂಡಿಕೆ, ಶಿಕ್ಷಣ, ಕೈಗಾರಿಕೆ ಮತ್ತು ಪರಸ್ಪರ ಆಸಕ್ತಿಯ ಇತರ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಭಾರತ-ಸೌದಿ ಅರೇಬಿಯಾದ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಕುರಿತು ವಿಪುಲ್ ಕುಮಾರ್ ಅವರೊಂದಿಗೆ ಬಜ್ಪೆ ಝಕರಿಯ ಪರಸ್ಪರ ಸುದೀರ್ಘ ಚರ್ಚೆ ನಡೆಸಿದರು.
ಉಭಯ ದೇಶಗಳ ದೀರ್ಘಕಾಲದ ಪಾಲುದಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಈ ಮಾತುಕತೆ ಪೂರಕ ವಾತಾವರಣ ಒದಗಿಸಿದೆ ಎಂದು ಕರಾವಳಿಯ ಪ್ರಸಿದ್ಧ ಎನ್ನಾರೈ ಉದ್ಯಮಿ ಬಜ್ಪೆ ಝಕರಿಯ ಪ್ರತಿಪಾದಿಸಿದ್ದಾರೆ. ವಿಪುಲ್ ಕುಮಾರ್ ಅವರು ಈ ಹಿಂದೆ ಯುಎಇ ಹಾಗೂ ಕತಾರ್ ರಾಷ್ಟ್ರದಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದು, ಈ ಸಂದರ್ಭಗಳಲ್ಲಿ ಕೂಡಾ ಬಜ್ಪೆ ಝಕರಿಯ ಅವರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದನ್ನು ಇಲ್ಲಿ ಸ್ಮರಿಸಬಹುದು.
