ಬೆಳ್ತಂಗಡಿ: ಶಾಲೆಗೆ ತೆರಳುತ್ತಿದ್ದ ಅಕ್ಕ ತಂಗಿಯರು ಬಸ್ ನಿಂದ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿರುವ ಘಟನೆ ಕಳಿಯ ಗ್ರಾಮದ ಗೇರುಕಟ್ಟೆ ಬಳಿ ನಡೆದಿದೆ.

ನ್ಯಾಯತರ್ಪು ಗ್ರಾಮದ ಕಲಾಯಿತೊಟ್ಟು ರೂಪ ಮತ್ತು ನಾಗರಾಜ್ ಗೌಡ ದಂಪತಿಯ ಪುತ್ರಿಯರಾದ ದ್ವೀತಿಯ ಪಿಯುಸಿ ವಿದ್ಯಾರ್ಥಿ ಚರಿಷ್ಮಾ ಹಾಗೂ 10ನೇ ತರಗತಿಯ ವಿದ್ಯಾರ್ಥಿ ಚದ್ಮಿಕಾ ಗಾಯಗೊಂಡವರು.
ಇಬ್ಬರು ಇಂದು ಬೆಳಿಗ್ಗೆ ಎಂದಿನಂತೆ ಗೇರುಕಟ್ಟೆಯಿಂದ ಬೆಳ್ತಂಗಡಿ ಶಾಲೆಗೆ ತೆರಳಲು ಕೆಎಸ್ ಆರ್ ಟಿ ಸಿ ಬಸ್ ಗೆ ಹತ್ತಿದ್ದು, ರೇಷ್ಮೆ ರೋಡ್ ಎಂಬಲ್ಲಿ ಒಮ್ಮೆಲೆ ಬಸ್ ನ ಬಾಗಿಲು ತೆರೆಯಲ್ಪಟ್ಟು ಒಬ್ಬಳು ಕೆಳಗೆ ಬೀಳುವ ವೇಳೆ ಅಕ್ಕನನ್ನು ಹಿಡಿದುಕೊಳ್ಳಲು ತಂಗಿ ಪ್ರಯತ್ನಿಸಿದ ಸಂದರ್ಭ ಇಬ್ಬರೂ ನಿಯಂತ್ರಣ ತಪ್ಪಿ ಕೆಳಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರ ಸಹಕಾರದಲ್ಲಿ ಚಿಕಿತ್ಸೆಗಾಗಿ ಬೆಳ್ತಂಗಡಿ ಹಾಗೂ ಉಜಿರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಮಾಹಿತಿ ಪ್ರಕಾರ ಓರ್ವ ವಿದ್ಯಾರ್ಥಿನಿ ಎಸ್ ಎಸ್ ಎಲ್.ಸಿ ಪರೀಕ್ಷೆಗೆ ತೆರಳುತಿದ್ದು ಮತ್ತೊಬ್ಬಳು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ ಎನ್ನಲಾಗಿದೆ. ಇಬ್ಬರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.