ಮಂಗಳೂರು: ತೊಕ್ಕೊಟ್ಟು ಓವರ್ಬ್ರಿಡ್ಜ್ನಲ್ಲಿ ನಡೆದ ರೌಡಿಶೀಟರ್ ಆರಿಫ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಪ್ರಗತಿ ಕಂಡುಬಂದಿದ್ದು, ಪೊಲೀಸರು ಏಳು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ಮತ್ತು ವಿಚಾರಣೆ ವೇಳೆ ಹಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಆರಿಫ್
ಪ್ರಾಥಮಿಕ ತನಿಖೆಯಲ್ಲಿ ರಿಫಾತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕೀರ್, ಇರ್ಫಾನ್ ಮತ್ತು ರಿಜ್ವಾನ್ ಸಹಿತ 7 ಆರೋಪಿಗಳನ್ನು ಬಂಧಿಸಿದ್ದಾರೆ. ಇವರು ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವುದು ಧೃಡಪಟ್ಟಿದೆ.
ಘಟನೆ ನಡೆದ ದಿನ ಮೇಲಿನ ಆರೋಪಿಗಳು ಆರಿಫ್ ಬೈಕ್ ಅನ್ನು ಹಿಂಬಾಲಿಸಿ ಇನೋವಾ ಕಾರನ್ನು ಬಳಸಿ ಹಿಂಬದಿಯಿಂದ ಡಿಕ್ಕಿ ಹೊಡೆದು, ಬಳಿಕ ಕ್ರೂರವಾಗಿ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು. ಮತ್ತೋರ್ವ ಆರೋಪಿ ಸುಹೈಲ್ ಎಂಬಾತನು ಈ ಕೃತ್ಯಕ್ಕೆ ಬಳಸಿದ ಬಾಡಿಗೆ ವಾಹನವನ್ನು ವ್ಯವಸ್ಥೆ ಮಾಡಿ, ಅದನ್ನು ರಿಫಾತ್ಗೆ ನೀಡಿ ತಕ್ಷಣ ಸೌದಿ ಅರೇಬಿಯಾಗೆ ಪರಾರಿಯಾಗಿದ್ದಾನೆ. ಅರ್ಷಾದ್ ಆರೋಪಿಗಳಿಗೆ ಆಯುಧಗಳನ್ನು ಒದಗಿಸುವುದರ ಜೊತೆಗೆ, ಪೊಲೀಸರ ಚಲನವಲನಗಳ ಬಗ್ಗೆ ನಿರಂತರ ಮಾಹಿತಿ ನೀಡಿ ಆರೋಪಿಗಳ ಓಡಾಟಕ್ಕೆ ವಾಹನ ವ್ಯವಸ್ಥೆ ಮಾಡಿ, ಹಣಕಾಸು ಸಹಾಯ ನೀಡಿದ್ದಾನೆ.
ವಿದೇಶದಿಂದ ಫಂಡಿಂಗ್
ಅಶ್ವಿರ್ ಎಂಬಾತನು ತಾಂತ್ರಿಕ ಸಹಾಯ ಒದಗಿಸಿ, ಆರೋಪಿಗಳು ಪೊಲೀಸರ ನಿಗಾವನ್ನು ತಪ್ಪಿಸಲು ನೆರವಾದನು. ದುಬೈ ಮೂಲದ OTP ಗಳನ್ನು ನೀಡಿ, ಸ್ಥಳೀಯವಾಗಿ ಅಂತಾರಾಷ್ಟ್ರೀಯ ವಾಟ್ಸಾಪ್ ಖಾತೆಗಳನ್ನು ಬಳಸಲು ಸಹಾಯ ಮಾಡಿದ್ದಾನೆ. ಒಂದು ಸಂಖ್ಯೆ ಪತ್ತೆಯಾದಾಗ ಹೊಸ ಸಂಖ್ಯೆಗಳನ್ನೂ ಒದಗಿಸಿದ್ದಾನೆ. ಜೊತೆಗೆ ಮುಸ್ತಫಾ ಮತ್ತು ಅಶ್ವಿರ್ ವಿದೇಶದಿಂದಲೇ ಆರೋಪಿಗಳಿಗೆ ಹಣಕಾಸು ನೆರವು ನೀಡಿದ್ದು, ಅವರ ಪ್ರಯಾಣ, ವಾಸ್ತವ್ಯ ಮತ್ತು ಇತರ ವ್ಯವಸ್ಥೆಗಳಿಗೆ ಸಹಾಯ ಮಾಡಿರುವುದು ಪತ್ತೆಯಾಗಿದೆ. ಇರ್ಷಾದ್ ಆರೋಪಿಗಳಿಗೆ ವಾಸ್ತವ್ಯ ಒದಗಿಸಿ, ಘಟನೆ ಸ್ಥಳಕ್ಕೆ ಕರೆದೊಯ್ದ ಪ್ರಮುಖ ಸಹಾಯಕರಾಗಿ ಗುರುತಿಸಲಾಗಿದೆ. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಇನ್ನೂ ಹಲವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.

