canaratvnews

ಉಡುಪಿ: ಪ್ರವಾಸಿ ಬೋಟ್ ದುರಂತದ ಮೃತರ ಸಂಖ್ಯೆ ಮೂರಕ್ಕೇರಿಕೆ

ಉಡುಪಿ: ಪ್ರವಾಸಿ ಬೋಟ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ  ಮತ್ತೋರ್ವ ಯುವತಿ ನಿನ್ನೆ ಸಾವನ್ನಪ್ಪಿದ್ದಾರೆ. ಮೈಸೂರಿನ ದಿಶಾ(23) ಮೃತ ಯುವತಿ. ಮೊನ್ನೆ ಸಿಂಧು ಮತ್ತು ಶಂಕರಪ್ಪ ಎಂಬುವವರು ಮೃತಪಟ್ಟಿದ್ದರು. ಸದ್ಯ ಧರ್ಮರಾಜ್ ಎಂಬ ಯುವಕ‌ನಿಗೆ ಚಿಕಿತ್ಸೆ ಮುಂದುವರೆದಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯ ಮಲ್ಪೆ ವ್ಯಾಪ್ತಿಗೆ ಬರುವ ಕೋಡಿಬೆಂಗ್ರೆಯಲ್ಲಿರುವ ಡೆಲ್ಟಾ ಬೀಚ್‌ಗೆ ಮೋಜು ಮಾಡಬೇಕೆಂದು ಬಂದ ಮೈಸೂರಿನ ಬಿಪಿಒ ಕಾಲ್ ಸೆಂಟರ್​ವೊಂದರ 28 ಮಂದಿ ಪ್ರವಾಸಿಗರ ತಂಡ, ಇದೀಗ ಕಣ್ಣೀರಿಡುತ್ತಾ ವಾಪಸಾಗುವಂತಾಗಿದೆ.

ಇಲ್ಲಿನ ಡೆಲ್ಟಾ ಬೀಚ್ ಸಮೀಪ, ಎರಡು ಪ್ರವಾಸಿ ಬೋಟುಗಳಲ್ಲಿ 28 ಮಂದಿ ಕಡಲಿಗೆ ಇಳಿದಿದ್ದರು. ಎಲ್ಲ ಪ್ರವಾಸಿಗರಿಗೂ ಭದ್ರತೆಯ ದೃಷ್ಟಿಯಿಂದ ಲೈಫ್ ಜಾಕೆಟ್ ನೀಡಲಾಗಿತ್ತು. ಈ ಪೈಕಿ ಹಲವರು ಜಾಕೆಟ್ ಧರಿಸಿದರೆ ಇನ್ನು ಕೆಲವರು ನೆಗ್ಲೆಟ್ ಮಾಡಿ ಹಾಗೇನೆ ಬೋಟ್ ಹತ್ತಿದ್ದರು ಎನ್ನಲಾಗಿದೆ. ಕಡಲಿನಲ್ಲಿ ಬೋಟ್ ಸಾಗುತ್ತಿದ್ದಂತೆ ಕೆಲ ಪ್ರವಾಸಿಗರ ಹುಚ್ಚಾಟ ಜೋರಾಗಿತ್ತು. ಕುಣಿಯಲು ಪ್ರಾರಂಭಿಸಿದ್ದರು. ಇದರಿಂದ ನಿಯಂತ್ರಣ ತಪ್ಪಿದ ಬೋಟು ಮಗಚಿ ಬಿದ್ದಿದೆ.

ತಕ್ಷಣ ಅಲರ್ಟ್ ಆದ ಸ್ಥಳೀಯ ಮೀನುಗಾರರಾದ ನಾಗರಾಜ, ವಿಶ್ವನಾಥ್ ಶ್ರೀಯಾನ್, ದಿನೇಶ್ ಕರ್ಕೆರ ಇನ್ನೊಂದು ಬೋಟಿನ ಮೂಲಕ ಸ್ಥಳಕ್ಕೆ ತೆರಳಿ ನೀರಿನಲ್ಲಿ ಮುಳುಗಿದವರನ್ನು ಮೇಲಕ್ಕೆತ್ತಿದ್ದಾರೆ. ಹಲವರು ಲೈಫ್ ಜಾಕೆಟ್ ಧರಿಸಿದ್ದರಿಂದ ಸುಲಭವಾಗಿ ಮತ್ತೊಂದು ಬೋಟ್​ಗೆ ಶಿಫ್ಟ್ ಮಾಡಲಾಯಿತು. ನೀರಿಗೆ ಬಿದ್ದ 14 ಮಂದಿಯ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಶಂಕರಪ್ಪ(22) ಹಾಗೂ ಸಿಂಧು (23) ಆಸ್ಪತ್ರೆಗೆ ಸಾಗುವ ಮಾರ್ಗದಲ್ಲೇ ಕೊನೆಯುಸಿರೆಳೆದಿದ್ದಾರೆ. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ದಿಶಾ ಕೂಡ ಸಾವನ್ನಪ್ಪಿದ್ದು, ಧರ್ಮರಾಜ್​ಗೆ ಚಿಕಿತ್ಸೆ ಮುಂದುವರೆದಿದೆ.

Share News
Exit mobile version