ಮಂಗಳೂರು ಜೂನ್ 17 ಮೂರು ದಿನಗಳ ಹಿಂದೆ, ನಂತೂರ್ನ ರಸ್ತೆಯಲ್ಲಿ ಒಂದು ದುರಂತ ಅಪಘಾತ ಸಂಭವಿಸಿತು. ಒಬ್ಬರು ಜೀವ ಕಳೆದುಕೊಂಡ ಆ ಘಟನೆಯ ಬಳಿಕ, ರಸ್ತೆಯನ್ನು ದುರಸ್ತಿ ಮಾಡಲಾಯಿತು ಎಂದು ಜನರಿಗೆ ಭರವಸೆ ನೀಡಲಾಯಿತು. ಆದರೆ ಇವತ್ತು, ಅದೇ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಮತ್ತೆ ಕಾಣಿಸಿಕೊಂಡಿವೆ. ಇದು ನಮ್ಮ ಆಡಳಿತದ ವೈಫಲ್ಯದ ಒಂದು ದೊಡ್ಡ ನಾಟಕವಾಗಿದೆ. ಈ ಗುಂಡಿಗಳು ಕೇವಲ ಮಣ್ಣಿನ ಹೊಂಡಗಳಲ್ಲ, ಇದು ಭ್ರಷ್ಟಾಚಾರದ ಕಾಮಗಾರಿಯ ಫಲಿತಾಂಶವಾಗಿದೆ.

ದಕ್ಷಿಣ ಕನ್ನಡದ ರಸ್ತೆಗಳ ಕಳಪೆ ಕಾಮಗಾರಿಯನ್ನು ನೋಡಿದರೆ, ಪ್ರಪಂಚದ ಯಾವುದೇ ಮೂಲೆಯಲ್ಲಿ ಇಂತಹ ದಯನೀಯ ಸ್ಥಿತಿಯಿರಲಿಕ್ಕಿಲ್ಲ ಎಂಬಂತೆ ಭಾಸವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೇವಲ ಟೋಲ್ ಸಂಗ್ರಹಕ್ಕೆ ಸೀಮಿತವಾಗಿದೆಯೇ? ರಸ್ತೆ ಸುರಕ್ಷತೆಯ ಜವಾಬ್ದಾರಿಯನ್ನು ಯಾರು ಹೊರಬೇಕು? ಈ ಪ್ರಶ್ನೆಗಳಿಗೆ ಉತ್ತರವಿಲ್ಲದಂತೆ ಕಾಣುತ್ತದೆ. ಎಲ್ಲಿದೆ ?ದ.ಕ ಜಿಲ್ಲಾಧಿಕಾರಿ ನೇತೃತ್ವದ ರಸ್ತೆ ಸುರಕ್ಷತಾ ಪ್ರಾಧಿಕಾರ ?
ಈ ಸಂದರ್ಭದಲ್ಲಿ, ನಮ್ಮ ಟ್ರಾಫಿಕ್ ಪೊಲೀಸರ ಕಾರ್ಯವೈಖರಿಯನ್ನು ಮೆಚ್ಚಲೇಬೇಕು. ಬಿಸಿಲಿನಲ್ಲಿ, ಮಳೆಗಾಲದ ತೊಂದರೆಯಲ್ಲಿ, ಅರ್ಧ ಜೀವ ಕಳೆದುಕೊಂಡರೂ, ರಸ್ತೆಯ ಗುಂಡಿಗಳನ್ನು ಕಲ್ಲುಗಳಿಂದ ಮುಚ್ಚುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಇದು ಅವರ ಮಾನವೀಯತೆ ಮತ್ತು ಕರ್ತವ್ಯನಿಷ್ಠೆಯ ಸಂಕೇತವಾಗಿದೆ. ಆದರೆ, ಇದು ಅವರ ಕೆಲಸವೇ? ರಸ್ತೆ ದುರಸ್ತಿಯ ಜವಾಬ್ದಾರಿಯನ್ನು ಟ್ರಾಫಿಕ್ ಪೊಲೀಸರ ಮೇಲೆ ಹೊರಿಸುವುದು ಎಷ್ಟು ಸರಿ?

ಇನ್ನು ಯಾರೂ ರಸ್ತೆ ಗುಂಡಿಗಳಿಗೆ ಬಲಿಯಾಗಬಾರದು. ಸರಕಾರವೇ, ಎಚ್ಚರಿಕೆ! ಇದು ಜನರ ಅಗ್ರಹ
ನಮ್ಮ ಆಡಳಿತ ಮತ್ತು NHAI ಕಂಬಳಿ ಹಾಕಿ ಮಲಗಿದ್ದರೂ, ಟ್ರಾಫಿಕ್ ಪೊಲೀಸರು ದಿನದ 24 ಗಂಟೆಯೂ ಎಚ್ಚರದಿಂದ ಜನರ ಸುರಕ್ಷತೆಗಾಗಿ ಶ್ರಮಿಸುತ್ತಿದ್ದಾರೆ. ಆದರೆ, ಇದಕ್ಕೆ ಶಾಶ್ವತ ಪರಿಹಾರ ಬೇಕು. ಜನಪ್ರತಿನಿಧಿಗಳು ತಮ್ಮ ಎಸಿ ಕೊಠಡಿಗಳಿಂದ ಹೊರಬಂದು, ಜನಸಾಮಾನ್ಯರ ಕಷ್ಟವನ್ನು ಅರಿಯಬೇಕು. ಭ್ರಷ್ಟಾಚಾರದ ಕಾಮಗಾರಿಯನ್ನು ತಡೆಗಟ್ಟಿ, ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ಯಾರಾದರೂ ತೆಗೆದುಕೊಳ್ಳಬೇಕು.


