ಮಂಗಳೂರು, ಜೂನ್.29: ದಲಿತೋದ್ಧಾರಕ, ಸಾಮಾಜಿಕ ಸುಧಾರಣೆಯ ಹರಿಕಾರ, ಕುದ್ಮುಲ್ ರಂಗರಾವ್ ರವರ ಜನ್ಮದಿನದ ಅಂಗವಾಗಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಎಸ್ಸಿ ಮೋರ್ಚಾ ವತಿಯಿಂದ ಅತ್ತಾವರ ಬಾಬುಗುಡ್ಡೆಯಲ್ಲಿರುವ ಸ್ಮಾರಕಕ್ಕೆ ಪುಷ್ಪ ನಮನಗಳ ಸಹಿತ ಗೌರವ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು, ಪೂಜನೀಯ ಕುದ್ಮುಲ್ ರಂಗರಾಯರು ಶೋಷಿತರ ಅಭಿವೃದ್ಧಿಗಾಗಿ ಇಡೀ ಬದುಕನ್ನು ಮುಡಿಪಾಗಿಟ್ಟ ಮಹಾನ್ ಮಾನವತಾವಾದಿಗಳು. ಭಿಕ್ಷೆ ಬೇಡಿಯಾದರೂ ದಲಿತ ಬಂಧುಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುತ್ತೇನೆ ಎಂಬ ಅಚಲ ವಿಶ್ವಾಸ ಹೊಂದಿದ್ದವರು. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕೆಂದು ಪ್ರತಿ ವರ್ಷ ಮ.ನ.ಪಾ ವತಿಯಿಂದ ಜಯಂತಿ ಆಚರಣೆ ನಡೆಯುವಂತೆ, ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಕಾಂಗ್ರೆಸ್ ನೇತೃತ್ವದ ಪಾಲಿಕೆಯು ಕಳೆದ ವರ್ಷ ಎಲ್ಲವನ್ನು ಕಡೆಗಣಿಸಿ ಜಯಂತಿ ಆಚರಿಸದಿದ್ದದ್ದು ದುರದೃಷ್ಟಕರ. ಇದೀಗ ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್, ಅಖಿಲ ಭಾರತ ಮುಂಡಾಲ ಯುವ ವೇದಿಕೆ ಸಹಿತ ನಮ್ಮೆಲ್ಲರ ಆಗ್ರಹದ ನಂತರ ಬಿಜೆಪಿಯ ನಿರ್ಣಯದಂತೆ ಪಾಲಿಕೆ ವತಿಯಿಂದಲೇ ಜಯಂತಿ ಆಚರಣೆ ನಡೆದಿರುವುದು ಸಮಾಧಾನಕರ ಸಂಗತಿ ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿ ಲಲ್ಲೇಶ್ ಕುಮಾರ್, ಕಾರ್ಯದರ್ಶಿ ರಘುವೀರ್ ಬಾಬುಗುಡ್ಡೆ, ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಬಿ.ಆರ್ ಹೃದಯನಾಥ್, ಉಪಾಧ್ಯಕ್ಷರಾದ ಶಾಮ ಕರ್ಕೇರ, ಪ್ರಮುಖರಾದ ಶೈಲೇಶ್ ಶೆಟ್ಟಿ, ಭಾನುಮತಿ ಪಿ.ಎಸ್, ಭರತ್ ಕುಮಾರ್, ನಿತಿನ್ ಕುಮಾರ್, ದೀಪಕ್ ಪೈ, ಮೋಹನ್ ಪೂಜಾರಿ, ಪುಷ್ಪರಾಜ್ ಶೆಟ್ಟಿ, ರವಿ ಕಾಪಿಕಾಡ್, ರಾಜೇಂದ್ರ, ಯಶವಂತ ಕುದ್ರೋಳಿ, ಅಶ್ವಿತ್ ಕೊಟ್ಟಾರಿ, ರಘುವೀರ್ ಸೂಪರ್ ಪೇಟೆ, ವಸಂತ್ ಬಂಗೇರ, ಕಸ್ತೂರಿ, ಅನಿತಾ ದಯಾಕರ್, ಬಿ.ಎಸ್ ಶಶಿಕಾಂತ್, ಸೇರಿದಂತೆ ಟ್ರಸ್ಟ್ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.