ಮಂಗಳೂರು: ಹದಿನಾರು ವರ್ಷಗಳ ಹಿಂದೆ (2010ರ ಮೇ 22) ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿಗಳಿಗೆ ‘ಸಾಮರಸ್ಯ ಮಂಗಳೂರು’ ಸಂಘಟನೆಯ ಪದಾಧಿಕಾರಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಸಂಸ್ಥೆಯ ಪದಾಧಿಕಾರಿಗಳು ತಣ್ಣೀರುಭಾವಿ ಬಳಿ ನಿರ್ಮಿಸಲಾಗಿರುವ ವಿಮಾನ ದುರಂತದ ಸ್ಮಾರಕಕ್ಕೆ ತೆರಳಿ, ಪುಷ್ಪ ನಮನ ಸಲ್ಲಿಸುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪದಾಧಿಕಾರಿಗಳು, “ಮಂಗಳೂರು ವಿಮಾನ ದುರಂತವು ಭಾರತದ ವಿಮಾನಯಾನ ಇತಿಹಾಸದಲ್ಲಿ ಒಂದು ಕರಾಳ ಘಟನೆಯಾಗಿ ಉಳಿದಿದೆ. ಈ ಭೀಕರ ದುರಂತವು ವಿಮಾನಯಾನ ಸುರಕ್ಷತೆಯ ಕಡೆಗೆ ಹೆಚ್ಚಿನ ಗಮನ ಹರಿಸಲು ಮತ್ತು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸದಾ ಎಚ್ಚರಿಕೆಯ ಕರೆಯಾಗಿದೆ” ಎಂದು ಅಭಿಪ್ರಾಯಪಟ್ಟರು.
ಈ ಸಂಸ್ಮರಣಾ ಸಭೆಯಲ್ಲಿ ‘ಸಾಮರಸ್ಯ ಮಂಗಳೂರು’ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ನಾಯಕ್, ಪ್ರಮುಖರಾದ ರೇಣುಕಾ ಶೆಟ್ಟಿ, ಪ್ರತಿಭಾ ಶೆಟ್ಟಿ, ಚಿತ್ರ ಕಿಣಿ, ವಿದ್ಯಾ ಶೆಣೈ, ಮಮತಾ ಕುಡ್ವ ಮತ್ತಿತರರು ಉಪಸ್ಥಿತರಿದ್ದು, ಮೃತರ ಸ್ಮರಣೆ ಮಾಡಿದರು.