ಮಂಗಳೂರು, ಜೂನ್. 01 : ಮಂಗಳೂರು ಧರ್ಮಪ್ರಾಂತ್ಯದ ಯುವ ಜನತೆಯನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿಯನ್ನು ಧರ್ಮಾಧ್ಯಕ್ಷರು ನೀಡಿದ್ದಾರೆ. ಯುವ ಜನತೆ ಪವಿತ್ರ ಸಭೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಅವರಿಗೆ ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಸಿಕ್ಕಿದೆ. ಈ ಹಿಂದಿನ ನಿರ್ದೇಶಕರ ಸಲಹೆಗಳನ್ನು ಪಡೆದುಕೊಂಡು ಯುವ ಜನತೆಯನ್ನು ಸಂಘಟಿಸಿ ಅವರ ಸರ್ವತೋಮುಖ ಪ್ರಗತಿಗೆ ಶ್ರಮಿಸಲಾಗುವುದು. ಧರ್ಮಸಭೆ ಹಾಗೂ ಸಮಾಜದಲ್ಲಿ ಉತ್ತಮ ನಾಗರಿಕರಾಗುವ ಜತೆಗೆ ಜೀವನದ ಗುರಿ ಸಾಧಿಸಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಂ ಕೇಂದ್ರೀಯ ಸಮಿತಿಯ ನೂತನ ನಿರ್ದೇಶಕ ವಂ| ಪ್ರವೀಣ್ ಡಿಸೋಜ ಅವರು ಹೇಳಿದರು.

ನಿರ್ಗಮಿತ ನಿರ್ದೇಶಕ ವಂ| ಅಶ್ವಿನ್ ಕಾರ್ಡೊಜ ಅವರು ಮಾತನಾಡಿ, ಯುವಜನತೆಯನ್ನು ಮುನ್ನಡೆಸುವ ವೇಳೆ ಹಲವು ಸವಾಲುಗಳು ಎದುರಾಗಿತ್ತು. ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಸ್ವೀಕರಿಸಿದ ಕಾರಣ ಕಳೆದ 8 ವರ್ಷಗಳ ಸುದೀರ್ಘ ಅವಧಿಯನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಾಗಿದೆ. ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಚರ್ಚ್ ಗಳ ಯುವ ಜನತೆ ಉತ್ತಮ ಸಹಕಾರ ನೀಡಿದ ಕಾರಣದಿಂದ ವಿವಿಧ ಯೋಜನೆ, ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯವಾಗಿದೆ. ಕೇಂದ್ರೀಯ ಸಮಿತಿ ಹಾಗೂ ಮಂಗಳೂರು ಧರ್ಮಪ್ರಾಂತ್ಯ ಸದಾ ಯುವಜನತೆಯ ಬಗ್ಗೆ ಯೋಚಿಸಿ ಮುನ್ನಡೆಯುತ್ತಿದೆ ಎಂದರು.
ಮಂಗಳಜ್ಯೋತಿ ಸಂಸ್ಥೆಯ ನಿರ್ದೇಶಕ ವಂ| ಸಂತೋಷ್ ಎಸ್. ರೊಡ್ರಿಗಸ್, ಕೂಳೂರು ಚರ್ಚ್ ನ ಧರ್ಮಗುರು ವಂ| ವಿಜಯ್ ವಿಕ್ಟರ್ ಲೋಬೊ, ಮುಕ್ಕ ಚರ್ಚ್ ನ ಧರ್ಮಗುರು ವಂ| ಸ್ಟ್ಯಾನಿ ಪಿಂಟೊ ಸಹಿತ ಹಲವು ಧರ್ಮಗುರುಗಳು ಇದ್ದರು.
ವಂ| ಪ್ರವೀಣ್ ಅವರು 2012ರಲ್ಲಿ ಯಾಜಕ ದೀಕ್ಷೆ ಪಡೆದು, ವಲೆನ್ಶಿಯಾ, ಬಜಪೆ, ಮಡಂತ್ಯಾರು, ಪುತ್ತೂರು ಚರ್ಚ್ ಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. ಮಂಜೊಟ್ಟಿ ಚರ್ಚ್ ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ ಬಳಿಕ ಐಸಿವೈಎಂ ಕೇಂದ್ರೀಯ ಸಮಿತಿಗೆ ನಿಯೋಜಿತ ನಿರ್ದೇಶಕರಾಗಿ ಬೆಂಗಳೂರಿನ ಕ್ರಿಸ್ತ ಜ್ಯೋತಿ ಸಂಸ್ಥೆಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.