ವಿಟ್ಲ, ಪೆರುವಾಯಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜುಲೈ 6, ಸೋಮವಾರ ನಡೆಯಬೇಕಿದ್ದ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಕೋರಂ (ಕನಿಷ್ಠ ಸಾರ್ವಜನಿಕರ ಹಾಜರಾತಿ) ಕೊರತೆಯಿಂದಾಗಿ ರದ್ದಾಗಿದೆ. ಅಧಿಕಾರಿಗಳ ವಿಳಂಬ ಪ್ರವೃತ್ತಿ ಮತ್ತು ಸಭೆ ರದ್ದತಿಯಿಂದಾಗಿ ಸಭೆಗೆ ಆಗಮಿಸಿದ್ದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪೂರ್ವಾಹ್ನ 11:00 ಗಂಟೆಗೆ ಆರಂಭವಾಗಬೇಕಿದ್ದ ಸಭೆಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಲಿಲ್ಲ. ತಡವಾಗಿ ಬಂದ ಅಧಿಕಾರಿಗಳು ನಾಡಗೀತೆಯೊಂದಿಗೆ ಸಭೆ ಆರಂಭಿಸಲು ಮುಂದಾದರು. ಆದರೆ, ನಿಯಮಾನುಸಾರ ಗ್ರಾಮ ಸಭೆಗೆ ಇರಬೇಕಾದ ಕನಿಷ್ಠ ಗ್ರಾಮಸ್ಥರ ಹಾಜರಾತಿ ಇಲ್ಲದ ಕಾರಣ,ಸ್ಥಳೀಯರಾದ ಯತೀಶ್ ಪೆರುವಾಯಿ ಎಂಬವರು ಕೋರಂ ಇಲ್ಲದೆ ಸಭೆ ನಡೆಸುವುದು ಅಸಾಧ್ಯ ಎಂದು ತಕರಾರು ಎತ್ತಿ ಪ್ರಶ್ನಿಸಿದರು.

ಇದಾದ ಬಳಿಕವೂ ಸುಮಾರು ಮಧ್ಯಾಹ್ನ 12:30ರ ತನಕ ಕಾದರೂ ನಿರೀಕ್ಷಿತ ಸಂಖ್ಯೆಯಲ್ಲಿ ಗ್ರಾಮಸ್ಥರು ಬಾರದ ಕಾರಣ ಅಂತಿಮವಾಗಿ ಸಭೆಯನ್ನು ರದ್ದುಗೊಳಿಸಲಾಯಿತು. ಇದರಿಂದಾಗಿ ಗ್ರಾಮದ ಪ್ರಗತಿ ಹಾಗೂ ಮುಂದಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ನಡೆಯಬೇಕಿದ್ದ ಮಹತ್ವದ ಚರ್ಚೆಗಳು ನಡೆಯದೆ ಸಭೆ ಅರ್ಧಕ್ಕೆ ರದ್ದುಗೊಂಡಿದೆ.

ಸಭೆ ಆರಂಭದಲ್ಲಿ ಗ್ರಾಮಸ್ಥರಾದ ಗೋಪಾಲ್ ಶೆಟ್ಟಿ ಸಭೆಗೆ ಬಂದ ಅಧಿಕಾರಿಗಳ ಮಾಹಿತಿಯನ್ನು ಕೇಳಿದರು. ಕೃಷಿ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಯತೀಶ್ ಪೆರುವಾಯಿ ಮಾತನಾಡಿ ಈ ಹಿಂದೆ ಪೆರುವಾಯಿ ಗ್ರಾಮ ಪಂಚಾಯತ್ನ ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ದೀಪಕ್ ರಾಜ್ ರವರು ರಾಜಕೀಯ ಒತ್ತಡಕ್ಕೆ ಮಣಿದು, ನಾನು ಸಾರ್ವಜನಿಕರ ಪರವಾಗಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯ ಕುರಿತು ದೂರವಾಣಿ ಮೂಲಕ ಪ್ರಶ್ನೆ ಮಾಡಿದ ಸಂದರ್ಭದಲ್ಲಿ, “ನೀನು ಜನಪ್ರತಿನಿಧಿಯಾ?” ಎಂಬ ಅವಹೇಳನಕಾರಿ ಧೋರಣೆಯಲ್ಲಿ ನನ್ನೊಂದಿಗೆ ಅಸೌಜನ್ಯದಿಂದ ವರ್ತಿಸಿದ್ದರು. ಅಸೌಜನ್ಯದಿಂದ ವರ್ತಿಸಿರುವುದನ್ನು ತೀವ್ರವಾಗಿ ಖಂಡಿಸಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವವರೆಗೆ ಈ ವಿಷಯವನ್ನು ಮುಂದುವರಿಸಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇವೆ. ಹಾಗೂ ಸಭೆಯಲ್ಲಿ ಕೋರಂ ಇಲ್ಲದೇ ಇರುವುದರಿಂದ ಗ್ರಾಮ ಸಭೆಯನ್ನು ತಡೆದು ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಯಿತು.

ಕೆಲವು ವ್ಯಕ್ತಿಗಳದ ಸಭೆ ಮೊಟಕು; ಗ್ರಾಮಸ್ಥರ ಆಕ್ರೋಶ: ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದರು ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳೊಂ ದಿಗೆ ಹಂಚಿಕೊಳ್ಳಲು ಅವಕಾಶ ವಂಚಿತರಾಗಿದ್ದೇವೆ. ಕೆಲವೇ ಕೆಲವು ವ್ಯಕ್ತಿಗಳಿಂದ ಸಭೆಯಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆ ಹೇಳಲು ಅವಕಾಶ ವಂಚಿತರಾಗಿದ್ದಾರೆ. ಇದರಿಂದ ಸಾರ್ವಜನರಿಗೆ ಸಮಸ್ಯೆ ಆಗಿರುತ್ತದೆ. ಆದ್ದರಿಂದಲೇ ಗ್ರಾಮಸ್ಥರು ಗ್ರಾಮ ಸಭೆಗೆ ಬರುವುದನ್ನು ನಿಲ್ಲಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಪ್ರಸ್ತಾಪನೆಗಳು, ಸಲಹೆ ಹಾಗೂ ಸೂಚನೆಗಳನ್ನು ನೀಡಲು ಸಾರ್ವಜನಿಕರಿಗೆ ಇದ್ದ ಅವಕಾಶ ಇದರಿಂದ ಕೈತಪ್ಪಿ ಹೋಗಿದೆ ಎಂದು ಸಭೆಗೆ ಬಂದಿದ್ದ ಗ್ರಾಮಸ್ಥರೊಬ್ಬರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.


