ವಿಟ್ಲ.ಎಪ್ರಿಲ್ 24: ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದ ವತಿಯಿಂದ 1ನೇ ತರಗತಿಯಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಬೇಸಿಗೆ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಶಿಬಿರದಲ್ಲಿ ಒಟ್ಟು 56 ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಫಾತಿಮಾ ಮಾತಾ ಸಮುದಾಯ ಭವನದಲ್ಲಿ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ದೇವಾಲಯದ ಧರ್ಮಗುರುಗಳಾದ ವಂ| ಫಾ| ಸೈಮನ್ ಡಿ ಸೋಜಾ ಅವರು ವಹಿಸಿ, ಶಿಬಿರಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಡೆನ್ನಿಸ್ ಮೊಂತೆರೊ, ಕಾರ್ಯದರ್ಶಿ ವಿನ್ಸೆಂಟ್ ಡಿ ಸೋಜಾ, ಸರ್ವ ಆಯೋಗಗಳ ಸಂಚಾಲಕರಾದ ರಾಲ್ಫ್ ಡಿ ಸೋಜಾ ಹಾಗೂ ಕ್ರೈಸ್ತ ಶಿಕ್ಷಣ ಸಮಿತಿಯ ಸಂಚಾಲಕಿ ಲೀಡಿಯಾ ರೋಡ್ರಿಗಸ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾಗಿ ಶೆಲ್ಡನ್ ಡಿ ಸೋಜಾ ಮತ್ತು ಜಿಶೆಲ್ ಮೊಂತೆರೊ ಭಾಗವಹಿಸಿದ್ದರು.
ಮಂಗಳೂರಿನ ಸಂತ ಜೋಸೆಫ್ ಸೆಮಿನರಿಯ ಬ್ರ| ಡೆಲ್ಸನ್ ವಾಸ್ ಹಾಗೂ ಬ್ರ| ಓಸ್ಟನ್ ಡಿ ಸಿಲ್ವಾ ಅವರು ಶಿಬಿರವನ್ನು ನಡೆಸಿಕೊಟ್ಟರು. ಮಕ್ಕಳನ್ನು ನಾಲ್ಕು ತಂಡಗಳಾಗಿ ವಿಂಗಡಿಸಿ ಅವರಿಗೆ ವಿವಿಧ ಆಟೋಟಗಳು, ಹಾಡುಗಾರಿಕೆ, ಬೈಬಲ್ ಕ್ವಿಜ್, ಕಿರು ನಾಟಕ ಹಾಗೂ ಅಭಿನಯ ಗೀತೆಗಳಂತಹ ಆಕರ್ಷಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಶಿಬಿರವು ಪೂರಕವಾಗಿತ್ತು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗಾಗಿ ಶಿಕ್ಷಕಿಯರಾದ ಜ್ಯೋತಿ ಡಿ ಸೋಜಾ ಮತ್ತು ಲೀಡಿಯಾ ರೋಡ್ರಿಗಸ್ ಶ್ರಮಿಸಿದರು. ಸ್ತ್ರೀ ಸಂಘಟನೆಯ ಸದಸ್ಯರು ಶಿಬಿರಾರ್ಥಿಗಳಿಗೆ ರುಚಿಕರವಾದ ಆಹಾರದ ವ್ಯವಸ್ಥೆ ಮಾಡಿದ್ದರು. ಅನೇಕ ದಾನಿಗಳು ಹಾಗೂ ಹಿತೈಷಿಗಳು ಈ ಶಿಬಿರಕ್ಕೆ ಆರ್ಥಿಕ ಮತ್ತು ನೈತಿಕ ಬೆಂಬಲ ನೀಡಿದರು.


