ವಿಟ್ಲ: ಮಾಣಿಲ:ಪ್ರಖ್ಯಾತ ಪುಣ್ಯಕ್ಷೇತ್ರವಾದ ಶ್ರೀಧಾಮ ಮಾಣಿಲದಲ್ಲಿ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ, ಕಳೆದ 25 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ‘ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ’ಯ 26ನೇ ವರ್ಷದ ಧಾರ್ಮಿಕ ಮಹೋತ್ಸವಕ್ಕೆ ಈ ವರ್ಷವೂ ಅತ್ಯಂತ ವಿಜೃಂಭಣೆಯಿಂದ ಚಾಲನೆ ದೊರೆತಿದೆ.


48 ದಿನಗಳ ನಿರಂತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಸೇವೆಗಳು: ಮಂಡಲಾವಧಿಯ 48 ದಿನಗಳ ಕಾಲ ಶ್ರೀಧಾಮದಲ್ಲಿ ಪ್ರತಿದಿನವೂ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಭಕ್ತಿಪೂರ್ವಕವಾಗಿ ನಡೆಯುತ್ತಿವೆ. ಈ ಸುದೀರ್ಘ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಮತ್ತು ಮಹಾಪೂಜೆ,ನಾಗದೇವರ ಪೂಜೆ ಮತ್ತು ಆಶ್ಲೇಷಾ ಬಲಿ,ಗೋಮಾತಾ ಪೂಜೆ ಮತ್ತು ಕನಕಧಾರಾ ಯಾಗ,ಶ್ರೀ ದುರ್ಗಾ ಪೂಜೆ ಮತ್ತು ಸಾಮೂಹಿಕ ಕುಂಕುಮಾರ್ಚನೆ,ವಾಯನದಾನ ಮತ್ತು ನಿರಂತರ ಅನ್ನಪ್ರಸಾದ ಸೇವೆ ವಿಶೇಷ ಪೂಜೆಗಳು ಜರುಗಲಿವೆ:

ಅವಧೂತರ ಸ್ಮರಣೆ – ನಿರಂತರ ಬಾಲಭೋಜನ:
ಭಗವಾನ್ ಸ್ವರೂಪಿ ಅವಧೂತ ಸದ್ಗುರು ಶ್ರೀ ಶ್ರೀ ನಿತ್ಯಾನಂದ ಸ್ವಾಮೀಜಿಯವರ ಮಹಾನ್ ಕೈಂಕರವಾಗಿದ್ದ ‘ಬಾಲಭೋಜನ’ ಸೇವೆಯು, ಸದ್ಗುರುಗಳ ಆಶೀರ್ವಾದದಂತೆ ಪ್ರತಿನಿತ್ಯವೂ ಶ್ರೀಧಾಮ ಮಾಣಿಲದಲ್ಲಿ ನಿರಂತರವಾಗಿ ಜರುಗುತ್ತಿರುವುದು ಈ ಕ್ಷೇತ್ರದ ವಿಶೇಷತೆಯಾಗಿದೆ. ಪೂಜೆ ಮತ್ತು ಯಾಗಾದಿಗಳಿಗೆ ಭಕ್ತರೇ ಪ್ರೀತಿಯಿಂದ ತಮ್ಮ ತೋಟಗಳಲ್ಲಿ ಬೆಳೆಸಿ ತರುವ ಸ್ಥಳೀಯ ಹೂವುಗಳಿಂದಲೇ ಪ್ರತಿದಿನ ದೇವಿಗೆ ನಯನಮನೋಹರ ಪುಷ್ಪಾಲಂಕಾರ ಮಾಡಲಾಗುತ್ತಿದೆ.

ಭಕ್ತರಿಗೆ ವಿಶೇಷ ಸೌಭಾಗ್ಯ – ಒಂದು ದಿನದ ಸೇವೆ:
ದಿನದ ಸೇವೆ: ಈ 48 ದಿನಗಳ ಸುದೀರ್ಘ ಪೂಜಾ ವಿಧಿವಿಧಾನಗಳಲ್ಲಿ ಭಕ್ತರು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಕ್ಷೇತ್ರವು ವಿಶೇಷ ಅವಕಾಶ ಕಲ್ಪಿಸಿದೆ. ಭಗವದ್ಭಕ್ತರು ಈ ಅವಧಿಯಲ್ಲಿ ತಮಗೆ ಇಚ್ಛಿತವಾದ ಯಾವುದಾದರೂ ಒಂದು ದಿನವನ್ನು ತಮ್ಮದಾಗಿಸಿಕೊಂಡು, ಕುಟುಂಬ ಸಮೇತರಾಗಿ ಶ್ರೀಧಾಮಕ್ಕೆ ಆಗಮಿಸಿ ಶ್ರೀ ಲಕ್ಷ್ಮೀ ಪೂಜೆಯನ್ನು ನೆರವೇರಿಸಿ ತಾಯಿಯ ಹಾಗೂ ಜಗದ್ಗುರುಗಳ ಕೃಪೆಗೆ ಪಾತ್ರರಾಗಬಹುದಾಗಿದೆ ಎಂದು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದ್ದಾರೆ










