ಬಂಟ್ವಾಳ, ಜುಲೈ 18: ಧಾರ್ಮಿಕ ಸಂಸ್ಥೆಗಳು ಕೇವಲ ಆರಾಧನೆಯ ಕೇಂದ್ರಗಳಾಗಿರದೆ, ಸಮಾಜದಲ್ಲಿ ಶಿಕ್ಷಣ, ಸೇವೆ, ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೇಂದ್ರಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಬಿ. ರಮಾನಾಥ ರೈ ಹೇಳಿದ್ದಾರೆ.
ಅಕ್ಕರಂಗಡಿ–ಪಾಣೆಮಂಗಳೂರಿನ ಕೇಂದ್ರ ಜುಮಾ ಮಸೀದಿಯಲ್ಲಿ ಆಯೋಜಿಸಲಾಗಿದ್ದ ಸ್ಮರಣಿಕೆ ಬಿಡುಗಡೆ, ಮದ್ರಸ ಉಸ್ತಾದರ ವಾಸ್ತವ್ಯದ ನೂತನ ಕಟ್ಟಡ ಮತ್ತು ಮರ್ಹೂಂ ನಸೀಮಾ ಬಾನು ಸ್ಮರಣಾರ್ಥ ಮಹಿಳಾ ಯಾತ್ರಿಕರ ನಮಾಝಿನ ಕೊಠಡಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಶುಭ ಹಾರೈಸಿದರು.
ಬಳಿಕ ಮಾತನಾಡಿದ ಅವರು, ಮದ್ರಸ ಉಸ್ತಾದರ ವಾಸ್ತವ್ಯಕ್ಕೆ ಹಾಗೂ ಮಹಿಳಾ ಯಾತ್ರಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಈ ಕಟ್ಟಡಗಳು ಸಮಾಜಮುಖಿ ಕಾರ್ಯಗಳಿಗೆ ಉತ್ತಮ ಮಾದರಿಯಾಗಿವೆ. ಧಾರ್ಮಿಕ ಕೇಂದ್ರಗಳ ಇಂತಹ ಅಭಿವೃದ್ಧಿ ಕಾರ್ಯಗಳಿಗೆ ಸಮಾಜದ ಎಲ್ಲ ವರ್ಗಗಳ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಸೀದಿಯ ಆಡಳಿತ ಮಂಡಳಿ ಪದಾಧಿಕಾರಿಗಳು, ಧಾರ್ಮಿಕ ಮುಖಂಡರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.



