ಮಂಗಳೂರು : ಜನತಾದಳ (ಜಾತ್ಯತೀತ) ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕದ ವತಿಯಿಂದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಸಂಘಟನಾ ಸಭೆಯು ಮಂಗಳವಾರ ಮಂಗಳೂರಿನ ಹೋಟೆಲ್ ವುಡ್ಲ್ಯಾಂಡ್ಸ್ನಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಪಕ್ಷದ ತಳಮಟ್ಟದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಪ್ರಮುಖ ಚರ್ಚೆಗಳು ನಡೆದವು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು ಅವರು, “ಮಹಿಳೆಯರು ರಾಜಕೀಯ, ಸಾಮಾಜಿಕ ಹಾಗೂ ಸಾರ್ವಜನಿಕ ಸೇವಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಪಕ್ಷದ ತತ್ವ-ಸಿದ್ಧಾಂತಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ, ಸದಸ್ಯತ್ವ ವಿಸ್ತರಣೆ ಮತ್ತು ಹೊಸ ನಾಯಕತ್ವ ಬೆಳೆಸುವಲ್ಲಿ ಮಹಿಳಾ ಘಟಕದ ಪಾತ್ರ ಅತ್ಯಂತ ಮಹತ್ವದ್ದಾಗಿದೆ” ಎಂದು ಒತ್ತಿ ಹೇಳಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಮೀಝಾ ಬಾನು ಅವರು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಪಕ್ಷದ ತತ್ವಗಳನ್ನು ಮನೆಮನೆಗೆ ತಲುಪಿಸುವ ಜವಾಬ್ದಾರಿ ಮಹಿಳಾ ಕಾರ್ಯಕರ್ತೆಯರ ಮೇಲಿದೆ. ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ನಿರ್ವಹಿಸಿ, ಪಕ್ಷವನ್ನು ತಳಮಟ್ಟದಿಂದ ಸಶಕ್ತಗೊಳಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮವು ಶಾರದಾ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಜ್ಯೋತಿ ಜೈನ್ ಅವರ ಸ್ವಾಗತ ಭಾಷಣದೊಂದಿಗೆ ಮುಂದುವರಿಯಿತು. ಸಭೆಯಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಶ್ರೀಮಣಿ ಆರ್. ಶೆಟ್ಟಿ ಮತ್ತು ಕಾನೂನು ಸಲಹೆಗಾರರಾದ ಭಾರತಿ ಪುಷ್ಪರಾಜನ್ ಸೇರಿದಂತೆ ಹಲವು ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ಮಹಿಳಾ ಘಟಕದ ನೂತನ ಪದಾಧಿಕಾರಿಗಳು
• ಕಾರ್ಯಾಧ್ಯಕ್ಷೆ – ಪ್ರಿಯ ಸಾಲಿಯಾನ್
• ಪ್ರಧಾನ ಕಾರ್ಯದರ್ಶಿ – ಜ್ಯೋತಿ ಜೈನ್
• ಹಿರಿಯ ಉಪಾಧ್ಯಕ್ಷೆ – ಚೂಡಾಮಣಿ ಎಲ್. ಬಂಗೇರ
• ಉಪಾಧ್ಯಕ್ಷೆಯರು – ಶಾರದಾ ಶೆಟ್ಟಿ
• ಕಾರ್ಯದರ್ಶಿಯರು – ಸಲೀಮಾ ಖಾದರ್, ರಾಜೇಶ್ವರಿ ಉಳ್ಳಾಲ್
• ಸಂಘಟನಾ ಕಾರ್ಯದರ್ಶಿಯರು – ಪ್ಲೇವಿಯನ್, ತಾರಾ ಯು.ಆರ್. ಶೆಟ್ಟಿ (ಕಿನ್ನಿಗೋಳಿ)
ತಾಲೂಕು ಮಹಿಳಾ ಘಟಕಗಳ ಅಧ್ಯಕ್ಷೆಯರಾಗಿ:
• ಪುತ್ತೂರು – ಮೀನಾಕ್ಷಿ ಎಂ.
• ಮಂಗಳೂರು ಉತ್ತರ – ಮೋಹಿನಿ ಶೆಟ್ಟಿ
• ಮಂಗಳೂರು ದಕ್ಷಿಣ – ವೀಣಾ ಶೆಟ್ಟಿ
• ಉಳ್ಳಾಲ – ಜೋಹರ ಅವರನ್ನು ನೇಮಕ ಮಾಡಲಾಯಿತು.
ಸಭೆಯು ಮಹಿಳಾ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಮಹಿಳಾ ಘಟಕದ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.