ಬಂಟ್ವಾಳ: ಸಂತ ಜೋಸೆಫ್ ಚರ್ಚ್ ಬೊರಿಮಾರು ಹಾಗೂ ಐ.ಸಿ.ವೈ.ಎಂ. (ICYM) ಬೊರಿಮಾರು ಘಟಕದ ಕುರಿತು ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಸತ್ಯಾಸತ್ಯತೆಯಿಲ್ಲದ ಮತ್ತು ದಾರಿತಪ್ಪಿಸುವ ಸುದ್ದಿಗಳು ಪ್ರಕಟವಾಗುತ್ತಿದ್ದು, ಈ ಕುರಿತು ಸಾರ್ವಜನಿಕರಿಗೆ ನೈಜ ಸಂಗತಿಯನ್ನು ತಿಳಿಸಲು ಈ ಮಾಧ್ಯಮ ಸ್ಪಷ್ಟನೆ ನೀಡಲಾಗುತ್ತಿದೆ.

ಇತ್ತೀಚೆಗೆ ನಡೆದ ಬೊರಿಮಾರು ಐ.ಸಿ.ವೈ.ಎಂ. ಘಟಕದ ಚುನಾವಣೆಯು ಕೇಂದ್ರೀಯ ಸಮಿತಿಯ ನಿಯಮಾವಳಿಗಳಿಗೆ ಅನುಸಾರವಾಗಿ ಅತ್ಯಂತ ಪಾರದರ್ಶಕ ಮತ್ತು ವ್ಯವಸ್ಥಿತವಾಗಿ ನಡೆದಿದೆ. ಈ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ಅನಿಯಮಿತತೆಗಳು ಸಂಭವಿಸಿಲ್ಲ.

ಚರ್ಚಿನ ಅಭಿವೃದ್ಧಿ ಮತ್ತು ಪ್ರಗತಿಯನ್ನು ಸಹಿಸದ ಕೆಲವು ವ್ಯಕ್ತಿಗಳು ವೈಯಕ್ತಿಕ ದ್ವೇಷ ಹಾಗೂ ಅಸಮಾಧಾನದ ಹಿನ್ನೆಲೆಯಲ್ಲಿ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಚರ್ಚ್ ಸಮಿತಿಯಲ್ಲಿದ್ದು, ತಮ್ಮ ದುರ್ವರ್ತನೆಯ ಕಾರಣದಿಂದಾಗಿ ಪ್ರಸ್ತುತ ಸಮಿತಿಯಿಂದ ಹೊರಗುಳಿದಿರುವ ಕೆಲವು ಮಾಜಿ ಸದಸ್ಯರು ಹತಾಶೆ ಮತ್ತು ಮತ್ಸರದಿಂದ ಧಾರ್ಮಿಕ ಸಂಸ್ಥೆಯ ಹೆಸರಿಗೆ ಧಕ್ಕೆ ತರಲು ಇಂತಹ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ.

ನಮ್ಮ ಐ.ಸಿ.ವೈ.ಎಂ. ಘಟಕದ ಯುವಜನರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಮತ್ತು ಅವರೆಲ್ಲರೂ ಒಗ್ಗಟ್ಟಾಗಿದ್ದಾರೆ. ಕೆಲವು ಸ್ಥಳೀಯ ಹಳದಿ ಮಾಧ್ಯಮಗಳು ಯುವಜನರ ಮಧ್ಯೆ ದ್ವೇಷ ಮೂಡಿಸುವ ವ್ಯರ್ಥ ಪ್ರಯತ್ನವನ್ನು ಮಾಡುವ ಬದಲು, ಸತ್ಯಾಸತ್ಯತೆಯನ್ನು ಅರಿತು ಜವಾಬ್ದಾರಿಯುತವಾಗಿ ವರ್ತಿಸಬೇಕಿದೆ. ಎಂದು ಬೊರಿಮಾರು ಸಂತ ಜೋಸೆಫರ ದೇವಾಲಯ ಧರ್ಮಗುರು ಫಾದರ್ ಪ್ಯಾಟ್ರಿಕ್ ಸಿಕ್ವೇರಾ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

