canaratvnews

ಗುಣಪಾಲ ಕಡಂಬರನ್ನು ತೇಜೋವಧೆಗೈದ ಲೋಕೇಶ್ ಶೆಟ್ಟಿ ಜಿಲ್ಲಾ ಕಂಬಳ ಸಮಿತಿಯಿಂದ ಉಚ್ಛಾಟನೆ: ನಿರ್ಣಯ

ಮೂಡುಬಿದಿರೆ: ‘ಕಂಬಳ ಕ್ಷೇತ್ರಕ್ಕೆ ಕೊಡುಗೆ ನೀಡಿದ ಗುಣಪಾಲ ಕಡಂಬ ಅವರನ್ನು ತೇಜೋವಧೆ ಮಾಡಿದ ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು ಅವರನ್ನು ಸಮಿತಿಯಿಂದ ಉಚ್ಚಾಟಿಸಬೇಕು’ ಎಂದು ಕಂಬಳ ಅಭಿಮಾನಿಗಳ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಕಂಬಳ ಕೋಣಗಳ ಯಜಮಾನ ಹರ್ಷವರ್ಧನ ಪಡಿವಾಳ್ ಅಧ್ಯಕ್ಷತೆ ವಹಿಸಿದ್ದರು. ‘ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕಂಬಳ ಸೇರಿದಂತೆ ಜಿಲ್ಲೆಯ ಕೆಲವು ಕಂಬಳಗಳಲ್ಲಿ ಲೋಕೇಶ್ ಶೆಟ್ಟಿ ಅವರು ಗುಣಪಾಲ ಕಡಂಬ ಅವರನ್ನು ಟೀಕಿಸಿ ತೇಜೋವಧೆ ಮಾಡಿದ್ದಾರೆ. ಕಂಬಳದ ಹಿರಿಯ ವ್ಯಕ್ತಿ ಜತೆ ಲೋಕೇಶ್ ಶೆಟ್ಟಿ ನಡೆದುಕೊಂಡ ರೀತಿ ಖಂಡನೀಯ.

ಲೋಕೇಶ್ ಶೆಟ್ಟಿ ಪದೇ ಪದೇ ಅಶಿಸ್ತಿನಿಂದ ವರ್ತಿಸುತ್ತಿರುವುದರಿಂದ ಅವರನ್ನು ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಹುದ್ದೆ ಮತ್ತು ರಾಜ್ಯ ಕಂಬಳ ಅಸೋಸಿಯೇಷನ್ ಖಜಾಂಚಿ ಹುದ್ದೆಯಿಂದ ತಕ್ಷಣ ವಜಾ ಮಾಡಬೇಕು’ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ‘ಗುಣಪಾಲ ಕಡಂಬ ಅವರನ್ನು ಅವಹೇಳನ ಮಾಡಿದ ಲೋಕೇಶ್ ಶೆಟ್ಟಿ ಮುಂದಿನ ಮಿಯ್ಯಾರು ಕಂಬಳದಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು. ಕಂಬಳ ಕ್ಷೇತ್ರದ ಯಾವುದೇ ವ್ಯಕ್ತಿಗೆ ಅವಮಾನವಾದರೆ ತೀವ್ರ ರೀತಿಯ ಹೋರಾಟ ಮಾಡುತ್ತೇವೆ’ ಎನ್ನುವ ನಿರ್ಣಯ ಕೈಗೊಳ್ಳಲಾಯಿತು.

ಕಂಬಳದ ವ್ಯವಸ್ಥಾಪಕರಿಗೆ, ಕೋಣಗಳ ಯಜಮಾನರಿಗೆ ಜಿಲ್ಲಾ ಕಂಬಳ ಸಮಿತಿಯಲ್ಲಿ ಶುಲ್ಕರಹಿತವಾಗಿ ಸದಸ್ಯತ್ವ ನೀಡಬೇಕು. ಜಿಲ್ಲಾ ಕಂಬಳ ಸಮಿತಿ ಹಾಗೂ ರಾಜ್ಯ ಕಂಬಳ ಅಸೋಶಿಯೇಷನ್ ಪುನರ್ ರಚನೆ ಮಾಡಬೇಕು ಎಂಬ ಆಗ್ರಹ ಸಭೆಯಲ್ಲಿ ಕೇಳಿಬಂತು. ಕಂಬಳ ಕ್ಷೇತ್ರದ ಪ್ರಮುಖರಾದ ರಶ್ಮಿತ್ ಶೆಟ್ಟಿ, ಅನಿಲ್ ಶೆಟ್ಟಿ ಬಜ್ಪೆ, ಚಿತ್ತರಂಜನ್ ಭಂಡಾರಿ ಐಕಳ, ಮೂಲ್ಕಿ ಗೌತಮ್ ಜೈನ್, ಕೋಣಗಳ ಯಜಮಾನರಾದ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲಿಯಾನ್, ಬೇಲಾಡಿ ಬಾವ ಅಶೋಕ್ ಶೆಟ್ಟಿ, ಖಾಸಿಂ ವೇಣೂರು, ಜಗತ್ಪಾಲ ಶೆಟ್ಟಿ ಹೊಕ್ಕಾಡಿಗೋಳಿ, ಗಣೇಶ್ ನಾಯಕ್ ಪಂಡಿತ್, ಪದವು ಕಾನಡ್ಕದ ಡಾಲ್ಫಿ ಡಿಸೋಜ, ಸಾಣೂರು ಜಗದೀಶ್ ಪೂಜಾರಿ, ನಾಗೇಶ್ ದೇವಾಡಿಗ ಸುರತ್ಕಲ್, ತಡಂಬೈಲು ಸುರೇಶ್ ಶೆಟ್ಟಿ ಹರಿಮೀನಾಕ್ಷಿ ದೋಟ, ಸುಬ್ರಹ್ಮಣ್ಯ ಪ್ರಭು ಸುರತ್ಕಲ್, ಕಂಬಳ ಅಕಾಡೆಮಿಯ ಸುರೇಶ್ ಕೆ.ಪೂಜಾರಿ, ಸುಭಾಶ್ಚಂದ್ರ ಚೌಟ, ಜ್ವಾಲ ಪ್ರಸಾದ್, ಜಾನ್ ಸಿರಿಲ್ ಡಿಸೋಜ, ಕಂಬಳ ಓಟಗಾರ ಶ್ರೀನಿವಾಸ ಗೌಡ ಭಾಗವಹಿಸಿದ್ದರು.

Share News
Exit mobile version