ಮಂಗಳೂರು: ಸಿಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕರೋರ್ವರ 16 ಗ್ರಾಂ ತೂಕದ ಚಿನ್ನ ಕಳವಾದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ
ಸ್ವರ್ಷ ಎಂಬುವವರು ಜ.17 ರಂದು ಉಳ್ಳಾಲ ತಾಲೂಕಿನ ಉಳ್ಳಾಲ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಇರುವ ಕೆಥೋಲಿಕ್ ಪ್ರಾಥಮಿಕ ಸಹಕಾರ ಸಂಘದಲ್ಲಿ ಲಾಕರ್ ನಲ್ಲಿ ಇಟ್ಟಿದ್ದ 2 ಚಿನ್ನದ ಸರವನ್ನು ಬಿಡಿಸಿಕೊಂಡು ಬ್ಯಾಗ್ ನಲ್ಲಿ ಹಾಕಿ ಬಂದಿದ್ದರು.
ನಂತರ ಸುಮಾರು 12 ಗಂಟೆ ಸುಮಾರಿಗೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಕೊಲ್ಯದಲ್ಲಿರುವ ಅವರ ಮನೆಗೆ ಹೋಗಲು ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಹೋಗುವ ರೂಟ್ ನಂಬ್ರ 42ರಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿದ್ದರು.
ಈ ವೇಳೆ ರಸ್ತೆಯ ಮಧ್ಯೆ ಬಸ್ಸಿನಲ್ಲಿ ಕಳ್ಳರು ಅವರ ಬ್ಯಾಗ್ ನಲ್ಲಿದ್ದ 02 ಚಿನ್ನದ ಸರಗಳನ್ನು ಕಳವು ಮಾಡಿದ್ದಾರೆ. ಕಳವಾದ 02 ಚಿನ್ನದ ಸರಗಳು ಸುಮಾರು 16 ಗ್ರಾಂ ತೂಕವಿದ್ದು, ಅದರ ಅಂದಾಜು ಮೌಲ್ಯ ಸುಮಾರು 1,90,000 ರೂ ಆಗಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

