• Home  
  • ಮಕ್ಕಳ ಹೆಸರಲ್ಲಿ ಸಸಿ ನೆಟ್ಟು ಪೋಷಿಸಿ: ಪಿಯೂಸ್ ಎಲ್. ರೋಡ್ರಿಗಸ್
- HOME

ಮಕ್ಕಳ ಹೆಸರಲ್ಲಿ ಸಸಿ ನೆಟ್ಟು ಪೋಷಿಸಿ: ಪಿಯೂಸ್ ಎಲ್. ರೋಡ್ರಿಗಸ್

ಬಂಟ್ವಾಳ: ಜೂನ್ 06 :”ನಾವು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ವರ್ಷದ 365 ದಿನಗಳನ್ನೂ ಪರಿಸರ ದಿನಗಳನ್ನಾಗಿ ಆಚರಿಸಬೇಕು. ಹೆತ್ತವರು ತಮ್ಮ ಮಕ್ಕಳ ಹೆಸರಿನಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಬೇಕು” ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಹಾಗೂ ಬುಡಾ ಮಾಜಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ ಹೇಳಿದರು. ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಪರಿಸರ ಕುರಿತ ಭಾಷಣ […]

Share News

ಬಂಟ್ವಾಳ: ಜೂನ್ 06 :”ನಾವು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ವರ್ಷದ 365 ದಿನಗಳನ್ನೂ ಪರಿಸರ ದಿನಗಳನ್ನಾಗಿ ಆಚರಿಸಬೇಕು. ಹೆತ್ತವರು ತಮ್ಮ ಮಕ್ಕಳ ಹೆಸರಿನಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಬೇಕು” ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಹಾಗೂ ಬುಡಾ ಮಾಜಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ ಹೇಳಿದರು.

ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಪರಿಸರ ಕುರಿತ ಭಾಷಣ ಸ್ಪರ್ಧೆಯ ಬಹುಮಾನ ವಿತರಿಸಿ ಅವರು ಮಾತನಾಡಿದರು.

“ಪಟಾಕಿ ಸಹಿತ ಮಾಲಿನ್ಯ ಉಂಟುಮಾಡುವುದನ್ನು ನಾವು ತ್ಯಜಿಸಬೇಕು. ಪ್ಲಾಸ್ಟಿಕ್ ಬಳಕೆಯ ಬದಲು ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕು. ನಮ್ಮ ದೇಹದ ಆರೋಗ್ಯವನ್ನು ಹೇಗೆ ಕಾಪಾಡುತ್ತೇವೋ ಹಾಗೆಯೇ ಭೂಮಿಯ ಆರೋಗ್ಯವನ್ನೂ ರಕ್ಷಿಸುವುದು ಇಂದಿನ ಅನಿವಾರ್ಯವಾಗಿದೆ. ಸಾಧ್ಯವಾದಷ್ಟು ಸಾವಯವ ಉತ್ಪನ್ನಗಳನ್ನು ಬಳಕೆ ಮಾಡಬೇಕು. ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಬೇಕು ಮತ್ತು ನಮ್ಮ ಮನೆಯ ಸುತ್ತಮುತ್ತ ಕನಿಷ್ಠ ಶೇ.30ರಷ್ಟಾದರೂ ಹಸಿರು ಇರುವಂತೆ ನೋಡಿಕೊಳ್ಳಬೇಕು” ಎಂದು ಅವರು ಹೆತ್ತವರಿಗೆ ಮತ್ತು ಮಕ್ಕಳಿಗೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮಂಗಳೂರಿನ ಗ್ಲೋಬಲ್ ಇಕೋ ಫೌಂಡೇಶನ್ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಶ್ರೀನಿವಾಸ ನಾಯಕ್ ಇಂದಾಜೆ ಅವರು ಮಕ್ಕಳಿಗೆ ಪರಿಸರಸ್ನೇಹಿ ಬಟ್ಟೆ ಕೈಚೀಲಗಳನ್ನು ವಿತರಿಸಿ ಮಾತನಾಡಿದರು. “ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸಲು ಈ ಕೈಚೀಲಗಳನ್ನು ನೀಡಲಾಗುತ್ತಿದೆ. ಅಂಗಡಿಗೆ ಹೋಗಿ ತರಕಾರಿ ಹಾಗೂ ಇತರ ಸಾಮಗ್ರಿಗಳನ್ನು ತರಲು ಇವುಗಳನ್ನು ಬಳಸಬೇಕು. ಆ ಮೂಲಕ ಪ್ಲಾಸ್ಟಿಕ್ ಮುಕ್ತ ವ್ಯವಸ್ಥೆಯನ್ನು ನಿರ್ಮಿಸಬೇಕಾಗಿದೆ” ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್‌ ಬಿ.ಎನ್. ಮಾತನಾಡಿ, “ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅತಿ ಹೆಚ್ಚು ತಾಪಮಾನ ಇರಲು ಮತ್ತು ಮನೆಯಿಂದ ಹೊರಗೆ ಬರಲು ಆಗದಂಥ ಪರಿಸ್ಥಿತಿ ನಿರ್ಮಾಣವಾಗಲು ನಾವೇ ಕಾರಣರಾಗಿದ್ದೇವೆ. ಪರಿಸರ ಸಂರಕ್ಷಣೆಯ ಕುರಿತು ನಾವೆಲ್ಲರೂ ಗಂಭೀರವಾಗಿ ಯೋಚಿಸಬೇಕಾಗಿದೆ” ಎಂದು ಎಚ್ಚರಿಸಿದರು.

.ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ವಿನೋದಾ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳದ ಸತ್ಯಸಾಯಿ ಸಮಿತಿಯ ಶಿಕ್ಷಣ ಸಂಯೋಜಕರಾಗಿರುವ ಭಾರತಿ ಕುಂದರ್, ಯುವ ಮಹಿಳಾ ವಿಭಾಗ ಸಂಯೋಜಕರಾದ ದೀಪಾ ಪ್ರವೀಣ್, ಮುಖ್ಯ ಶಿಕ್ಷಕಿ ಲಕ್ಷ್ಮೀ, ಎಸ್‌.ಡಿ.ಎಂ.ಸಿ ಉಪಾಧ್ಯಕ್ಷ ಶಶಿಧ‌ರ್ ಉಪಸ್ಥಿತರಿದ್ದರು. ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಹರೀಶ ಮಾಂಬಾಡಿ ಸ್ವಾಗತಿಸಿದರು.ಎಸ್‌.ಡಿ.ಎಂ.ಸಿ. ಸದಸ್ಯ ಶಿವಮೂರ್ತಿ ಆ‌ರ್. ವಂದಿಸಿದರು. ಶಿಕ್ಷಕಿ ಸುಶೀಲಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ಐರಿನ್, ವಿಮಲಾ, ನಿಶ್ಮಿತಾ, ಪೂರ್ಣಿಮಾ, ಲಾವಣ್ಯ, ದಿವ್ಯಾ ಸಹಕರಿಸಿದರು.

Share News