ಮಂಗಳೂರು: ಕಾಂಗ್ರೆಸ್ ಸೇವಾದಳದ ಸಂಸ್ಥಾಪಕ ಡಾ. ನಾರಾಯಣ ಸುಬ್ಬರಾವ್ ಹರ್ಡೇಕರ್ ಅವರ 51ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಜಿ.ಹೆಗ್ಡೆ, ಎನ್.ಎಸ್. ಹರ್ಡೇಕರ್ ಅವರು ಕೇವಲ ಸೇವಾದಳದ ಸ್ಥಾಪಕರಲ್ಲ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರಲ್ಲಿ ಶಿಸ್ತು, ಸಂಯಮ, ದೇಶಪ್ರೇಮ ಹಾಗೂ ಭ್ರಷ್ಟಾಚಾರ ರಹಿತ ಜೀವನದ ಮೌಲ್ಯಗಳನ್ನು ಬೆಳೆಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಅವರ ಆದರ್ಶ, ತತ್ವ ಹಾಗೂ ಸೇವಾ ಮನೋಭಾವ ಇಂದಿನ ಪೀಳಿಗೆಗೆ ಮಾದರಿ ಎಂದು ಹೇಳಿದರು.

ಈ ಸಂದರ್ಭ ದ.ಕ. ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕಿಂ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾದಳದ ಬೋಧಕ ವಿಶ್ವನಾಥ್ ಬಜಾಲ್, ಗಂಗಾಧರ್, ಭಾಸ್ಕರ್ ರಾವ್, ಮೋಹನ್ದಾಸ್ ಕೊಟ್ಟಾರಿ, ಕೃಷ್ಣದಾಸ್ ಕಾವೂರು, ಪ್ರವೀಣ್, ವಿಕ್ಟೋರಿಯ, ಅನಿತಾ, ಅರ್ಚನಾ, ಪ್ರೇಮ ಹಾಗೂ ಸಮರ್ಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
