canaratvnews

ರೊಸಾರಿಯೊ ಕ್ಯಾಥೆಡ್ರೆಲ್‌ನಲ್ಲಿ ಬಿಷಪ್‌ರಿಂದ ‘ಕ್ರಿಸಮ್ ಬಲಿಪೂಜೆ’

ಮಂಗಳೂರು: ಮುಂಬರುವ ಪವಿತ್ರ ವಾರದ ಆಚರಣೆಗಳಿಗೆ ಮುನ್ನುಡಿಯಾಗಿ ಮಂಗಳೂರು ಧರ್ಮಕ್ಷೇತ್ರದ ವಾರ್ಷಿಕ ‘ಕ್ರಿಸಮ್ ಬಲಿಪೂಜೆ’(ತೈಲ ಪವಿತ್ರಿಕರಿಸುವ ಪೂಜೆ) ಗುರುವಾರ ಸಂಜೆ ನಗರದ ರೊಸಾರಿಯೊ ಕ್ಯಾಥೆಡ್ರೆಲ್‌ನಲ್ಲಿ ಭಕ್ತಿಪೂರ್ವಕವಾಗಿ ನೆರವೇರಿತು.ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈ ಪವಿತ್ರ ಬಲಿಪೂಜೆಯ ನೇತೃತ್ವ ವಹಿಸಿದ್ದರು.

ಈ ಪ್ರಧಾನ ಧಾರ್ಮಿಕ ವಿಧಿಯಲ್ಲಿ, ಮುಂಬರುವ ವರ್ಷದಲ್ಲಿ ಧರ್ಮಕ್ಷೇತ್ರದಾದ್ಯಂತ ಎಲ್ಲಾ ಚರ್ಚ್‌ಗಳಲ್ಲಿ ವಿವಿಧ ಸಂಸ್ಕಾರಗಳನ್ನು ನೀಡಲು ಬಳಸುವ ಪವಿತ್ರ ತೈಲಗಳನ್ನು ಧರ್ಮಾಧ್ಯಕ್ಷರು ಆಶೀರ್ವದಿಸಿದರು. ಇದೇ ವೇಳೆ ಧರ್ಮಕ್ಷೇತ್ರದ ಎಲ್ಲಾ ಯಾಜಕರು ಬಲಿಪೀಠದ ಸುತ್ತ ಒಂದೆಡೆ ಸೇರಿ, ತಮ್ಮ ಯಾಜಕ ದೀಕ್ಷೆಯ ವಾಗ್ದಾನಗಳನ್ನು ನವೀಕರಿಸಿಕೊಂಡರು. ತಮ್ಮ ಪ್ರವಚನದಲ್ಲಿ ಧರ್ಮಾಧ್ಯಕ್ಷರಾದ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು, ‘ಕ್ರಿಸಮ್ ತೈಲ’ ಮಹತ್ವವನ್ನು ವಿವರಿಸಿದರು.

ರೋಗಿಗಳ ತೈಲ ಮತ್ತು ದೀಕ್ಷಾರ್ಥಿಗಳ ತೈಲವನ್ನು ಆಶೀರ್ವದಿಸಲಾಗುತ್ತದೆ, ಆದರೆ ಸುಗಂಧ ಭರಿತವಾದ ‘ಪವಿತ್ರ ಕ್ರಿಸಮ್’ ತೈಲವನ್ನು ವಿಶೇಷವಾಗಿ ಪವಿತ್ರಿಕರಿಸಲಾಗುತ್ತದೆ ಎಂದು ಅವರು ತಿಳಿಸಿದರು. ‘ಕ್ರಿಶ್ಚಿಯನ್’ ಎಂಬ ಪದವು ‘ಕ್ರಿಸಮ್’ ಮತ್ತು ‘ಕ್ರಿಸ್ಟೋಸ್’ (ಅಭಿಷಿಕ್ತನು) ಎಂಬ ಪದಗಳಿಂದಲೇ ಹುಟ್ಟಿಕೊಂಡಿದೆ. ಪವಿತ್ರಾತ್ಮರ ಸಂಕೇತವಾಗಿರುವ ಈ ಕ್ರಿಸಮ್ ತೈಲವು, ಯಾಜಕರ ಮತ್ತು ಧರ್ಮಾಧ್ಯಕ್ಷರ ದೀಕ್ಷಾಭಿಷೇಕದಲ್ಲಿ ಹಾಗೂ ಚರ್ಚ್‌ಗಳ ಪವಿತ್ರೀಕರಣದಲ್ಲಿ ಅತ್ಯಗತ್ಯವಾಗಿದೆ ಎಂದು ಅವರು ವಿವರಿಸಿದರು.

ಬಲಿಪೂಜೆಯಲ್ಲಿ ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠಗುರು ವಂ. ಮ್ಯಾಕ್ಸಿಮ್ ಎಲ್. ನೊರೊನ್ಹಾ, ಚಾನ್ಸೆಲರ್ ಅತಿ ವಂ. ವಿಕ್ಟರ್ ಜಾರ್ಜ್ ಡಿಸೋಜಾ, ಪ್ರೊಕ್ಯುರೇಟರ್ ಅತಿ ವಂ. ಜಗದೀಶ್ ಪಿಂಟೊ, ಧಾರ್ಮಿಕರ ಎಪಿಸ್ಕೋಪಲ್ ವಿಕಾರ್ ಅತಿ ವಂ. ಡೇನಿಯಲ್ ವೇಗಾಸ್ ಒ.ಪಿ., ಜುಡಿಷಿಯಲ್ ವಿಕಾರ್ ಅತಿ ವಂ. ನವೀನ್ ಪಿಂಟೊ ಮತ್ತು ರೊಸಾರಿಯೊ ಕ್ಯಾಥೆಡ್ರಲ್‌ನ ಪ್ರಧಾನ ಯಾಜಕರಾದ ವಂ. ವಲೇರಿಯನ್ ಡಿ ಸೋಜ ಅವರು ಸಹ- ಯಾಜಕರಾಗಿ ಪಾಲ್ಗೊಂಡಿದ್ದರು.

Share News
Exit mobile version