ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ನೂತನ ಅಧ್ಯಕ್ಷರಾಗಿ ಬೆಂಗಳೂರಿನಲ್ಲಿ ವೃತ್ತಿನಿರತರಾಗಿರುವ ಮಂಗಳೂರು ಮೂಲದ ಸಿ.ಎ. ಸುನಿಲ್ ಭಂಡಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಮ್ಮ ಹೊಸ ಜವಾಬ್ದಾರಿಯ ಕುರಿತು ಮಾತನಾಡಿದ ಸಿ.ಎ. ಸುನಿಲ್ ಭಂಡಾರಿ ಅವರು, “ಕರ್ನಾಟಕದ ಚಾರ್ಟರ್ಡ್ ಅಕೌಂಟೆಂಟ್ (CA) ಸಮುದಾಯದಲ್ಲಿ ನಿಸ್ಸಂದೇಹವಾಗಿ ಅರ್ಥಪೂರ್ಣ ಬದಲಾವಣೆಯನ್ನು ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ವೃತ್ತಿಯ ಮೇಲಿನ ಬದ್ಧತೆ ಮತ್ತು ಎಲ್ಲರನ್ನೂ ಒಗ್ಗೂಡಿಸುವ ಸಾಮರ್ಥ್ಯದೊಂದಿಗೆ ಸಂಘದ ಏಳಿಗೆಗಾಗಿ ಕೆಲಸ ಮಾಡಲಾಗುವುದು,” ಎಂದು ತಿಳಿಸಿದ್ದಾರೆ.
ನೂತನ ಅಧ್ಯಕ್ಷರಾದ ಸಿ.ಎ. ಸುನಿಲ್ ಭಂಡಾರಿ ಅವರು ಮಂಗಳೂರು ಸಮೀಪದ ಬೊಳಿಯಾರು ತಾರಿಪಾಡಿಯ ದಿವಂಗತ ಕಾಂತಣ್ಣ ಭಂಡಾರಿ ಹಾಗೂ ಪೆಲಪಾಡಿ ವಸಂತಿ ಕೆ. ಭಂಡಾರಿ ದಂಪತಿಯ ಸುಪುತ್ರರಾಗಿದ್ದಾರೆ. ಇವರ ಈ ಸಾಧನೆಗೆ ಕರಾವಳಿ ಹಾಗೂ ರಾಜ್ಯದ ಸಿ.ಎ. ವಲಯದಿಂದ ವ್ಯಾಪಕ ಶ್ಲಾಘನೆ ಮತ್ತು ಅಭಿನಂದನೆಗಳು ಹರಿದುಬರುತ್ತಿವೆ.
