ಬಂಟ್ವಾಳ : ಮಣಿನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿ ನಡೆದಿದ್ದ ಒಣ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸುಳ್ಯ ತಾಲೂಕಿನ ಪೈಚಾರು ನಿವಾಸಿ ಸತೀಶ್ (29) ಎಂದು ತಿಳಿದುಬಂದಿದೆ. ಮಣಿನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿ ಜುಲೈ 3 ರಿಂದ 22 ರ ಅವಧಿಯಲ್ಲಿ ಸುಮಾರು 45 ಪ್ಲಾಸ್ಟಿಕ್ ಚೀಲದಲ್ಲಿದ್ದ 2.20 ಲಕ್ಷ ರೂ. ಮೌಲ್ಯದ ಒಣ ಅಡಿಕೆ ಕಳವಾಗಿರುವ ಬಗ್ಗೆ ಜುಲೈ 23 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳವು ಪ್ರಕರಣದ ಪತ್ತೆ ಕಾರ್ಯಕ್ಕಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಶಿವಕುಮಾರ ಬಿ ಅವರ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಜುಲೈ 28 ರಂದು ಆರೋಪಿ ಸತೀಶ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಕಳವುಗೈದ 74 ಸಾವಿರ ರೂ. ಮೌಲ್ಯದ 15 ಚೀಲ ಒಣ ಅಡಿಕೆ, ಕಳವುಗೈದ ಅಡಿಕೆಯನ್ನು ಮಾರಾಟ ಮಾಡಿದ 70 ಸಾವಿರ ರೂ. ನಗದು ಹಣ, ಕೃತ್ಯಕ್ಕೆ ಬಳಸಿದ 80 ಸಾವಿರ ರೂ. ಮೌಲ್ಯದ ಗೂಡ್ಸ್ ವಾಹನ ಸಹಿತ ಒಟ್ಟು 2.24 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧನ ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಸೈ ಮಂಜುನಾಥ್ ಟಿ, ಎಎಸ್ಸೈ ಜಿನ್ನಪ್ಪ ಗೌಡ, ಎಚ್ ಸಿಗಳಾದ ರಾಜೇಶ್, ನಝೀರ್, ಲೋಕೇಶ್, ಪ್ರಶಾಂತ, ಪಿಸಿಗಳಾದ ಮಾರುತಿ, ಹನುಮಂತ ಅವರುಗಳು ಪಾಲ್ಗೊಂಡಿದ್ದರು.