ಮೈಸೂರು, ಜೂನ್ 08: ಮೈಸೂರಿನ ಡೊರ್ನಹಳ್ಳಿಯಲ್ಲಿರುವ ಪ್ರಸಿದ್ಧ ಸಂತ ಅಂತೋನಿಯವರ ಬೆಸಿಲಿಕಾದಲ್ಲಿ ವಾರ್ಷಿಕ ಮಹೋತ್ಸವದ ಸಿದ್ಧತೆಯಾಗಿ ಐದನೇ ದಿನದ ನೊವೆನಾ ಪ್ರಾರ್ಥನೆಯು ಜೂನ್ 08 ಸೋಮವಾರ ಅತ್ಯಂತ ಭಕ್ತಿ ಶ್ರದ್ಧೆಗಳಿಂದ ನಡೆಯಿತು.

ಈ ಪವಿತ್ರ ದಿವ್ಯ ಬಲಿಪೂಜೆಯ ನೇತೃತ್ವವನ್ನು ಮಡಿಕೇರಿಯ ಸಂತ ಮೈಕಲ್ ಚರ್ಚ್ನ ಧರ್ಮಗುರುಗಳಾದ ರೆ| ಫಾದರ್ ಪ್ಯಾಟ್ರಿಕ್ ಕ್ಸೇವಿಯರ್ ಅವರು ವಹಿಸಿದ್ದರು. ತಮ್ಮ ಧರ್ಮೋಪದೇಶದಲ್ಲಿ ಮಾತನಾಡಿದ ಫಾದರ್ ಪ್ಯಾಟ್ರಿಕ್ ಕ್ಸೇವಿಯರ್ ಅವರು, “ಸಂತ ಅಂತೋನಿಯವರ ಜೀವನ ಮತ್ತು ಬೋಧನೆಗಳನ್ನು ಮಾದರಿಯಾಗಿಟ್ಟುಕೊಂಡು ಪ್ರಾರ್ಥನೆ, ನಂಬಿಕೆ ಮತ್ತು ದಾನಧರ್ಮಗಳ ಮೂಲಕ ದೇವರೊಂದಿಗಿನ ಸಂಬಂಧವನ್ನು ಭಕ್ತರು ಗಟ್ಟಿಗೊಳಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ದಿವ್ಯ ಬಲಿಪೂಜೆಯ ಸಂದರ್ಭದಲ್ಲಿ ಡೊರ್ನಹಳ್ಳಿ ಬೆಸಿಲಿಕಾದ ರೆಕ್ಟರ್ ಆದ ರೆ ಫಾದರ್ ಡೇವಿಡ್ ಸಗಾಯರಾಜ್ ಮತ್ತು ಅಡ್ಮಿನಿಸ್ಟ್ರೇಟರ್ ಆದ ರೆ ಫಾದರ್ ಪ್ರವೀಣ್ ಪೆದ್ರು ಜೊತೆಯಾಗಿದ್ದರು.
ಬಲಿಪೂಜೆಯ ನಂತರ ಭಕ್ತರ ವಿವಿಧ ಉದ್ದೇಶಗಳಿಗಾಗಿ ವಿಶೇಷ ನೊವೆನಾ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಬಳಿಕ ಸಂತ ಅಂತೋನಿಯವರ ಪವಿತ್ರ ಮೂರ್ತಿಯ ಭವ್ಯ ಮೆರವಣಿಗೆ ಮತ್ತು ಪರಮಪ್ರಸಾದದ ಆಶೀರ್ವಾದದೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.
ಮಹೋತ್ಸವದ ದಿನಗಳು ಹತ್ತಿರ ಬರುತ್ತಿರುವುದರಿಂದ ಕರ್ನಾಟಕ ಮತ್ತು ನೆರೆಯ ರಾಜ್ಯಗಳ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಮತ್ತು ಯಾತ್ರಿಕರು ಬೆಸಿಲಿಕಾಕ್ಕೆ ಭೇಟಿ ನೀಡಿ ಆಧ್ಯಾತ್ಮಿಕವಾಗಿ ಸಿದ್ಧರಾಗುತ್ತಿದ್ದಾರೆ.