ಮಾಣಿಲ: ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ವಿವಿಧ ಪ್ರಮುಖ ಕಾಮಗಾರಿಗಳಿಗಾಗಿ ಒಟ್ಟು ರೂ. 4 ಕೋಟಿ 5 ಲಕ್ಷ (4.05 ಕೋಟಿ) ಭಾರಿ ಮೊತ್ತದ ಸರಕಾರಿ ಅನುದಾನ ಬಿಡುಗಡೆಯಾಗಿದ್ದು, ಜು.12 (ನಾಳೆ) ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಲಿದ್ದಾರೆ.

ಶಾಸಕ ಅಶೋಕ್ ಕುಮಾರ್ ರೈ ಅವರ ವಿಶೇಷ ಮುತುವರ್ಜಿಯಿಂದಾಗಿ ಈ ಬೃಹತ್ ಅನುದಾನ ಮಂಜೂರಾಗಿದ್ದು, ಗ್ರಾಮದ ಹಲವು ರಸ್ತೆಗಳು, ತಡೆಗೋಡೆಗಳು ಹಾಗೂ ದೇವಸ್ಥಾನಗಳ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ನಾಳೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಮಾಣಿಲ ಗ್ರಾಮದಲ್ಲಿ ಒಟ್ಟು 20 ಕ್ಕೂ ಹೆಚ್ಚು ಪ್ರಮುಖ ಪ್ರಗತಿ ಕೆಲಸಗಳು ಈ ಯೋಜನೆಯಡಿಯಲ್ಲಿ ಒಳಪಡಲಿದ್ದು, ಗ್ರಾಮಸ್ಥರ ಬಹುಕಾಲದ ಬೇಡಿಕೆಗಳು ಈಡೇರಿದಂತಾಗಿದೆ.
ಗ್ರಾಮದ ಪ್ರಗತಿಯ ಹರಿಕಾರರಾಗಿ, ಜನಸಾಮಾನ್ಯರ ಧ್ವನಿಯಾಗಿ ಹಗಲಿರುಳು ಶ್ರಮಿಸುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮಾಣಿಲ ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ಪಕ್ಷದ ಪ್ರಮುಖರು ಈ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಕಾಮಗಾರಿಗೆ ಸರಕಾರದಿಂದ ಅಗತ್ಯ ಅನುದಾನವನ್ನು ಮಂಜೂರುಗೊಳಿಸುವಲ್ಲಿ ವಿಶೇಷವಾಗಿ ಶ್ರಮಿಸಿ, ಸಹಕರಿಸಿದ ಮಾಣಿಲ ಗ್ರಾಮ ಪಂಚಾಯತಿನ ನಿಕಟಪೂರ್ವ ಅಧ್ಯಕ್ಷದ ಶ್ರೀಧರ ಬಾಳೆಕಲ್ಲು, ಮಾಣಿಲ ವಲಯ ಕಾಂಗ್ರೆಸ್ ಅಧ್ಯಕ್ಷ ವಿಷ್ಣು ಭಟ್ ಕೊಮ್ಮುಂಜೆ, ಕಾಂಗ್ರೆಸ್ ಮುಖಂಡರಾದ ಜಯರಾಮ್ ಬಲ್ಲಾಲ್, ಮಾಣಿಲ ವಲಯ ಕಾಂಗ್ರೆಸ್ ಬೂತ್ ಅಧ್ಯಕ್ಷರಾದ ಇಬ್ರಾಹಿಂ ಕರೀಂ ಹಾಗೂ ಮುಸ್ತಫ ನಾಯರಮೂಲೆ ಇವರಿಗೂ ಧನ್ಯವಾದ ಸಮರ್ಪಿಸಿದ್ದಾರೆ.