ಬಂಟ್ವಾಳ: ತಾಲೂಕಿನ ವಿಟ್ಲದ ಪೆರುವಾಯಿಯ ಫಾತಿಮಾ ಮಾತಾ ದೇವಾಲಯದಲ್ಲಿ ಶಿಲುಬೆ ಯಾತ್ರೆಯು (ಖುರ್ಸಾವಾಟ್) ಇಂದು ನಡೆಯಿತು.
ಮೊದಲು ನಡೆದ ಬಲಿಪೂಜೆಯನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಹಾಸ್ಟೆಲ್ ವಾರ್ಡನ್ ವಂ. ರೂಪೇಶ್ ತಾವ್ರೊ ನೆರವೇರಿಸಿದರು. ನಂತರ ಚರ್ಚ್ ಆವರಣದಿಂದ ನಡೆದ ಶಿಲುಬೆ ಯಾತ್ರೆಯು ಸರಿಸುಮಾರು 2 ಕೀ.ಮೀ ಸಾಗಿ ತಾಬೋರ್ ಪರ್ವತ (ಗುಡ್ಡ ಪ್ರದೇಶ)ದಲ್ಲಿ ಸಂಪನ್ನಗೊಂಡಿತು.
ಈ ವೇಳೆ ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಮೊದಲ್ಗೊಂಡು ಅವರು ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ 14 ಪ್ರಮುಖ ಘಟನಾವಳಿಗಳಿಗೆ ಸಂಬಂಧಿಸಿದ ಶಿಲುಬೆಯ ಹಾದಿ (ವೇ ಆಫ್ ದಿ ಕ್ರಾಸ್)ಸ್ಮರಿಸಲಾಯಿತು.
ಈ ವೇಳೆ ಚರ್ಚ್ನ ಧರ್ಮಗುರು ವಂ. ಸೈಮನ್ ಡಿಸೋಜ ಅವರು ಇದ್ದರು. ಶಿಲುಬೆ ಯಾತ್ರೆಯ ನೇತೃತ್ವವನ್ನು ಕಥೋಲಿಕಾ ಸಭಾ ಮಂಗಳೂರು ಪ್ರದೇಶ(ರಿ) ಇದರ ಪೆರುವಾಯಿ ಘಟಕ ವಹಿಸಿಕೊಂಡಿತ್ತು.