ಮಂಗಳೂರು: ಬಿಕರ್ನಕಟ್ಟೆ ಜಯಶ್ರೀ ಗೇಟ್ನಿಂದ ಮರೋಳಿ ದೇವಸ್ಥಾನ ಮತ್ತು ಪಂಪವೆಲ್ ರಸ್ತೆಗೆ ಸಂಪರ್ಕ ರಸ್ತೆಯಲ್ಲಿ ಸೋಮವಾರ ರಾತ್ರಿ ಸುಮಾರು 8.25ರ ಹೊತ್ತಿಗೆ ಮಕ್ಕಳ ಜೊತೆ ಆ ದಾರಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಛಾಯಾಗ್ರಾಹಕ ಸ್ಪ್ಯಾನ್ಸಿ ಬಂಟ್ವಾಳ್ ಅವರು ರಸ್ತೆ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಗಮನಿಸಿ ಮೆಸ್ಕಾಂಗೆ ದೂರು ನೀಡಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.

ಇನ್ನೂ ಮುಂದೆ ನೋಡುವಾಗ ಆ ತಂತಿಯ ಇನ್ನೊಂದು ದೊಡ್ಡ ಭಾಗ ರಸ್ತೆಯಲ್ಲೇ ಬಿದ್ದಿದ್ದು ಕೂಡಲೇ ಮೆಸ್ಕಾಂ ಜೆಇ ಅವರಿಗೆ ಕರೆ ಮಾಡಿ ತಿಳಿಸಿದೆ. ಸುಮಾರು 5 ನಿಮಿಷ ನಂತರ ಲೈನ್ ಆಫ್ ಮಾಡಲಾಯಿತು. ನೀವೇ ಅಲ್ಲೇ ನಿಲ್ಲಿ 5 ನಿಮಿಷದಲ್ಲಿ ಲೈನ್ ಮ್ಯಾನ್ಗಳನ್ನು ಕಳುಹಿಸುತ್ತೇನೆ ಎಂದು ಹೇಳಿದರು.

ನಾನೂ ರಸ್ತೆಯಲ್ಲೇ ನಿಂತು ಬರುವ ವಾಹನ ಮತ್ತು ಪಾದಚಾರಿಗಳಿಗೆ ಜಾಗರೂಕತೆಯಿಂದ ಹೋಗಲು ಹೇಳಿ ಅಲ್ಲೇ ನಿಂತೇ ಸುಮಾರು 15 ನಿಮಿಷ ನಂತರ ಲೈನ್ ಮ್ಯಾನ್ಗಳ ಕರೆ ಬಂತು. ಸ್ಥಳದ ವಿಳಾಸ ಕೊಟ್ಟರೂ ಇವರು ಬರುವುದು ಕಾಣುತ್ತಿಲ್ಲ. ಪೊಲೀಸ್ ಇಲಾಖೆಗೆ ಕರೆ ಮಾಡಿದೆ. ಕರೆ ಸ್ವೀಕಾರ ಮಾಡಲಿಲ್ಲ. ಮತ್ತೆ ಲೈನ್ ಮ್ಯಾನ್ನವರಿಗೆ ಕರೆ ಮಾಡಿದೆ. ಆಗ ಅವರು ಕೊಟ್ಟ ಉತ್ತರ ಹೀಗಿತ್ತು- ನಾವು ವಿಮಾನದಲ್ಲಿ ಬರುತ್ತಿಲ್ಲ, ನಮಗೆ ಅದೊಂದೇ ಕೆಲಸ ಅಲ್ಲ ಎಂದು ಸ್ವಲ್ಪ ಉಡಾಫೆಯಿಂದ ಉತ್ತರಿಸಿದರು. ಹೀಗಾಗಿ ಅವರು ಬರುವವರೆಗೂ ರಸ್ತೆಯಲ್ಲಿ ನಿಂತು ಬರುವ ವಾಹನಗಳು, ಪಾದಚಾರಿಗಳಿಗೆ ಮುಂಜಾಗ್ರತೆಯ ಎಚ್ಚರಿಕೆ ನೀಡಿ ಕಳುಹಿಸಿದೆ ಎಂದು ಸ್ಪ್ಯಾನಿ ಬಂಟ್ವಾಳ್ ತಿಳಿಸಿದ್ದಾರೆ.

ಆ ತಂತಿ ತುಂಡಾದುದನ್ನು ನೋಡಿಯೂ ನೋಡದ ಹಾಗೆ ಹೋಗುತ್ತಿದ್ದರೆ ಎಷ್ಟು ಮಂದಿಗೆ ಅನಾಹುತ ಆಗುತಿತ್ತು? ಎಲ್ಲರನ್ನು ಆ ಭಗವಂತನೇ ಕಾಪಾಡಿರಬೇಕು ಎಂದು ಅವರು ಮಾಧ್ಯಮಕ್ಕೆ ತಿಳಿಸಿದರು.
ಸಾರ್ವಜನಿಕರು ಎಲ್ಲೆ ಇಂತಹ ಘಟನೆ ನಡೆದಿದ್ದರೂ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿ ಅನಾಹುತವನ್ನು ತಪ್ಪಿಸಲು ಪ್ರಯತ್ನಿಸಬೇಕೆಂದು ಅವರು ಮನವಿ ಮಾಡಿದರು. ಅಧಿಕಾರಿಗಳೂ ನಿರ್ಲಕ್ಷ್ಯ ಮಾಡದೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


