ಬಂಟ್ವಾಳ: ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಭಾತೃತ್ವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂನಲ್ಲಿ ‘ಸೌಹಾರ್ದ ಇಫ್ತಾರ್ ಕೂಟ’ವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಮಾಣಿಲ ಶ್ರೀ ಧಾಮದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಸಂದೇಶ ನೀಡಿ “ಸರ್ವರ ಮನ ಸೆಳೆಯುವ ಮತ್ತು ಐಕ್ಯತೆ ಮೂಡಿಸುವ ರಮಾನಾಥ ರೈ ಅವರ ಈ ಕಾರ್ಯ ಶ್ಲಾಘನೀಯ. ಸವಾಲುಗಳ ಮಧ್ಯೆಯೂ ಮನುಷ್ಯ ಪ್ರೀತಿಯಿಂದ ಬದುಕುವುದು ಇಂದಿನ ಅಗತ್ಯ,” ಎಂದರು.
ಬಂಟ್ವಾಳ ವಲಯ ಪ್ರಧಾನ ಧರ್ಮಗುರು ರೆ.ಫಾ. ವಿಕ್ಟರ್ ಡಿಸೋಜಾ ಮಾತನಾಡಿ “ಯಾವುದೇ ಜಾತಿ-ಮತದ ಭೇದವಿಲ್ಲದೆ ಒಂದೇ ತಾಯಿಯ ಮಕ್ಕಳಂತೆ ಸೌಹಾರ್ದಯುತವಾಗಿ ಬದುಕೋಣ,” ಎಂದು ಕರೆ ನೀಡಿದರು.
ಮಂಗಳೂರು ಶಾಂತಿ ಪ್ರಕಾಶನ ಅಧ್ಯಕ್ಷ ಮುಹಮ್ಮದ್ ಕುಂಞ ಮಾತನಾಡಿ”ನಮ್ಮನ್ನು ನಾವು ನಿಯಂತ್ರಿಸಿ ಕೊಳ್ಳುವುದೇ ಉಪವಾಸದ ಮುಖ್ಯ ಉದ್ದೇಶ. ದ್ವೇಷ ದೂರಮಾಡಿ ಮನುಷ್ಯತ್ವ ಉಳಿಸುವ ಇಂತಹ ಇಫ್ತಾರ್ ಕೂಟಗಳು ಏಕತೆಯನ್ನು ಬಲಪಡಿಸುತ್ತವೆ,” ಎಂದು ತಿಳಿಸಿದರು.