ಮಂಗಳೂರು,ಫೆ.13: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ, ಡಿ.ಡಿ.ಯು-ಜಿಕೆವೈ ಎನ್.ಆರ್.ಎಲ್.ಎಂ (DDU-GKY NRLM) ಯೋಜನೆಯಡಿ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ಫೆಬ್ರವರಿ 21 ರಂದು ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿಯಲ್ಲಿ ಆಯೋಜಿಸಲಾಗಿದೆ.

ಈ ಮೇಳಕ್ಕೆ ಬೆಂಗಳೂರು, ಮಂಗಳೂರು ಮತ್ತು ರಾಜ್ಯಾದ್ಯಂತ ಇರುವ ಐಟಿ, ಸಾಫ್ಟ್ವೇರ್, ಮ್ಯಾನುಫ್ಯಾಕ್ಟರಿಂಗ್, ಆಟೋ ಮೊಬೈಲ್, ಬ್ಯಾಂಕಿಂಗ್, ಫೈನಾನ್ಸ್, ರಿಟೇಲ್ “ಆ್ಯಂಡ್ ಸರ್ವಿಸ್ ಸೆಕ್ಟರ್, ಎಜ್ಯುಕೇಶನ್, ಹಾಸ್ಪಿಟಲ್ ಸುಮಾರು 80 ಕ್ಕಿಂತ ಹೆಚ್ಚಿನ ಕಂಪೆನಿಗಳಿಂದ ನೇರ ಸಂದರ್ಶನ ನಡೆಯಲಿದೆ.
ಜಿಲ್ಲೆಯಿಂದ ಎಸ್.ಎಸ್.ಎಲ್.ಸಿ. ಪಿ.ಯು.ಸಿ, ಐ.ಟಿ.ಐ ಡಿಪ್ಲೋಮಾ, ಡಿಗ್ರಿ, ಇಂಜಿನಿಯರಿಂಗ್, ಮಾಸ್ಟರ್ ಡಿಗ್ರಿ, ನರ್ಸಿಂಗ್ ಅಥವಾ ಪ್ಯಾರಮೆಡಿಕಲ್ ಕೋರ್ಸ್ ಮಾಡಿದ ನಿರುದ್ಯೋಗಿ ಯುವಕ-ಯುವತಿಯರಿಗೆ ಸುರ್ವಣಾವಕಾಶ, ಉದ್ಯೋಗಾಂಕ್ಷಿಗಳು ಭಿತ್ತಿಪತ್ರದಲ್ಲಿರುವ ಕ್ಯೂ ಆರ್ ಸ್ಕ್ಯಾನ್ ಮಾಡಿ ಹೆಸರು ಮತ್ತು ವಿವರವನ್ನು ನೋಂದಣಿ ಮಾಡಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸುವವರು ಕನಿಷ್ಟ 15 ಸೆಟ್ ರೆಮ್ಯೂಮ್. ಆಧಾರ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಸೈಜ್ ಭಾವಚಿತ್ರಗಳನ್ನು ಕಡ್ಡಾಯವಾಗಿ ತರಬೇಕು.
ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ‘ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ’ಯಡಿ ಗ್ರಾಮೀಣ ಪ್ರದೇಶದ ಬಡ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ, ಉದ್ಯೋಗ ಕಲ್ಪಿಸಲು ಸರ್ಕಾರ/ ಸರ್ಕಾರೇತರ ಸಂಘ-ಸಂಸ್ಥೆಗಳ ಮೂಲಕ ಮತ್ತು ವಿವಿಧ ಯೋಜನಾ ಅನುಷ್ಠಾನ ಸಂಸ್ಥೆಗಳ ಮೂಲಕ ಯೋಜನೆಯನ್ನು ಅನಷ್ಠಾನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 60:40 ರ ಅನುಪಾತದಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಇದು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಸಂಪೂರ್ಣ ಉಚಿತ ಯೋಜನೆಯಾಗಿದೆ.
ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡುವುದು ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಕೆ) ಕಾರ್ಯಕ್ರಮದ ವಾರ್ಷಿಕ ಯೋಜನೆ 2019-2023ರ ಉಪ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದ ಉದ್ದೇಶ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಕೌಶಲ್ಯಯುತ ಯುವ ಜನರಿಗೆ ಉದ್ಯೋಗ ಕಲ್ಪಿಸುವುದು. ಈ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸಿ ಆರ್ಥಿಕ ಪರಿಸ್ಥಿತಿಯನ್ನು ಅಭಿವೃದ್ಧಿಪಡಿಸುವುದಾಗಿದೆ. ಈ ಕಾರ್ಯಕ್ರಮದ ಮೂಲಕ ಉದ್ದಿಮೆದಾರರು, ಕಾರ್ಯಕ್ರಮ ಅನುಷ್ಠಾನ ಸಂಸ್ಥೆಗಳು ಹಾಗೂ ಗ್ರಾಮೀಣ ಯುವಜನರನ್ನು ಒಂದೆಡೆಯಲ್ಲಿ ಸೇರಿಸಲು ಸೂಕ್ತ ವೇದಿಕೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

