ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ಮೊತ್ತ ಪಾವತಿಸಲು ಬಾಕಿ ಇರುವ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮಸದ ಕೃಷಿಕರಿಗೆ ವಿಮಾ ಮೊತ್ತವನ್ನು ತಕ್ಷಣ ಪಾವತಿ ಮಾಡುವಂತೆ ರಾಜ್ಯ ತೋಟಗಾರಿಕಾ ಸಚಿವ ಮಲ್ಲಿಕಾರ್ಜುನ ಎಸ್ ಎಸ್ ರವರಿಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.

ಗುರುವಾರ ಸಚಿವರನ್ನು ಭೇಟಿ ಮಾಡಿದ ಶಾಸಕರು ದ ಕ ಜಿಲ್ಲೆಯ ಹಲವು ಕಡೆಗಳಲ್ಲಿ ಹವಾಮಾನ ವೈಪರೀತ್ಯದಿಂದ ರೈತರು ಬೆಳೆ ನಷ್ಟವನ್ನು ಅನುಭವಿಸಿದ್ದಾರೆ.ರೈತರಿಗೆ ಪರಿಹಾರವಾಗಿ ಹವಮಾನ ಆಧರಿತ ಬೆಳೆ ವಿಮೆ ಯೋಜನೆಯಡಿ ನೀಡಬೇಕಾದ ವಿಮಾ ಮೊತ್ತ ಜಿಲ್ಲೆಯ ಕೆಲವು ಗ್ರಾಮಗಳ ರೈತರಿಗೆ ಇನ್ನೂ ಪಾವತಿಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳ ಜೊತೆ ಈಗಾಗಲೇ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಬಾಕಿ ಇರುವ ಮೊತ್ತವನ್ನು ತಕ್ಷಣ ನೀಡುವಂತೆ ಸಚಿವರಿಗೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ
ಬಾಕಿ ಇರುವ ಗ್ರಾಮಗಳು
ಪುತ್ತೂರು ತಾಲೂಕಿನ ಬಲ್ನಾಡು, ಬಂಠ್ವಾಳ ತಾಲೂಕು ವ್ಯಾಪ್ತಿಯ ವಿಟ್ಲ, ನರಿಕೊಂಬು, ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಕೊಕ್ಕಡ ಹಾಗೂ ಅರಸಿನಮಕ್ಕಿ, ಕಡಬ ತಾಲೂಕಿನ ಗೋಳಿತೊಟ್ಟು, ಕಡಬ, ಕೌಕ್ರಾಡಿ, ನೆಲ್ಯಾಡಿ, , ಮಂಗಳೂರು ತಆಲೂಕಿನ ಮೂಡುಶೆಡ್ಡೆ, ಸುಳ್ಯ ತಾಲೂಕಿನ ಅಮರಮುಡ್ನೂರು, ಉಬರಡ್ಕ, ಮಿತ್ತೂರು, ಅಲೆಟ್ಟಿ ಹಾಗೂ ಅರಂತೋಡು ಗ್ರಾಮಗಳ ಕೃಷಿಕರ ವಿಮಾ ಮೊತ್ತ ಪಾವತಿಯಾಗಲು ಬಾಕಿ ಇದೆ . ಈ ಪಟ್ಟಿಯನ್ನು ಸಚಿವರಿಗೆ ಹಾಗೂ ಸಂಬಂದಿಸಿದ ಅಧಿಕಾರಿಗಳಿಗೆ ಶಾಸಕ ಅಶೋಕ್ ರೈ ನೀಡಿದ್ದಾರೆ.
ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ಮೊತ್ತ ವಿತರಣೆಯಲ್ಲಿ ಪ್ರಾರಂಭದಲ್ಲಿ ಲೋಪವಾಗಿತ್ತು ಈ ಬಗ್ಗೆ ಸದನದಲ್ಲಿ ಸರಕಾರದ ಗಮನಸೆಳೆದು ಆ ಬಳಿಕ ಅಧಿಕಾರಿಗಳ ಸಭೆ ಕರೆದು ಬಹುತೇಕ ಕೃಷಿಕರಿಗೆ ವಿಮಾ ಪರಿಹಾರ ಮೊತ್ತವನ್ನು ಒದಗಿಸಲಾಗಿದೆ. ಆ ಬಳಿಕ ಕೆಲವು ಗ್ರಾಮಗಳು ಬಾಕಿ ಇದೆ. ದಕ ಜಿಲ್ಲೆಯ ಯಾವ ಗ್ರಾಮಗಳ ಕೃಷಿಕರಿಗೆ ವಿಮಾ ಮೊತ್ತ ನೀಡಲು ಬಾಕಿ ಇದೆ ಆ ಗ್ರಾಮಗಳ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದ್ದೇನೆ. ಶೀಘ್ರವೇ ಬಾಕಿ ಇರುವ ಎಲ್ಲಾ ಗ್ರಾಮಗಳ ವಿಮಾ ಪರಿಹಾರ ಮೊತ್ತ ಬಿಡುಗಡೆಯಾಗಲಿದೆ ಎಂಬ ಪೂರ್ಣ ವಿಶ್ವಾಸವಿದೆ. ಮನವಿ ಮಾಡಿದ ತಕ್ಷಣ ಸೂಕ್ತ ಕ್ರಮಕ್ಕೆ ಸಚಿವರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ರೈತರಿಗೆ ತೊಂದರೆಯಾದಲ್ಲಿ ಸುಮ್ಮನಿರುವ ಪ್ರಶ್ನೆಯೇ ಇಲ್ಲ , ರೈತರ ಪರವಾಗಿ ಸದಸನದ ಒಳಗೆ , ಹೊರಗೆ ನ್ಯಾಯಯುತ ಹೋರಾಟ ಮಾಡಿಯೇ ಮಾಡುತ್ತೇನೆ