canaratvnews

*ಜ 11 ರಂದು ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮಶತಮಾನೋತ್ಸವ ಮಂಗಳೋತ್ಸವ*

ಮಂಗಳೂರು. ಜನವರಿ 08 : ಜಗದ್ಗುರು ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿಯ ಮಂಗಳೋತ್ಸವ ಕಾಶೀಮಠಾಧೀಶರಾದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಸಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಎಂದು ಶಾಸಕ ಡಿ ವೇದವ್ಯಾಸ ಕಾಮತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ

ಹರಿದ್ವಾರದಲ್ಲಿ ವೃಂದಾವನಸ್ಥರಾಗಿರುವ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಕಾಶೀಮಠದ 20ನೇ ಪೀಠಾಧೀಪತಿಗಳಾಗಿ ನಿರಂತರ 70 ವರ್ಷಗಳ ಕಾಲ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದೊಂದಿಗೆ ಎಲ್ಲಾ ಸಮುದಾಯದ ಏಳಿಗೆಗಾಗಿ ತಮ್ಮ ತಪೋಶಕ್ತಿಯನ್ನು ಧಾರೆ ಎರೆದು ಆರ್ಶೀವದಿಸಿದ್ದಾರೆ. ಅವರ ಜನ್ಮಶತಮಾನೋತ್ಸವವನ್ನು ಆದ್ದೂರಿಯಾಗಿ ಆಚರಿಸಲು ಸಮಾಜ ಬಾಂಧವರು ನಿರ್ಧರಿಸಿ, ಈಗಿನ ಪೀಠಾಧೀಶರಾದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ಹತ್ತು ಹಲವು ಕಾರ್ಯಕ್ರಮಗಳು ಕಳೆದ ಒಂದೂವರೆ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಸಮಾಜದ ಪ್ರತಿ ಮನೆಮನೆಯಲ್ಲಿ ಭಜನೆ ಮೂಲಕ ದೇವರನ್ನು ಒಲಿಸುವ ಸರಳ ಮಾರ್ಗವನ್ನು ನಮಗೆ ಉಪದೇಶಿಸಿದವರು ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು. ಅದಕ್ಕಾಗಿ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಘರ್ ಘರ್ ಭಜನೆ, ವ್ಯಾಸೋಪಾಸನೆ, ಗುರುಗುಣಗಾನವನ್ನು ಸಮಾಜದ ಮನೆಗಳಲ್ಲಿ ನಡೆಸಿಕೊಂಡು ಬಂದಿದ್ದು, ಭಾರತ ಸಹಿತ ಜಗತ್ತಿನ ವಿವಿದೆಡೆ ವಾಸಿಸುವ ಸಮಾಜ ಭಾಂದವರ ಮನೆಗಳಲ್ಲಿ, ಸಂಸ್ಥೆಗಳಲ್ಲಿ, ಮಠ, ಮಂದಿರ, ದೇವಾಲಯಗಳಲ್ಲಿ ಇದನ್ನು ನಡೆಸಿಕೊಂಡು ಬರಲಾಗಿದೆ. ಅಂದಾಜು 10000 ಘರ್ ಘರ್ ಭಜನೆಗಳು ನಡೆದಿದ್ದು, ವಯಸ್ಸಿನ ಮಿತಿಯಿಲ್ಲದೆ ಅಬಾಲವೃದ್ಧರು ಇದರಲ್ಲಿ ಭಾಗವಹಿಸುವ ಮೂಲಕ ಹರಿಗುರು ಕೃಪೆಗೆ ಪಾತ್ರರಾಗಿದ್ದಾರೆ.

ಇನ್ನು ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಸ್ವರ್ಣ ಪಾದುಕೆಯ ದಿಗ್ವಿಜಯ ಯಾತ್ರೆ ಹಿಮಾಲಯದ ತಪ್ಪಲಲ್ಲಿರುವ ಬದ್ರಿಯಿಂದ ಆರಂಭಿಸಿ ದಕ್ಷಿಣದಲ್ಲಿ ರಾಮೇಶ್ವರ, ತಿರುವನಂತಪುರದ ತನಕ ನಡೆದಿದೆ. ದೇಶದ ಉದ್ದಗಲಕ್ಕೂ ಇರುವ ಸಮಾಜ ಬಾಂಧವರ ಅಪೇಕ್ಷೆಯಂತೆ ಮನೆ, ಮಠ, ಮಂದಿರ, ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ ಪಾದುಕಾ ದಿಗ್ವಿಜಯ ರಥಯಾತ್ರೆ ಮಂಗಳೂರನ್ನು ತಲುಪಿದೆ. ಈ ಪಾದುಕೆ ಆರಾಧಿಸಲ್ಪಟ್ಟ ಸ್ಥಳಗಳಲ್ಲಿ ಶ್ರೀಗಳ ಕೃಪೆಯಿಂದ ಭಕ್ತರ ಏಳಿಗೆಯ ವಿವಿಧ ದೃಷ್ಣಾಂತಗಳು ನಮ್ಮ ಕಣ್ಣಮುಂದಿರುವುದೇ ದಿವ್ಯ ಪಾದುಕೆಯ ಮಹತ್ವಕ್ಕೆ ಶ್ರೇಷ್ಟ ಉದಾಹರಣೆಗಳಾಗಿವೆ.

ಇನ್ನು ಪರಿಸರ ಉಳಿಸಿ, ಬೆಳೆಸುವಲ್ಲಿ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಕೊಡುಗೆ ಸಾಕಷ್ಟಿದೆ. ಅದಕ್ಕೆ ಅವರ ಅನುಗ್ರಹದಿಂದ ಕೇರಳ, ಕರ್ನಾಟಕ, ಮಹಾರಾಷ್ಟ್ರ, ಹರಿದ್ವಾರದಲ್ಲಿ ನಿರ್ಮಾಣವಾಗಿರುವ ಫಲೋದ್ಯಾನಗಳೇ ಸಾಕ್ಷಿ. ಅವರ ಪರಿಸರ ಕಾಳಜಿಯನ್ನು ಸ್ಮರಿಸುವ ಮತ್ತು ಇಂದಿನ ಪೀಳಿಗೆಗೆ ಪರಿಸರದ ಮಹತ್ವ ತಿಳಿಸಲು ಮನೆಮನೆಗಳಲ್ಲಿ ಗಿಡ ನೆಡುವ ಅಭಿಯಾನವನ್ನು ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಅನುಗ್ರಹಿಸಿದ ಪರಿಣಾಮ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸವಿನೆನಪಿಗಾಗಿ ಫಲ ನೀಡುವ ಗಿಡಗಳನ್ನು ಕಳೆದ ಒಂದು ವರ್ಷದಲ್ಲಿ ಸುಮಾರು 65 ಸಾವಿರದಷ್ಟು ವಿವಿಧ ದೇವಸ್ಥಾನ, ಸಂಘ ಸಂಸ್ಥೆಗಳ ಮೂಲಕ ಸಮಾಜದ ನಾಗರಿಕರಿಗೆ ವಿತರಿಸಲಾಗಿದೆ. ನಾಗರಿಕರು ಅದನ್ನು ನೆಟ್ಟು ಬೆಳೆಸುತ್ತಿದ್ದಾರೆ.

ಇನ್ನು ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ವಿಷ್ಣು ಸಹಸ್ರನಾಮ ಪಠಣ ಅಭಿಯಾನವನ್ನು ನಡೆಸಲು ಸಮಾಜ ಬಾಂಧವರಿಗೆ ಅನುಗ್ರಹಿಸಿ ಸುಮಾರು ಒಂದು ಲಕ್ಷ ವಿಷ್ಣು ಸಹಸ್ರನಾಮ ಪಠಣವಾಗಿದ್ದು, ಕಳೆದ ಎಪ್ರಿಲ್ ನಲ್ಲಿ ಹರಿದ್ವಾರದಲ್ಲಿ ಬೃಹತ್ ಯಾಗದ ಮೂಲಕ ಅದು ಸಂಪನ್ನವಾಗಿದೆ. ಎಪ್ರಿಲ್ ನಲ್ಲಿ ಜನ್ಮಶತಮಾನೋತ್ಸವದ ಪ್ರಯುಕ್ತ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ವಿವಿಧ ಹೋಮ, ಹವನಗಳು, ಶ್ರೀಗಳ ವೃಂದಾವನಕ್ಕೆ ಗಂಧಲೇಪನ ಸಹಿತ ಅನೇಕ ಕಾರ್ಯಕ್ರಮಗಳು ನಡೆದಿವೆ.
ಇನ್ನು ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆದೇಶದಂತೆ ಮಂಗಳೂರಿನಲ್ಲಿ ಅವರ ಮೊಕ್ಕಾಂ ಸಮಯದಲ್ಲಿ ದಂಪತಿ ಪೂಜೆ, ಕುಮಾರಿ ಪೂಜೆ, ವಟು ಪೂಜೆ ನಡೆದು ಸಾವಿರಾರು ಜನ ಭಾಗವಹಿಸಿ ಧನ್ಯರಾಗಿದ್ದಾರೆ.

ಕೋಟೇಶ್ವರದಲ್ಲಿ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ಅವಧಿಯಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ಅಹೋರಾತ್ರಿ 100 ದಿನಗಳ ತನಕ ನಿರಂತರ ಭಜನಾ ಕಾರ್ಯಕ್ರಮಗಳು ನಡೆದವು. ದೇಶದ ಸುಮಾರು 250 ಕ್ಕೂ ಹೆಚ್ಚು ಭಜನಾ ಮಂಡಳಿಗಳು ಇದರಲ್ಲಿ ಭಾಗವಹಿಸಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿವೆ.
ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ದಶಮಾನೋತ್ಸವದ ಅಂಗವಾಗಿ ಹರಿದ್ವಾರದ ವ್ಯಾಸಾಶ್ರಮದಲ್ಲಿ ವೃಂದಾವನಕ್ಕೆ ಕ್ಷೀರಾಭೀಷೇಕ, ಸೀಯಾಳಾಭಿಷೇಕ, ವಿಶೇಷ ಪವಮಾನ, ವೈದಿಕ ವೃಂದದಿಂದಲೇ ಕೋಟಿ ಗಾಯತ್ರಿ ಯಜ್ಞ ನಡೆದಿದೆ.

ಮಂಗಳೋತ್ಸವದ ಪೂರ್ವಭಾವಿಯಾಗಿ ಜನವರಿ 5 ರಂದು ಕರ್ನಾಟಕ, ಕೇರಳದಿಂದ ಹೊರೆಕಾಣಿಕಾ ಸೇವಾ ಸಮರ್ಪಣೆ ನಭೂತೋ ಎಂಬಂತೆ ನಡೆದಿದೆ. ದೇಶದ ವಿವಿದೆಡೆಗಳಿಂದ ವ್ಯಾಸಧ್ವಜ ಸಂಕೀರ್ತನಾ ಪಾದಯಾತ್ರೆ ಮಂಗಳೂರಿಗೆ ಆಗಮಿಸುತ್ತಿದ್ದು, ಅದರಲ್ಲಿ ಕೂಡ ಆಯಾ ಊರಿನ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನು
ಜನ್ಮಶತಮಾನೋತ್ಸವ ಪ್ರಯುಕ್ತ ಮಂಗಳೂರು ಹಾಗೂ ಕೋಟೇಶ್ವರದಲ್ಲಿ ನೂರು ಗಾಯಕ, ಗಾಯಕಿಯರು, ಸಂಗೀತ ವಾದನನೊಂದಿಗೆ ಏಕವೇದಿಕೆಯಲ್ಲಿ ಹಾಡಿದ ಶತಸ್ಮರಣ ಶತನಮನ ಕಾರ್ಯಕ್ರಮ, ಮಂಗಳೂರಿನಲ್ಲಿ ನಡೆದ ನೂರು ಜನ ಭರತನಾಟ್ಯ ಕಲಾವಿದೆಯರಿಂದ ಶತಸ್ಮರಣ ನೃತ್ಯ ನಮನ, ಕಾಪುವಿನಲ್ಲಿ ನಡೆದ ಶತಸ್ಮರಣ ಶತಕಲಾವಿದ ಕಲಾರಾಧನ, ಶತವಾದ್ಯನಮನ, ಶತಬಾಲಭಜನ ಹೀಗೆ ಹಲವು ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿವೆ.

ಜನವರಿ 11 ರಂದು ಭಾನುವಾರ ಜನ್ಮಶತಾಬ್ದಿಯ ಮಂಗಳೋತ್ಸವ ನಡೆಯಲಿದ್ದು, ಮಧ್ಯಾಹ್ನ 3.30 ಕ್ಕೆ ಶ್ರೀ ಕಾಶೀಮಠ ಸಂಸ್ಥಾನದ ಕೊಂಚಾಡಿಯಲ್ಲಿರುವ ಶಾಖಾಮಠಕ್ಕೆ ಊರ, ಪರವೂರ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಅಲ್ಲಿಂದ ಭಜನಾ ಸಂಕೀರ್ತನಾ ವ್ಯಾಸಧ್ವಜ ಮತ್ತು ಸ್ವಾಮೀಜಿಯವರ ಪಾದುಕಾ ದಿಗ್ವಿಜಯ ಪಾದಯಾತ್ರೆ ಆರಂಭವಾಗಲಿದೆ. ಕೊಂಚಾಡಿಯಿಂದ ಮೇರಿಹಿಲ್, ಯೆಯ್ಯಾಡಿ, ಕೆಪಿಟಿ, ಬಿಜೈ, ಕೆಎಸ್ ಆರ್ ಟಿಸಿ, ಲಾಲ್ ಭಾಗ್, ಎಂ.ಜಿ.ರಸ್ತೆ, ಪಿ.ವಿ.ಎಸ್ ಜಂಕ್ಷನ್ ನಿಂದ ಬಲಕ್ಕೆ ತಿರುಗಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದ ಮೂಲಕ ಕೆನರಾ ಹೈಸ್ಕೂಲ್ ನಲ್ಲಿ ಸೇರಲಿದೆ. ಅಲ್ಲಿ ಹತ್ತು ಸಾವಿರ ಮಂದಿಗೆ ಫಲಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ದಾರಿಯುದ್ದಕ್ಕೂ ಯೆಯ್ಯಾಡಿ, ಬಿಜೈ, ಲಾಲ್ ಭಾಗ್ ನ ನಿರ್ದಿಷ್ಟ ಜಾಗಗಳಲ್ಲಿ ಪಾನೀಯದ ವ್ಯವಸ್ಥೆ ಮಾಡಲಾಗಿದೆ.
ಈ ಪಾದಯಾತ್ರೆಯಲ್ಲಿ ವಿವಿಧ ಊರ ಭಜನಾ ಮಂಡಳಿಗಳು ದೇವರ, ಸ್ವಾಮೀಜಿಯವರ ಭಜನೆಯನ್ನು ಹಾಡುತ್ತಾ, ಪಾದಯಾತ್ರೆಯಲ್ಲಿ ಸಾಗಲಿವೆ. ಚೆಂಡೆ, ಬ್ಯಾಂಡ್ ಸೆಟ್, ದೇವರ, ಮಹಾಪುರುಷರ ವೇಷಭೂಷಣಗಳನ್ನು ಧರಿಸಿದ ಮಕ್ಕಳ ಟ್ಯಾಬ್ಲೋಗಳು, ವೇದಘೋಷ, ವಾದ್ಯಗಳೊಂದಿಗೆ ಸ್ವಾಮೀಜಿಯವರ ಭಾವಚಿತ್ರ ಇರುವ ಟ್ಯಾಬ್ಲೋ, ಸ್ವಾಮೀಜಿಯವರ ಪಾದುಕೆ ಇರುವ ಟ್ಯಾಬ್ಲೋ ಸಹಿತ ವಿವಿಧ ಕಲಾಪ್ರಕಾರಗಳು ಪಾದಯಾತ್ರೆಯ ಶೋಭೆಯನ್ನು ಹೆಚ್ಚಿಸಲಿವೆ. ಕೆನರಾ ಹೈಸ್ಕೂಲ್ ನಲ್ಲಿ ಭಕ್ತರು ಆಹಾರ ಸೇವಿಸಿದ ಬಳಿಕ ಪಾದಯಾತ್ರೆ ಡೊಂಗರಕೇರಿ, ನ್ಯೂಚಿತ್ರಾ, ಶ್ರೀನಿವಾಸ ಥಿಯೇಟರ್, ಸ್ವದೇಶಿ ಸ್ಟೋರ್ ತಲುಪಲಿದೆ. ಈ ಸಂದರ್ಭದಲ್ಲಿ ಪಾದಯಾತ್ರೆಯಲ್ಲಿ ಕಾಶೀಮಠಾಧೀಶರಾದ ಪರಮಪೂಜ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿ ಇರಲಿದೆ. ಸ್ವದೇಶಿ ಸ್ಟೋರ್ ಬಳಿಯಿಂದ ಸ್ವರ್ಣ ಲಾಲಕಿಯಲ್ಲಿ ದೇವರೊಂದಿಗೆ ಪಾದಯಾತ್ರೆ ಶ್ರೀ ವೆಂಕಟರಮಣ ದೇವಸ್ಥಾನ ತಲುಪಲಿದೆ. ಅಲ್ಲಿ ಮಂಗಳೋತ್ಸವದ ಸಭಾ ಕಾರ್ಯಕ್ರಮ ನಡೆಯಲಿದೆ.

ಮಂಗಳೋತ್ಸವ ಸಭಾ ಕಾರ್ಯಕ್ರಮ: ಜನವರಿ 11 ರಂದು ರಾತ್ರಿ 8.30 ರಿಂದ ಮಂಗಳೋತ್ಸವದ ಸಭಾ ಕಾರ್ಯಕ್ರಮದಲ್ಲಿ ಕಾಶೀಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಹಿರಿಯ ಯತಿವರೇಣ್ಯರೂ, ಮಹಾತಪಸ್ವಿಗಳಾದ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುಣಗಾನದೊಂದಿಗೆ ಆರ್ಶೀವಚನ ನೀಡಲಿದ್ದಾರೆ. ಈ ಸಮಯದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಪಾರ್ಕಿಂಗ್ ವ್ಯವಸ್ಥೆ: ಕೊಂಚಾಡಿಯಿಂದ ಆರಂಭವಾಗುವ ಪಾದಯಾತ್ರೆಯಲ್ಲಿ ಭಾಗವಹಿಸುವವರು ತಮ್ಮ ವಾಹನಗಳನ್ನು (ಬಸ್ಸು, ಕಾರು, ಜೀಪು, ವ್ಯಾನ್, ದ್ವಿಚಕ್ರವಾಹನ) ಕೊಂಚಾಡಿ ಕಾಶೀಮಠದ ಬಳಿಯಿರುವ ಕೆನರಾ ವಿಕಾಸ್ ಕಾಲೇಜಿನ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ಇನ್ನು ಕೊಂಚಾಡಿ ಕಾಶೀಮಠದ ಬಳಿ ಜನರನ್ನು ಇಳಿಸಿ, ಹಂಪನಕಟ್ಟೆಯ ಬಳಿಯಿಂದ ಮೂಲ್ಕಿ ಸುಂದರರಾಮ್ ಶೆಟ್ಟಿ ರಸ್ತೆಯ ಮೂಲಕ ಎಲೋಶಿಯಸ್ ಕಾಲೇಜಿನ ಗೇಟ್ ನಂಬರ್ 1 ಒಳಗೆ ಹಾಗೂ ಗೇಟ್ ಸಿ ಒಳಗೆ ಪಾರ್ಕ್ ಮಾಡಬಹುದು. ಇನ್ನು ಕಾರುಗಳನ್ನು ಕೊಡಿಯಾಲ್ ಬೈಲ್ ಎಸ್ ಡಿಸಿಸಿ ಬ್ಯಾಂಕಿನ ಪಕ್ಕದಲ್ಲಿರುವ ಎಲೋಶಿಯಸ್ ಕಾಲೇಜಿನ ಗೇಟ್ ಮೂಲಕ ಹೋಗಿ ಲೊಯಲಾ ಸಭಾಂಗಣದ ಮೈದಾನದಲ್ಲಿ ಪಾರ್ಕಿಂಗ್ ಮಾಡಬಹುದು. ಇನ್ನು ಕೊಡಿಯಾಲ್ ಬೈಲ್ ನಲ್ಲಿರುವ ಬೆಸೆಂಟ್ ಕಾಲೇಜಿನಲ್ಲಿಯೂ ಬಸ್, ಕಾರುಗಳನ್ನು ಪಾರ್ಕಿಂಗ್ ಮಾಡಬಹುದು. ಕೆನರಾ ವಿಕಾಸ್ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ಮಾಡಿದ ವಾಹನಗಳನ್ನು ರಾತ್ರಿ 10 ಗಂಟೆಯ ಬಳಿಕ ಸಿಟಿಪಾಯಿಂಟ್, ಪಾಸ್ ಪೋರ್ಟ್ ಆಫೀಸಿನ ಬಳಿ ತಂದು ನಿಲ್ಲಿಸಬೇಕು. ಎಲೋಶಿಯಸ್, ಬೆಸೆಂಟ್ ನಲ್ಲಿ ಪಾರ್ಕಿಂಗ್ ಮಾಡಿದ ವಾಹನಗಳು ಅಲ್ಲಿಯೇ ಇದ್ದು ಭಕ್ತಾದಿಗಳು ಅಲ್ಲಿಗೆ ತೆರಳಿ ತಾವು ಆಗಮಿಸಿದ ವಾಹನಗಳ ಮೂಲಕ ತೆರಳಬೇಕು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಈ ವ್ಯವಸ್ಥೆಯನ್ನು ಪಾಲಿಸಿ ಸಹಕರಿಸಬೇಕಾಗಿ ವಿನಂತಿ.

ರಾತ್ರಿ ಭೋಜನ ಪ್ರಸಾದದ ವ್ಯವಸ್ಥೆ: ಊರ, ಪರವೂರ ಭಕ್ತರಿಗೆ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ರಾತ್ರಿ 8.30 ರ ಬಳಿಕ ಮಹಾಮಾಯಾ ದೇವಸ್ಥಾನದ ಬಳಿ, ಉಮಾಮಹೇಶ್ವರ ದೇವಸ್ಥಾನದ ಬಳಿ, ಭವಂತಿ ಸ್ಟ್ರೀಟ್ ನಲ್ಲಿರುವ ಹಿಂದಿನ ನ್ಯೂ ಮಂಗಳೂರು ಹೆಲ್ತ್ ಕೇರ್ ಸೆಂಟರ್ ಜಾಗಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಅದನ್ನು ಸ್ವೀಕರಿಸಬೇಕಾಗಿ ವಿನಂತಿ.

ಮಾಧ್ಯಮ ಗೋಷ್ಟಿಯಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ, ಮೊಕ್ತೇಸರ ಸಿಎ ಜಗನ್ನಾಥ್ ಕಾಮತ್, ಪ್ರಮುಖರಾದ ಕೋಟೇಶ್ವರ ದಿನೇಶ್ ಕಾಮತ್, ವಾಸುದೇವ್ ಕಾಮತ್, ರಘುವೀರ್ ಭಂಡಾರಕಾರ್, ಟಿ. ಗಣಪತಿ ಪೈ, ಪ್ರಶಾಂತ್ ಪೈ ಹಾಗೂ ಮುಖಂಡರು ಉಪಸ್ಥಿತರಿದ್ದರು.

Share News
Exit mobile version