ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಹೆಚ್ಚು ಅನುದಾನವನ್ನು ಬಿಡುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸಲಾಗುವುದು, ಕಾಂಗ್ರೆಸ್ ಸರಕಾರ ದಲಿತರ ಅಭಿವೃದ್ದಿಗೆ ಕಟಿಬದ್ದವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ವಿಟ್ಲದಲ್ಲಿ ಸುಮಾರು ಒಂದು ಕೋಟಿ ರೂ ವೆಚ್ಚದ ಅಂಬೇಡ್ಕರ್ ಭವನಕ್ಕೆ ಸಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಈಗಾಗಲೇ ೭೫ ಲಕ್ಷ ಅನುದಾನ ಮಂಜೂರಾಗಿದೆ, ಮುಂದಿನ ದಿನಗಳಲ್ಲಿ ಬಾಕಿ ಅನುದಾನ ಬಿಡುಗಡೆಯಾಗಲಿದೆ. ಈ ಭಾಗದ ದಲಿತ ಸಮುದಾಯದ ಬಹಳ ವರ್ಷಗಳ ಬೇಡಿಕೆಯಾಗಿದ್ದ ಅಂಬೇಡ್ಕರ್ ಭವನದ ಕನಸನ್ನು ನನಸು ಮಾಡಲಾಗಿದೆ. ನೂತನವಾಗಿ ನಿರ್ಮಾಣವಾಗಲಿರುವ ಅಂಬೇಡ್ಕರ್ ಭವನ ದಲಿತ ಹಾಗೂ ಇತರೆ ಸಮುದಾಯದ ಕಾರ್ಯಗಳಿಗೂ ಬಳಕೆಯಾಗಲಿ ಎಂದು ಹೇಳಿದರು.
ನೂತನ ಅಂಬೇಡ್ಕರ್ ಭವನಕ್ಕೆ ವಿಟ್ಲ ಪ್ರವಾಸಿ ಮಂದಿರದ ಬಳಿ ಜಾಗ ಕಾಯ್ದಿರಿಸಲಾಗಿದೆ ಆದರೆ ಈಜಾಗ ಅತ್ಯಂತ ಕಡಿಮೆಯಾಗಿದೆ, ಇಲ್ಲಿ ಭವನ ನಿರ್ಮಾಣವಾದರೆ ಪಾರ್ಕಿಂಗ್ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು ಒಕ್ಕೆತ್ತೂರಿನಲ್ಲಿ ರುವ ಸರಕಾರಿ ಜಾಗದಲ್ಲಿ ನಿರ್ಮಾಣ ಮಾಡುವ ಬಗ್ಗೆ ಆಲೋಚನೆ ಇದ್ದು ಅಲ್ಲಿ ಜಾಗದ ಕೊರತೆ ಇದ್ದಲ್ಲಿ ನಿಗಧಿತ ಸ್ಥಳದಲ್ಲೇ ಭವನದ ನಿರ್ಮಾಣವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಡಿಸಿಸಿ ಕಾರ್ಯದರ್ಶಿ ರಮನಾಥ ವಿಟ್ಲ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ, ಪುತ್ತೂರು ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ದಲಿತ ಸೇವಾ ಸಮಿತಿ ಜಿಲ್ಲಾ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ವಿಟ್ಲ ಪಟ್ಟಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಅಧ್ಯಕ್ಷ ಕರುಣಾಕರ್ ನಾಯಿತೊಟ್ಟು, ಶ್ರೀನಿವಾಸ್ ಶೆಟ್ಟಿ ವಿಟ್ಲ, ಪಟ್ಟಣ ಪಂಚಾಯತ್ ಸದಸ್ಯ ಅಶ್ರಫ್, ಶ್ರೀನಿವಾಸ್ ನಾಯಕ್, ಅಣ್ಣಪ್ಪ ಪುತ್ತೂರು, ಚಂಧ್ರಶೇಖರ, ಗೋಪಾಲ ನೇರಳಕಟ್ಟೆ,ಮೀನಾಕ್ಷಿ, ವಿಮಲ, ಮಂಜುಳಾ ಕೊಡಿಪ್ಪಾಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸುದರ್ಶನ್ ಪಡಿಯಾರ್ ಮೊದಲಾದವರು ಉಪಸ್ಥಿತರಿದ್ದರು. ರಾಮಣ್ಣ ಪಿಲಿಂಜ ಸ್ವಾಗತಿಸಿ ವಂದಿಸಿದರು.


