ಪುತ್ತೂರು: ಪುತ್ತೂರಿನಿಂದ ಮಂಗಳೂರಿಗೆ ನಾನ್ ಸ್ಟಾಪ್ ಸರಕಾರಿ ಬಸ್ ಶೀಘ್ರ ಸಂಚಾರ ಆರಂಭ ಮಾಡಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಶಾಸಕರ ಕಚೇರಿಯಲ್ಲಿ ಸೋಮವಾರ ನಡೆದ ಕೆಎಸ್ಆರ್ಟಿಸಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಶಾಸಕರು ತನ್ನ ಕಚೇರಿಯಲ್ಲಿ ಪುತ್ತೂರು ವಿಭಾಗದ ಕೆಎಸ್ಆರ್ಟಿಸಿ ಅಧಿಕಾರಿಗಳ ಸಭೆಯನ್ನು ಕರೆದು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಬಸ್ ಸಂಚಾರದಲ್ಲಿ ಇರುವ ಲೋಪ ದೋಷಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮಳೆಗಾಲ ಮತ್ತು ಶಾಲಾ ಪ್ರಾರಂಭದ ದಿನಗಳಾಗಿರುವ ಕಾರಣ ಶಾಲಾ ಮಕ್ಕಳಿಗೆ ಬಸ್ ಇಲ್ಲದೆ ಯಾವುದೇ ತೊಂದರೆಗಳುಂಟಾದಲ್ಲಿ, ಬಸ್ ಕೊರತೆಯಾದಲ್ಲಿ ತನ್ನ ಗಮನಕ್ಕೆ ತರಬೇಕು ಎಂದು ಶಾಸಕರು ತಿಳಿಸಿದರು.

ಪುತ್ತೂರಿನಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್ಗೆ ನಾನ್ ಸ್ಟಾಪ್ ಎಕ್ಸ್ಪ್ರೆಸ್ ಬಸ್ ಸೇವೆ ಶೀಘ್ರ ಆರಂಭವಾಗಲಿದೆ. ಪ್ರಾರಂಭದಲ್ಲಿ ೬ ಬಸ್ಸುಗಳು ಸಂಚಾರ ಆರಂಭಿಸಲಿದೆ. ಪುತ್ತೂರು ಬಸ್ ನಿಲ್ದಾಣದಿಂದ ಹೊರಡುವ ಬಸ್ಸು ಎಲ್ಲೂ ನಿಲುಗಡೆಯಾಗದೆ ನೇರವಾಗಿ ಸ್ಟೇಟ್ ಬ್ಯಾಂಕ್ ನಿಲ್ದಾಣದಲ್ಲೇ ನಿಲುಗಡೆಯಾಗಲಿದೆ. ಈಗ ಇರುವ ಬಸ್ಸು ಅಲ್ಲಲ್ಲಿ ನಿಲುಗಡೆ ಇರುವ ಕಾರಣ ನೇರವಾಗಿ ಮಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಬಸ್ಸು ತಲುಪುವಾಗ ತಡವಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಬಳಿಕ , ಸಾರ್ವಜನಿಕರ ಅನುಕೂಲಕ್ಕೆ ಹೊಸ ಬಸ್ ಸೇವೆಯನ್ನು ಪ್ರಾರಂಭ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಒಂದು ಗಂಟೆಯಲ್ಲಿ ಮಂಗಳೂರಿಗೆ
ಹೊಸ ಎಕ್ಸ್ಪ್ರೆಸ್ ಪುತ್ತೂರಿನಿಂದ ಹೊರಟು ಒಂದು ಗಂಟೆಯೊಳಗೆ ಮಂಗಳೂರು ತಲುಪಲಿದೆ. ಇದಕ್ಕಾಗಿ ಹೊಸ ಬಸ್ಸುಗಳು ಬರಲಿದೆ ಎಂದು ಶಾಸಕರು ಅಶೋಕ್ ರೈ ತಿಳಿಸಿದರು.