ಮಂಗಳೂರು ಸೆ 22:ಪ್ರಸಿದ್ದ ಮಂಗಳೂರು ದಸರಾ ಹಬ್ಬಕ್ಕೆ ಇಡೀ ನಗರವು ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡಿದ್ದು ನಗರದ ಪಿವಿಎಸ್ ವೃತ್ತದ ಬಳಿ ನವರಾತ್ರಿಯ ಮೊದಲನೇ ದಿನದಂದು ಶಾಸಕ ವೇದವ್ಯಾಸ ಕಾಮತ್ ರವರು ದೀಪಾಲಂಕಾರವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು, ಮಂಗಳೂರು ದಸರಾ ನಮ್ಮ ಜಿಲ್ಲೆಯ ಹೆಮ್ಮೆಯ ಸಂಕೇತವಾಗಿದ್ದು ದೇಶ ವಿದೇಶಗಳಿಂದ ಭಕ್ತರನ್ನು, ಪ್ರವಾಸಿಗರನ್ನು ಸೆಳೆಯುವ ಇಂತಹ ಹಬ್ಬದ ಸಂದರ್ಭದಲ್ಲಿ ಇಡೀ ನಗರಕ್ಕೆ ಪಾಲಿಕೆ ವತಿಯಿಂದಲೇ ದೀಪಾಲಂಕಾರಗೊಳ್ಳಬೇಕು ಎಂದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಶೇಷವಾಗಿ ಚಿಂತನೆ ನಡೆಸಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಇದಕ್ಕೆ ಅಂದಿನ ಬಿಜೆಪಿ ಆಡಳಿತದ ಪಾಲಿಕೆಯ ಮೇಯರ್, ಕಾರ್ಪೊರೇಟರ್, ಸ್ಥಾಯಿ ಸಮಿತಿ ಸದಸ್ಯರು, ಜಿಲ್ಲಾಧ್ಯಕ್ಷರು, ಹೀಗೆ ಎಲ್ಲರೂ ಒಕ್ಕೊರಲಿನಿಂದ ಸಹಕಾರವನ್ನು ನೀಡಿದ್ದರು. ವರ್ಷಕ್ಕೆ ಸುಮಾರು 50ರಿಂದ 60 ಲಕ್ಷದವರೆಗೆ ವೆಚ್ಚವಾಗುವ ಈ ದೀಪಾಲಂಕಾರದಿಂದಾಗಿ ದೇವಸ್ಥಾನಗಳಿಗೆ ಇದುವರೆಗೆ ಸುಮಾರು ಮೂರುವರೆ ಕೋಟಿ ಉಳಿತಾಯವಾದಂತಾಗಿದೆ. ಇಂದು ಮಂಗಳಾದೇವಿ, ಉರ್ವ ಮಾರಿಗುಡಿ, ಕಾರ್ ಸ್ಟ್ರೀಟ್, ಡೊಂಗರಕೇರಿ, ಹೀಗೆ ಎಲ್ಲೆಡೆ ದಸರಾ ಸಂದರ್ಭದಲ್ಲಿ ದೀಪಾಲಂಕಾರವನ್ನು ಕಂಡಾಗ ಮನಸ್ಸಿಗೆ ಅತ್ಯಂತ ಖುಷಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಪೂರ್ಣಿಮಾ, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಸುಧೀರ್ ಶೆಟ್ಟಿ ಕಣ್ಣೂರು, ಪ್ರವೀಣ್ ನಿಡ್ಡೆಲ್, ಜಯಕುಮಾರ್, ಪೂರ್ಣಿಮಾ ರಾವ್, ಮನೋಹರ್ ಕದ್ರಿ, ಕಿಶೋರ್ ಕೊಟ್ಟಾರಿ, ಲೀಲಾವತಿ ಪ್ರಕಾಶ್, ಸಂದೀಪ್ ಗರೋಡಿ, ಶೈಲೇಶ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.