ಮಂಗಳೂರು: ಭಾರತದ ಮುಕುಟಮಣಿ ಎನ್ನಿಸಿರುವ ಕಾಶ್ಮೀರದಲ್ಲಿ ಪ್ರವಾಸಕ್ಕಾಗಿ ತೆರಳಿದ್ದ ಅಮಾಯಕ ನಾಗರಿಕರನ್ನು ಹತ್ಯೆ ಮಾಡಿದ ಉಗ್ರಗಾಮಿಗಳ ಕೃತ್ಯ ಅತ್ಯಂತ ಖಂಡನೀಯ, ಯಾವುದೇ ತಪ್ಪೆಸಗದವರ ಮೇಲೆ ಏಕಾಏಕಿ ಗುಂಡಿಟ್ಟು ಕೊಂದಿರುವುದು ಮಾನವತೆಗೆ ಕಳಂಕ ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ.ಪೀಟರ್ ಪಾವ್ಲ್ ಸಾಲ್ಡನ್ಹಾ ಅವರು ಖೇದ ವ್ಯಕ್ತಪಡಿಸಿದ್ದಾರೆ.
ರಜೆಯಲ್ಲಿ ಕುಟುಂಬಗಳು, ಮಹಿಳೆಯರು ಮಕ್ಕಳ ಸಹಿತ ಕಾಶ್ಮೀರ ಪಹಲ್ಗಾಮ್ಗೆ ಪ್ರವಾಸ ತೆರಳಿದ್ದರು. ಅಲ್ಲಿ ಮುಖ್ಯವಾಗಿ ಪುರುಷರನ್ನೇ ಗುರಿಯಾಗಿಸಿ ಉಗ್ರರು 26 ಮಂದಿಯ ತಲೆಗೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇಂತಹ ಪಾಪಕೃತ್ಯ ಯಾವುದೇ ನಾಗರಿಕರು ಒಪ್ಪುವಂಥದ್ದಲ್ಲ.
ಜೀವ ಕಳೆದುಕೊಂಡವರಿಗೆ ಚಿರಶಾಂತಿ ಲಭಿಸಲಿ, ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ. ಮೃತರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ.
ಇದಕ್ಕೆ ಕಾರಣರಾದ ಯಾರನ್ನೂ ಬಿಡದೆ ಸರಕಾರ ಕ್ರಮ ಜರಗಿಸುವಂತೆ ಆಗ್ರಹಿಸುವುದಾಗಿ ಬಿಷಪ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.