ಮಂಗಳೂರು: ಕಳೆದ ಕೆಲವು ದಿನಗಳಿಂದ ಪಾಲ್ದನೆ ಸಮೀಪದ ನೆಕ್ಕರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದ್ದ ಬೃಹತ್ ಗಾತ್ರದ ಚಿರತೆಯು ಅಂತಿಮವಾಗಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.

ನೆಕ್ಕರೆ ಮತ್ತು ಆಸುಪಾಸಿನ ಜನವಸತಿ ಪ್ರದೇಶಗಳಲ್ಲಿ ಚಿರತೆಯು ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯರು ಭಯಭೀತರಾಗಿದ್ದರು. ಈ ಬಗ್ಗೆ ಸಾರ್ವಜನಿಕರು ಸ್ಥಳೀಯ ಮಾಜಿ ಮೇಯರ್ ಹಾಗೂ ಮಾಜಿ ಕಾರ್ಪೊರೇಟರ್ ಭಾಸ್ಕರ್ ಕೆ. ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಭಾಸ್ಕರ್ ಕೆ. ಅವರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಸ್ಥಳ ಪರಿಶೀಲನೆ ನಡೆಸಿ ಬೋನು ಇರಿಸುವಂತೆ ಒತ್ತಾಯಿಸಿದ್ದರು.
ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆಯು ಕೆಲರಾಯ್ ಕ್ರಾಸ್ ನೆಕ್ಕರೆ ಪದವು ಎಂಬಲ್ಲಿ ಬೋನು ಅಳವಡಿಸಿತ್ತು. ನಿನ್ನೆ ರಾತ್ರಿ ಚಿರತೆಯು ಬೋನಿನೊಳಗೆ ಸೆರೆಯಾಗಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದೆ.
ಸಾರ್ವಜನಿಕರ ಶ್ಲಾಘನೆ:
ಸಕಾಲದಲ್ಲಿ ಸ್ಪಂದಿಸಿ ಅರಣ್ಯ ಇಲಾಖೆಯ ಮೂಲಕ ಕಾರ್ಯಾಚರಣೆ ನಡೆಸಲು ಸಹಕರಿಸಿದ ಮಾಜಿ ಮೇಯರ್ ಭಾಸ್ಕರ್ ಕೆ. ಅವರ ಕಾರ್ಯವೈಖರಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅರಣ್ಯ ಇಲಾಖೆಯ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಈ ಭಾಗದ ಜನರ ಆತಂಕ ದೂರವಾಗಿದ್ದು, ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಸೆರೆಹಿಡಿಯಲಾದ ಚಿರತೆಯನ್ನು ಅರಣ್ಯ ಇಲಾಖೆಯು ಸುರಕ್ಷಿತವಾಗಿ ಪೀಲಿಕುಳ ಅಥವಾ ಸೂಕ್ತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದೆ.