• Home  
  • ಮಂಗಳೂರು ದಸರಾ ಮೆರವಣಿಗೆ ಟ್ಯಾಬ್ಲೋ ಮುಖ್ಯಸ್ಥರು, ಪೊಲೀಸ್ ಅಧಿಕಾರಿಗಳ ಸಭೆ ಡಿಜೆಗೆ ಅವಕಾಶವಿಲ್ಲ
- DAKSHINA KANNADA - HOME

ಮಂಗಳೂರು ದಸರಾ ಮೆರವಣಿಗೆ ಟ್ಯಾಬ್ಲೋ ಮುಖ್ಯಸ್ಥರು, ಪೊಲೀಸ್ ಅಧಿಕಾರಿಗಳ ಸಭೆ ಡಿಜೆಗೆ ಅವಕಾಶವಿಲ್ಲ

ಮಂಗಳೂರು ದಸರಾ ಮಹೋತ್ಸವದ ವೈಭವದ ಮೆರವಣಿಗೆ ಅ.2ರಂದು ನಡೆಯಲಿದ್ದು, ಇದಕ್ಕೆ ಬೇಕಾದ ವ್ಯವಸ್ಥೆಗಳು ಬಹುತೇಕ ಪೂರ್ಣವಾಗಿದೆ. ವರ್ಷಂಪ್ರತಿಯಂತೆ ಮೆರವಣಿಗೆ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ದಸರಾ ಮಹೋತ್ಸವ ಮೆರವಣಿಗೆ ಹಿನ್ನಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ಶುಕ್ರವಾರ ಟ್ಯಾಬ್ಲೋ ಮುಖ್ಯಸ್ಥರು ಮತ್ತು ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಮೆರವಣಿಗೆಯಲ್ಲಿ ದೇಶ-ವಿದೇಶದಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ರಾಜ್ಯದ ವಿವಿಧ ಕಡೆಯಿಂದ ಕಲಾತಂಡಗಳು, ವಾದ್ಯ ತಂಡಗಳು, ಭಜನಾ ತಂಡಗಳು, 60ಕ್ಕೂ ಅಧಿಕ ಟ್ಯಾಬ್ಲೋಗಳು ಭಾಗವಹಿಸಲಿವೆ. ಸರ್ಕಾರದ ನಿರ್ದೇಶನ ಪಾಲಿಸಿಕೊಂಡು ಮೆರವಣಿಗೆ ಸುಸೂತ್ರವಾಗಿ ನಡೆಸಬೇಕಾಗಿದೆ ಎಂದರು.
ನಗರ ಅಪರಾಧ ಮತ್ತು ಸಂಚಾರ ವಿಭಾಗದ ಪೊಲೀಸ್ ಆಯುಕ್ತ ರವಿಶಂಕರ್ ಮಾತನಾಡಿ, ಮಂಗಳೂರು ದಸರಾ ಮೆರವಣಿಗೆ ಸಂಬಂಧಪಟ್ಟಂತೆ ಈಗಾಗಲೇ ಇಲಾಖೆ ನಿರ್ದೇಶನ ನೀಡಿದ್ದು, ಅದನ್ನು ಪಾಲಿಸಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸಬೇಕು. ದಸರಾ ಉತ್ಸವ, ಮೆರವಣಿಗೆ ಯಶಸ್ಸಿಗೆ ನಮ್ಮ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ನಗರ ಕೇಂದ್ರ ಉಪವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಮಾತನಾಡಿ, ಮೆರವಣಿಗೆಯಲ್ಲಿ ಭಾಗವಹಿಸುವ ವಾಹನಗಳ ಇನ್ಶೂರೆನ್ಸ್ ಸೇರಿದಂತೆ ಎಲ್ಲ ದಾಖಲೆಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳುವುದು ಕಡ್ಡಾಯ ಎಂದರು.
ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ನಜ್ಮಾ ಫಾರೂಕಿ ಮಾತನಾಡಿ, ಮೆರವಣಿಗೆ ವೇಳೆ ಅಗತ್ಯವಿರುವ ಕಡೆ ಸಂಚಾರ ವ್ಯತ್ಯಯ ಮಾಡಲಾಗುವುದು. ಮೆರವಣಿಗೆ ಸಾಗುವ ಹಾದಿಯಲ್ಲಿ ಹಾಗೂ ಸಂಪರ್ಕ ರಸ್ತೆಯ ಕೆಲವೊಂದು ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ನಿಷೇಧಿಸಲಾಗಿದೆ. ವಾಹನ ಪಾರ್ಕಿಂಗ್‌ಗೆ 11 ರಸ್ತೆಗಳನ್ನು ಗುರುತಿಸಲಾಗಿದೆ ಎಂದರು.
ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್. ಜೈರಾಜ್ ಸೋಮಸುಂದರಂ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ಸಂತೋಷ್ ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ಲೀಲಾಕ್ಷ ಕರ್ಕೇರಾ, ಬಂದರು ಇನ್‌ಸ್ಪೆಕ್ಟರ್ ಅಜ್ಮತ್ ಅಲಿ ಉಪಸ್ಥಿತರಿದ್ದರು.

————–
ರಾಜ್ಯದ ಕಲಾತಂಡಗಳು ಆಗಮನ
ವೈಭವದ ಮಂಗಳೂರು ದಸರಾ ಮೆರವಣಿಗೆಗೆ ಈ ಬಾರಿಯೂ ರಾಜ್ಯದ ಹಲವು ಜಿಲ್ಲೆಗಳಿಂದ ಕಲಾತಂಡಗಳು ಆಗಮಿಸಲಿದ್ದು, ಇದಕ್ಕೆ ಬೇಕಾದ ವ್ಯವಸ್ಥೆ ಈಗಾಗಲೇ ಮಾಡಲಾಗಿದೆ ಎಂದು ಕ್ಷೇತ್ರದ ಅಧ್ಯಕ್ಷ ಎಚ್. ಜೈರಾಜ್ ಸೋಮಸುಂದರಂ ತಿಳಿಸಿದರು. ಡಿಜೆಗೆ ಅವಕಾಶವಿಲ್ಲ, ಮೆರವಣಿಗೆ ತಂಡಗಳು ಓಪನ್ ಜೀಪ್ ಬಳಸುವಂತಿಲ್ಲ, ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳದಲ್ಲಿ ಟ್ಯಾಬ್ಲೋಗಳು ನಿಂತಿರಬೇಕು, ದೇವಸ್ಥಾನ ನಿಗದಿಪಡಿಸಿದ ಕ್ರಮಸಂಖ್ಯೆಯಲ್ಲಿ ಟ್ಯಾಬ್ಲೋ ಜೋಡಣೆಯಾಗಲಿದೆ ಎಂದು ತಿಳಿಸಿದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678