ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 33ನೇ ಕದ್ರಿ ದಕ್ಷಿಣ ವಾರ್ಡಿನ ಮೈದಾನದಿಂದ ಕದ್ರಿ ಕಂಬಳ ಜಂಕ್ಷನ್ ವರೆಗಿನ ರಸ್ತೆಯನ್ನು ಸುಮಾರು 1 ಕೋಟಿ ರೂ. ಅನುದಾನದಲ್ಲಿ ಕಾಂಕ್ರೀಟೀಕರಣಗೊಳಿಸುವ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಶನಿವಾರ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು, “ಈ ಭಾಗದ ರಸ್ತೆ ಅಭಿವೃದ್ಧಿಯು ಬಹಳ ಕಾಲದ ಬೇಡಿಕೆಯಾಗಿತ್ತು. ಪ್ರತಿ ಮಳೆಗಾಲದಲ್ಲಿ ರಸ್ತೆ ಹಾಳಾಗಿ ಸ್ಥಳೀಯರು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಪಾಲಿಕೆಯ ಬಿಜೆಪಿ ಆಡಳಿತದ ಅವಧಿಯಲ್ಲಿ ಈ ಕಾಮಗಾರಿಗೆ ವಿಶೇಷ ಅನುದಾನ ಮೀಸಲಿಡಲಾಗಿತ್ತು. ಕೆಲವು ಕಾರಣಗಳಿಂದ ವಿಳಂಬವಾಗಿದ್ದ ಈ ಯೋಜನೆಗೆ, ನಿಕಟಪೂರ್ವ ಮನಪಾ ಸದಸ್ಯರಾದ ಮನೋಹರ್ ಕದ್ರಿ ಹಾಗೂ ಶಕೀಲಾ ಕಾವ ಅವರ ವಿಶೇಷ ಒತ್ತಾಯದ ಮೇರೆಗೆ ಈಗ ಮರು ಚಾಲನೆ ದೊರೆತಿದೆ” ಎಂದರು.
“ಬಿಜೆಪಿ ಜನಪ್ರತಿನಿಧಿಗಳ ಆಯ್ಕೆಯಿಂದ ಕ್ಷೇತ್ರದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈ ಭಾಗವು ಹೋಟೆಲ್, ವೈದ್ಯಕೀಯ ಸಂಸ್ಥೆಗಳು ಹಾಗೂ ವಸತಿ ಸಮುಚ್ಚಯಗಳಿಂದ ಕೂಡಿದ ಜನನಿಬಿಡ ಪ್ರದೇಶವಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಅತ್ಯುತ್ತಮ ಸ್ಟ್ರೀಟ್ ಲೈಟ್ ಅಳವಡಿಸುವ ಪ್ರಕ್ರಿಯೆಯೂ ಚಾಲನೆಯಲ್ಲಿದೆ,” ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಕಾರ್ಪೊರೇಟರ್ ಸಂದೀಪ್ ಗರೋಡಿ, ಬಿಜೆಪಿ ಪ್ರಮುಖರಾದ ಫೆಡ್ರಿಕ್, ಪಮ್ಮಿ ಕೊಡಿಯಾಲ್ ಬೈಲ್, ವೆಂಕಟೇಶ್, ವೇಣುಗೋಪಾಲ್ ಶೆಟ್ಟಿ, ಹೇಮಾನಂದ್, ಯಶವಂತ್, ತಾರನಾಥ್ ಹಾಗೂ ವಾರ್ಡಿನ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.