ವಿಟ್ಲ: ಮಾಣಿಲ ಗ್ರಾಮದ ಬಿರ್ಕಪು ನಿವಾಸಿ ಜಯರಾಮ ಪೂಜಾರಿ ಹಾಗೂ ಯಶೋಧಾ ದಂಪತಿಯ ಪುತ್ರ ಗೌತಮ್ ಚಿಕಿತ್ಸೆಗೆ ಸಹೃದಯಿಗಳು ಮಿಡಿದಿದ್ದು, 15.5 ಲಕ್ಷ ರೂ. ಸಂಗ್ರಹವಾಗಿದೆ. ನೆರವಾದ ಎಲ್ಲರಿಗೂ ಕುಟುಂಬ ಕೃತಜ್ಞತೆ ಸಲ್ಲಿಸಿದೆ.

ದೀಪಾವಳಿಯ ಪೂರ್ವ ತಯಾರಿಯ ಸಮಯದಲ್ಲಿ ಹಳೆ ಪಟಾಕಿ ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಪಟಾಕಿ ಸಿಡಿದು ಗೌತಮ್ ನ ಎರಡೂ ಕೈಗಳಿಗೆ ಗಂಭೀರ ಗಾಯಗಳಾಗಿತ್ತು. ಆತನ ಚಿಕಿತ್ಸೆಗೆ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ 12 ಲಕ್ಷ ರೂ. ಅಗತ್ಯವಿದೆ ಎಂದಿದ್ದರು. ಬಡಕುಟುಂಬಕ್ಕೆ ಆ ಮೊತ್ತ ಸಂಗ್ರಹ ಅಸಾಧ್ಯವಾಗಿತ್ತು.
ಊರಿನ ಪ್ರಮುಖರು ಸೇರಿಕೊಂಡು ಸಾಮಾಜಿಕ ಚಿಂತಕ ವೀಡಿಯೋ ಮೂಲಕ ಅನೇಕರಿಗೆ ನೆರವಾಗಿದ್ದ ಫಯಾಝ್ ಮಡೂರು ಅವರನ್ನು ಸಂಪರ್ಕಿಸಿ ವೀಡಿಯೋ ಮೂಲಕ ನೆರವು ಯಾಚಿಸಿದ್ದರು. ಅದರಂತೆ ಗ್ರಾಮಸ್ಥರು, ಸುತ್ತಲಿನ ಊರಿನವರು ಪರವೂರಿನವರು ಸೇರಿದಂತೆ ಅನೇಕ ಸಹೃದಯಿಗಳು ೫೦೦, ೧೦೦೦, ೨೦೦೦, ೫೦೦೦ ಇತ್ಯಾದಿ ಮೊತ್ತ ನೀಡಿ ನೆರವಾಗಿದ್ದಾರೆ. ಶನಿವಾರ ಹಣ ಒಟ್ಟು ಸೇರಿಸುವ ಗುರಿ ಹೊಂದಲಾಗಿತ್ತು. ಶನಿವಾರದ ಅಂತ್ಯಕ್ಕೆ 15.5 ಲಕ್ಷ ರೂ. ಸಂಗ್ರಹವಾಗಿದೆ. ನೆರವು ನೀಡಿದ ಪ್ರತೀಯೊಬ್ಬರಿಗೂ ಕೂಡ ಜಯರಾಮ ಪೂಜಾರಿ ಹಾಗೂ ಯಶೋಧಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.